ಶಾಕ್ ಆಯ್ತಾ, ಶಾಕ್ ಆಗ್ಲೇ ಬೇಕೂಂತ ತಾನೇ ಟ್ರಾಫಿಕ್ ಫೈನ್ ಹಾಕಿರೋದು..
"ಇಷ್ಟೊಂದು ಫೈನ್ ಹಾಕ್ತೀರಾ, ಅದಕ್ಕೆ ಸರಿಯಾದ ರೋಡ್ ಕೊಡ್ರಿ, ಎಲ್ಲಾ ಕಡೆ ಟಾರ್ ಕಿತ್ಕೊಂಡು ಬಂದಿದೆ" ಎಂದು ಟ್ರಾಫಿಕ್ ಪೊಲೀಸರ ಜೊತೆ, ಸಾರ್ವಜನಿಕರು ತಗಾದೆ ತೆಗೆದರೆ ಅವರಾದಾರೂ ಏನು ಮಾಡಿಯಾರು?
ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸುವ ದುಬಾರಿ ದಂಡ, ರಾಜಧಾನಿ ಬೆಂಗಳೂರಿನಲ್ಲಿ ಗುರುವಾರದಿಂದ (ಸೆ 5) ಆರಂಭವಾಗಿದೆ. ತಾಂತ್ರಿಕ ಸಮಸ್ಯೆಯಿಂದ ಸೆಪ್ಟಂಬರ್ ಒಂದರ ಬದಲು, ಸೆಪ್ಟಂಬರ್ ಐದರಿಂದ ಇದು ಆರಂಭವಾಗಿದೆ. ಹೊಸ ತಂತ್ರಾಶದ ಸಾಫ್ಟವೇರ್ ಎಲ್ಲಾ ಪಿಡಿಎ ಆಪ್ ಗಳಲ್ಲಿ ಅಪ್ಡೇಟ್ ಆಗಿದೆ.
ಕಳೆದ ಎರಡ್ಮೂರು ತಿಂಗಳಿನಿಂದಲೂ, ಹೊಸ ಟ್ರಾಫಿಕ್ ಉಲ್ಲಂಘನೆಯ ದಂಡದ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹೊರಬೀಳುತ್ತಿದ್ದರೂ, ವಾಹನ ಚಾಲಕರು ಇದರ ಬಗ್ಗೆ ಅಷ್ಟು ತಲೆಕೆಡಿಸಿಕೊಂಡ ಹಾಗೇ ಕಾಣಿಸುವುದಿಲ್ಲ. ಕಾರಣ, ಹೊಸ ಫೈನ್ ಸಿಸ್ಟಂ ಜಾರಿಗೆ ಬಂದ ದಿನ ಪೊಲೀಸರಿಗೆ ಆದ 'ಭರ್ಜರಿ ಬೋಣಿ'.
ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!
ಭಾರತಾದ್ಯಂತ ಏಕರೂಪ ದಂಡ ಪದ್ದತಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ರಾಜಸ್ಥಾನದ ಸರಕಾರ ಮಾತ್ರ ಸಹನೀಯ ಎನ್ನಿಸುವಂತೆ ಇದರ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಮೊದಲ ಕೆಲವು ದಿನಗಳಲ್ಲಿ, ಹಳೆಯ ದಂಡವನ್ನು ವಿಧಿಸಿ, ಹೊಸ ಫೈನಿನ ಬಗ್ಗೆ ವಿವರಿಸಿ, ನಂತರ ಅದನ್ನು ಜಾರಿಗೆ ತರಲು ನಿರ್ಧರಿಸಿದೆ.
ದಂಡದ ರಸೀದಿ ನೋಡಿ ಬೆಚ್ಚಿಬಿದ್ದ ವಾಹನ ಸವಾರರು
ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ಪೊಲೀಸರು ಅಡ್ಡಹಾಕಿ, ದಂಡದ ರಸೀದಿಯನ್ನು ನೀಡಿದಾಗ, ಅದನ್ನು ನೋಡಿ ಅವರೆಲ್ಲಾ ಬೆಚ್ಚಿಬಿದ್ದಿದ್ದಾರೆ. ಹೆಲ್ಮೆಟ್ ಹಾಕಿಕೊಳ್ಳದವರು, ವಾಹನಕ್ಕೆ ವಿಮೆ ಇಲ್ಲದೇ ಇರುವುದು, ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುವುದು, ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನ ನಿಲ್ಲಿಸಿದ್ದಕ್ಕೆ.. ಹೀಗೆ, ಹಲವು ಟ್ರಾಫಿಕ್ ಉಲ್ಲಂಘನೆಗೆ, ಪೊಲೀಸರು ಜಡಾಯಿಸಿದ ಫೈನ್ ನೋಡಿ, ವಾಹನ ಸವಾರರು ಶಾಕ್ ಆಗಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಕಾರು ಖರೀದಿಸಿ
ಇದರ ಜೊತೆಗೆ, ನಗರದ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಮತ್ತೊಂದು ಶಾಕಿಂಗ್ ಸುದ್ದಿಯನ್ನು ಹೇಳಿದ್ದಾರೆ. "ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಕಾರು ಖರೀದಿಸಿ" ಎನ್ನುವ ಹೇಳಿಕೆಯನ್ನು ನೀಡುವ ಮೂಲಕ, ಮನೆ, ಕಚೇರಿ ಬದಿಯಲ್ಲಿ, ಕಾರು ನಿಲ್ಲಿಸಿದರೂ, ಮುಂದಿನ ದಿನಗಳಲ್ಲಿ ಅದನ್ನೂ ನಿಷೇಧಿಸಲಾಗುವುದು ಎನ್ನುವ ಸೂಚನೆಯನ್ನು ನೀಡಿದ್ದಾರೆ.
ಟಾಫ್ರಿಕ್ ಫೈನ್ ಕಟ್ಟೋಕೆ ಸಾಲ ಕೊಡ್ತಿರಾ?
ಒಂದೇ ದಿನ ಸುಮಾರು 3ಸಾವಿರಕ್ಕೂ ಕೇಸ್, ಮೂವತ್ತು ಲಕ್ಷ ದಂಡ
ಗುರುವಾರ ಒಂದೇ ದಿನ ಸುಮಾರು ಮೂರು ಸಾವಿರಕ್ಕೂ ಹೆಚ್ಚು, ಟ್ರಾಫಿಕ್ ಉಲ್ಲಂಘನೆ ಕೇಸ್, ಬೆಂಗಳೂರಿನ ವಿವಿಧ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೊದಲ ದಿನವೇ ಮೂವತ್ತು ಲಕ್ಷಕ್ಕೂ ಹೆಚ್ಚು ದಂಡವನ್ನು ಸಂಗ್ರಹಿಸಲಾಗಿದೆ. "ದುಬಾರಿ ದಂಡದಿಂದ, ಸಾರ್ವಜನಿಕರು ಟ್ರಾಫಿಕ್ ನಿಯಮವನ್ನು ಪಾಲಿಸುತ್ತಾರೆ" ಎನ್ನುವ ಆಶಾಭಾವನೆಯಲ್ಲಿ ಪೊಲೀಸರಿದ್ದಾರೆ.
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಅದಕ್ಕೆ ದಂಡ ಪಾವತಿಸಿ. ಟ್ರಾಫಿಕ್ ಪೊಲೀಸರಿಗೆ ಲಂಚ ನೀಡಬೇಡಿ
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕಮಿಷನರ್ ಭಾಸ್ಕರ್ ರಾವ್, "ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಅದಕ್ಕೆ ದಂಡ ಪಾವತಿಸಿ. ಟ್ರಾಫಿಕ್ ಪೊಲೀಸರಿಗೆ ಲಂಚ ನೀಡಬೇಡಿ. ಲಂಚ ತೆಗೆದುಕೊಳ್ಳುವುದು, ಕೊಡುವುದು ಎರಡೂ ಅಪರಾಧ. ಒಂದು ವೇಳೆ, ಟ್ರಾಫಿಕ್ ಪೊಲೀಸರು ಲಂಚ ಕೇಳಿದರೆ, ಟ್ರಾಫಿಕ್ ನಿಯಂತ್ರಣ ಕೊಠಡಿಗೆ ದೂರು ನೀಡಿ" ಎಂದು ಹೇಳಿದ್ದಾರೆ.
'ಒಳ್ಳೆ ಕಮಾಯಿ' ಎನ್ನುವ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆ
ಹೊಸ ದಂಡ ಪದ್ದತಿಯಿಂದ, ಪೊಲೀಸರಿಗೂ 'ಒಳ್ಳೆ ಕಮಾಯಿ' ಎನ್ನುವ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗೆ, ಪರೋಕ್ಷವಾಗಿ ಆಯುಕ್ತರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಗುರುವಾರ, ದುಬಾರಿ ಶುಲ್ಕದ ಬಗ್ಗೆ ಮಾಹಿತಿಯಿಲ್ಲದ ಸಾರ್ವಜನಿಕರು, ಹಲವು ಠಾಣಾ ವ್ಯಾಪ್ತಿಯಲ್ಲಿ, ಪೊಲೀಸರ ಜೊತೆ ಜಗಳಕ್ಕಿಳಿಯುವುದು, ಮೋದಿಗೆ ಹಿಡಿಶಾಪ ಹಾಕುವ ಕೆಲಸವನ್ನು ಮಾಡುತ್ತಿದ್ದರು.
ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ
"ದುಬಾರಿ ಶುಲ್ಕ ವಿಧಿಸಿ, ಆ ಹಣದಿಂದ ನಮಗೇನೂ ಆಗಬೇಕಾಗಿಲ್ಲ. ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ" ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವಾಹನ ಸವಾರರು ಗಮನಿಸಬೇಕಾದ ಇನ್ನೊಂದು ಅಂಶವೇನಂದರೆ, ಹೊಸ ಟ್ರಾಫಿಕ್ ಫೈನ್ ವಿಚಾರದಲ್ಲಿ, ಪೊಲೀಸರ ಜೊತೆ ವಾಗ್ಯುದ್ದಕ್ಕೆ ಇಳಿದರೆ, ಅದಕ್ಕೂ ಎರಡು ಸಾವಿರ ರೂಪಾಯಿ ದಂಡ ವಿಧಿಸುವ ಕಾನೂನು ಜಾರಿಯಾಗಿದೆ. ಒಟ್ನಲ್ಲಿ ಸದ್ಯ ದೇಶಾದ್ಯಂತ ನೂತನ ಟ್ರಾಫಿಕ್ ದಂಡದ ವಿಚಾರ ಚರ್ಚೆಯ ಕೇಂದ್ರದಲ್ಲಿದೆ. ಮತ್ತು, ಇದರ ಪರಿಣಾಮ ಏನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.