ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಕಾಮುಕರ ಕೀಟಲೆ
ಬೆಂಗಳೂರು, ಜನವರಿ 1: ಬೆಂಗಳೂರಿನಲ್ಲಿ ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆ ಮಾಡುತ್ತಿದ್ದ ಯುವತಿಯರ ಮೇಲೆ ಕೆಲ ಕಾಮುಕರು ಕೀಟಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲದಲ್ಲಿ ಕಾಮುಕರು ಯುವತಿಯರನ್ನು ಚುಡಾಯಿಸುತ್ತಿರುವುದು ಹಾಗೂ ಯುವತಿಯರಿಂದ ಒದೆ ತಿಂದಿರುವುದು ಸಿಸಿಟಿವಿಗಳಲ್ಲಿ ಸೆರೆ ಸಿಕ್ಕಿದೆ. ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಇದರಿಂದ ಮುಂದಿನ ವರ್ಷ ಹೊಸ ವರ್ಷಾಚರಣೆಯನ್ನು ಎಂಜಿ ರಸ್ತೆ ಸುತ್ತಮುತ್ತ ಕೈ ಬಿಡಬೇಕು ಎಂಬ ಕೂಗು ಸರ್ಕಾರದ ಕಡೆಯಿಂದ ಕೇಳಿ ಬರುತ್ತಿದೆ.
ಎಲ್ಲೆಲ್ಲಿ ಕಾಮುಕರ ಕೀಟಲೆ?
ಎಂ ಜಿ ರಸ್ತೆಯಲ್ಲಿ ಯುವಕನೊಬ್ಬ ಯುವತಿಗೆ ಮುತ್ತು ಕೊಡಲು ಹೋಗಿರುವುದು ಸೆರೆಯಾಗಿದೆ. ಚರ್ಚ್ ಸ್ಟ್ರೀಟ್ ನ ಎಂಪೈರ್ ಹೋಟೆಲ್ ಬಳಿ ಕಾಮುಕನೊಬ್ಬ ಯವತಿಯನ್ನು ಹಿಂದುಗಡೆಯಿಂದ ಸ್ಪರ್ಶಿಸಿ ಹೊಡೆತ ತಿಂದಿದ್ದಾನೆ. ಇದೇ ರಸ್ತೆಯಲ್ಲಿ ಯುವಕನೊಬ್ಬ ಯುವತಿಯನ್ನು ಚುಡಾಯಿಸಿದಾಗ ಹೊಡೆದಾಟ ನಡೆದಿದೆ. ಕೋರಮಂಗಲದ ಫೋರಂ ಮಾಲ್ ಬಳಿ ಕೂಡ ಇಂತಹದೇ ಘಟನೆ ನಡೆದಿದೆ. ಮಹಿಳೆಯರ ಮೇಲೆ ಕೀಟಲೆ ಮಾಡಿದವರನ್ನು ಬೆಂಗಳೂರು ಪೊಲೀಸರು ಹುಡುಕುತ್ತಿದ್ದಾರೆ.
ಕುಡಿದು ವಾಹನ ಏರಿದವರಿಗೆ ದಂಡ ಹಾಕಿ ಮತ್ತಿಳಿಸಿದ ಬೆಂಗಳೂರು ಪೊಲೀಸರು
ಕಾಮುಕರನ್ನು ಬಂಧಿಸುತ್ತೇವೆ
'ಹೊಷ ವರ್ಷಾಚರಣೆ ವೇಳೆ ಮಹಿಳೆಯರ ಜೊತೆ ಅಸಭ್ಯ ವರ್ತನೆ ತೋರಿದವರನ್ನು ಸಿಸಿಟಿವಿ ಹಾಗೂ ಪೊಲೀಸರು ಮಾಡಿರುವ ವಿಡಿಯೋಗಳ ಮೂಲಕ ಪತ್ತೆ ಹಚ್ಚಲಾಗುತ್ತಿದೆ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುತ್ತೇವೆ' ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೇಳಿದ್ದಾರೆ. 'ಹೊಸ ವರ್ಷಾಚರಣೆ ಹೆಸರಿನಲ್ಲಿ ಅಸಭ್ಯವಾಗಿ ನಡೆದುಕೊಳ್ಳುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆರೋಪಿಗಳು ಎಂತವರೇ ಆದರೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ' ಎಂದು ಹೇಳಿದ್ದಾರೆ.
ಪರ್ಯಾಯ ಸ್ಥಳ
'ಪ್ರತಿ ವರ್ಷ ಎಂ ಜಿ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಹೆಚ್ಚು ಜನ ಸೇರುತ್ತಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದನ್ನೇ ಕಿಡಗೇಡಿಗಳು ದುರುಪಯೋಗಪಡಿಸಿಕೊಂಡು ವಿಕೃತಿ ಮೆರೆಯುತ್ತಾರೆ. ಎಂ ಜಿ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ಕೈ ಬಿಟ್ಟು ಬೇರೆ ಸ್ಥಳದಲ್ಲಿ ಆಯೋಜನೆ ಮಾಡಬಹುದು. ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ ತೋರಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ' ಎಂದು ಸಚಿವರಾದ ಆರ್ ಅಶೋಕ ಹಾಗೂ ವಿ ಸೋಮಣ್ಣ ಹೇಳಿದ್ದಾರೆ.
ವರದಿ ತರಿಸಿಕೊಳ್ಳುತ್ತೇವೆ
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಾನಮತ್ತ ಯುವಕರಿಂದ ಕೆಲ ಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ. ಒಂದೆರಡು ಘಟನೆ ಹೊರತಪಡಿಸಿದರೇ ಎಲ್ಲ ಕಡೆ ಶಾಂತಿಯುತವಾದ ವರ್ಷಾಚರಣೆ ಕಾರ್ಯಕ್ರಮಗಳು ನಡೆದಿವೆ. ಇದಕ್ಕಾಗಿ ನಮ್ಮ ಪೊಲೀಸರು ತುಂಬಾ ಶ್ರಮ ವಹಿಸಿದ್ದರು. ಈ ಬಗ್ಗೆ ವರದಿ ತರಿಸಿಕೊಂಡು ದುಷ್ಕೃತ್ಯ ಮಾಡಿದ ಕಿಡಗೇಡಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.