ಹೊಸ ತಲೆಮಾರಿನ ಹೋರಾಟಗಾರರು, ಗಟ್ಟಿ ದನಿ, ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್ 9: ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಶುಕ್ರವಾರದ ಬಂದ್ ನಲ್ಲಿ ರಸ್ತೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಹೊಸ ತಲೆಮಾರಿನ ಮುಖಗಳು. 20ರಿಂದ 35 ವಯಸ್ಸಿನ ಗಂಟಲಲ್ಲಿ ಕೂಗುವ ತಾಕತ್ತು, ಕಣ್ಣುಗಳಲ್ಲಿ ಆಕ್ರೋಶ ತುಂಬಿ, ಧ್ವನಿಯಲ್ಲಿ ಅದನ್ನ ಗಟ್ಟಿಯಾಗಿ ಹೊರಹಾಕುತ್ತಿರುವುದು ಬಹುಪಾಲು ಇದೇ ವಯಸ್ಸಿನವರು.
ಪ್ರಮುಖ ರಸ್ತೆಗಳಿರಲಿ ಸಣ್ಣ-ಪುಟ್ಟ ರಸ್ತೆಗಳಲ್ಲೂ ಟೈರ್ ಗಳಿಗೆ ಬೆಂಕಿ ಇಟ್ಟಿದ್ದಾರೆ. ನಿತ್ಯವೂ ತೆರಳುವ ಹೋಟೆಲ್, ಅಂಗಡಿ ಹಾಗೂ ಪಾರ್ಕ್ ಗಳ ಮುಂಭಾಗ ಅಭ್ಯಾಸದಂತೆಯೇ ಬಂದು ಕುಳಿತವರಿದ್ದಾರೆ. ಶ್ರೀನಿವಾಸ ನಗರದ ರಸ್ತೆ ದುರಸ್ತಿಯೊಂದು ಇದೇ ಸಂದರ್ಭ ಎಂಬಂತೆ ತುರ್ತಾಗಿ ನಡೆಯುತ್ತಿತ್ತು. ಅಲ್ಲಲ್ಲಿ ಹೂವು ಮಾರುತ್ತಿದ್ದವರ ಮುಂದೆ ನಗುತ್ತಿದ್ದ ಮಲ್ಲಿಗೆ ಮುಡಿ ಅರಸುವಂತಿತ್ತು.

ವಿದ್ಯಾಪೀಠ ಸರ್ಕಲ್ ನಲ್ಲಿ ದೊಡ್ಡ ಗುಂಪೊಂದು ಜಯಲಲಿತಾ ಪ್ರತಿಕೃತಿ ಮಾಡಿ, ಅದಕ್ಕೆ ಕೊಂಬು ಬರೆದು ಭೂತ ದಹನಕ್ಕೆ ಹೊರಟಿತ್ತು. ಹತ್ತು-ಹನ್ನೆರಡರ ವಯಸ್ಸಿನ ಹುಡುಗರ ಬಾಯಲ್ಲೂ ತಮಿಳುನಾಡಿನ ವಿರುದ್ಧ ಧಿಕ್ಕಾರದ ಘೋಷಣೆ ಕೇಳಿಬರುತ್ತಿತ್ತು. ಎನ್.ಆರ್.ಕಾಲೋನಿಯ ಕೃಷ್ಣರಾವ್ ಪಾರ್ಕ್ ಬಳಿ 9ರ ನಂತರವೂ ವಾಕ್ ಮಾಡುತ್ತಿದ್ದವರು, ಗೇಟ್ ಬಳಿ ನಿಂತು ಚರ್ಚೆಯಲ್ಲಿದ್ದವರು ಕಂಡುಬಂದರು.
ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಆಯೋಜಿಸಿದ್ದ ಗಣೇಶ ಪೂಜೆ ದ್ವಾರಕನಾಥ ಭವನದಲ್ಲಿ ಮುಂಚೆಯೇ ನಿಗದಿಯಾಗಿತ್ತು. ಇಂದು ಗಣಪತಿ ಹೋಮ ನಡೆಯುತ್ತಿದ್ದರೆ, ಬೆರಳಿಕೆಯಷ್ಟು ಜನ ಮಾತ್ರ ಕಾಣುತ್ತಿದ್ದದ್ದು ಬಿಟ್ಟರೆ ಖಾಲಿಖಾಲಿ ಕುರ್ಚಿಗಳೇ ಇದ್ದವು.

ಮುಖ್ಯವಾದ ಸರ್ಕಲ್ ಗಳಲ್ಲಿ ಪಹರೆ ಕಾಯುತ್ತಿದ್ದ ಪೊಲೀಸರಿಗೆ ಸಣ್ಣ-ಪುಟ್ಟ ಟೀ ಅಂಗಡಿಯವರು ಅರ್ಧ ಬಾಗಿಲು ತೆರೆದು, ಟೀ-ಕಾಫಿ ಪೂರೈಸುತ್ತಿದ್ದರು. ಕೆಲವೆಡೆ ಆಟೋಗಳು ರಸ್ತೆಯಲ್ಲಿ ನಿಂತಿದ್ದರೂ ಜನರೂ ಅತ್ತ ಸುಳಿಯುತ್ತಿರಲಿಲ್ಲ. ಅದರೆ ಕರ್ನಾಟಕದ ಬಾವುಟ ಮಾತ್ರ ಎಲ್ಲೆಡೆ ಕಂಡುಬರುತ್ತಿತ್ತು.












Click it and Unblock the Notifications