ಬೆಂಗಳೂರಿನ ಈ ರಸ್ತೆ ಇನ್ನು ಪುನೀತ್ ರಾಜ್ಕುಮಾರ್ ರಸ್ತೆ
ಬೆಂಗಳೂರು, ಫೆಬ್ರವರಿ 17; ಬೆಂಗಳೂರು ನಗರದ 12 ಕಿ. ಮೀ. ಉದ್ದದ ವರ್ತುಲ ರಸ್ತೆಗೆ ಕನ್ನಡದ ನಟ ದಿವಂಗತ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ನಾಮಕಾರಣ ಮಾಡಲು ಅಧಿಕೃತ ಅನುಮೋದನೆ ಸಿಕ್ಕಿದೆ. ನಿಯಮದಂತೆ ಜನರಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಆದರೆ ಒಬ್ಬರು ಸಹ ವಿರೋಧ ಮಾಡಿಲ್ಲ ಎಂಬುದು ಪುನೀತ್ ಜನಪ್ರಿಯತೆಗೆ ಸಾಕ್ಷಿ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್. ಆರ್. ರಮೇಶ್ ಬಿಬಿಎಂಪಿ ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಮನವಿ ಪತ್ರವನ್ನು ಪುರಸ್ಕರಿಸಿ, ನಿಯಮಾನುಸಾರ ಕಂದಾಯ ಇಲಾಖೆಯ ಜಂಟಿ ಆಯುಕ್ತರು ಸಂಬಧಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿತ್ತು.
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಿಂದ (ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್, ಕದಿರೇನಹಳ್ಳಿ ಪಾರ್ಕ್, ಸಾರಕ್ಕಿ ಸಿಗ್ನಲ್, ಜೆ.ಪಿ.ನಗರ) ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿ. ಮೀ. ಉದ್ದದ ವರ್ತುಲ ರಸ್ತೆಗೆ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ಹೆಸರಿಡಲು ಮನವಿ ಮಾಡಲಾಗಿತ್ತು.

ಈ ರಸ್ತೆಯು ಬೆಂಗಳೂರು ನಗರದ ಎರಡು ಲೋಕಸಭಾ ಕ್ಷೇತ್ರಗಳು, 6 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 14 ಬಿಬಿಎಂಪಿ ವಾರ್ಡ್ಗಳ ಮೂಲಕ ಹಾದುಹೋಗುತ್ತದೆ. ಬಿಬಿಎಂಪಿ ಆಯುಕ್ತರ ಸೂಚನೆಯಂತೆ ಕಂದಾಯ ಇಲಾಖೆಯ ಜಂಟಿ ಆಯುಕ್ತರು ಸಂಬಧಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳು ಕಡತವನ್ನು ಸಿದ್ಧಪಡಿಸಿದ್ದರು.
ಪ್ರಸ್ತಾವನೆಯಂತೆ ಸದರಿ ರಸ್ತೆಯ ನಕ್ಷೆಯನ್ನು ತಯಾರಿಸಿ ಮತ್ತು ಈ ವ್ಯಾಪ್ತಿಯ ಸಾರ್ವಜನಿಕರಿಂದ ಆಕ್ಷೇಪಣೆಗಳ ಮಹಜರ್ ನಡೆಸಿದ ನಂತರ ಸುಮಾರು 700ಕ್ಕೂ ಹೆಚ್ಚು ಮಂದಿ ಹಾಗೂ ಸದರಿ ರಸ್ತೆಗೆ ಹೊಂದಿಕೊಂಡಂತಿರುವ 9 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ರಸ್ತೆಗೆ ಹೆಸರಿಡುವ ಪರವಾಗಿ ಸಹಿ ಮಾಡಿದ್ದರು.
ಯಾರೊಬ್ಬರೂ ಸಹ ವಿರುದ್ಧವಾಗಿ ಸಹಿ ಮಾಡದೇ ಇದ್ದ ಕಾರಣ ಬಿಬಿಎಂಪಿ ಮುಖ್ಯ ಆಯುಕ್ತರ ಟಿಪ್ಪಣಿಯಂತೆ ಮಾನ್ಯ ಆಡಳಿತಾಧಿಕಾರಿಗಳಾದ ರಾಕೇಶ್ ಸಿಂಗ್ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ನಾಮಕಾರಣ ಮಾಡಲು ನಿರ್ಣಯ ಕೈಗೊಂಡು ಅಧಿಕೃತ ಅನುಮೋದನೆ ನೀಡಿದ್ದಾರೆ.
ಬೆಂಗಳೂರಿನ ಗೊರಗುಂಟೆಪಾಳ್ಯದಿಂದ (ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಸಮಾಧಿಗಳು ಇರುವ ರಸ್ತೆ) ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ವರೆಗಿನ ವರ್ತುಲ ರಸ್ತೆಗೆ 2015ರ ಏಪ್ರಿಲ್ 8 ರಂದು ಡಾ. ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಎಂದು ಬಿಬಿಎಂಪಿ ನಾಮಕರಣ ಮಾಡಿದೆ.
ಈಗ ಇದರ ಮುಂದುವರೆದ ಭಾಗವಾಗಿ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ವರೆಗಿನ ವರ್ತುಲ ರಸ್ತೆಗೆ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ನಾಮಕರಣ ಮಾಡಲಾಗುತ್ತಿದೆ.
ಶೀಘ್ರದಲ್ಲೇ 'ಪುನೀತ್ ರಾಜ್ಕುಮಾರ್ ರಸ್ತೆ' ಎಂದು ನಾಮಕರಣ ಮಾಡುವ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಾ. ರಾಜ್ ಕುಟುಂಬ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ.
ವಿಜಯನಗರದ ಕ್ರೀಡಾಂಗಣಕ್ಕೆ ಹೆಸರು; ಕರ್ನಾಟಕದ 31ನೇ ಜಿಲ್ಲೆಯಾದ ವಿಜಯನಗರದ ಜಿಲ್ಲಾ ಕ್ರೀಡಾಂಗಣಕ್ಕೆ ನಟ ದಿ. ಪುನೀತ್ ರಾಜ್ಕುಮಾರ್ ಹೆಸರಿಡಲು ಹೊಸಪೇಟೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಲಾಗಿದೆ.
ಕನ್ನಡ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದಾಗಿ ಮೃತಪಟ್ಟಿದ್ದರು. ಅಭಿಮಾನಿಗಳಿಗೆ ಇದು ಇಂದಿಗೂ ಅರಗಿಸಿಕೊಳ್ಳದ ಸುದ್ದಿಯಾಗಿದೆ. ರಾಜ್ಯದ ಹಲವಾರು ರಸ್ತೆ, ಸರ್ಕಲ್, ಅಂಗಡಿಗಳಿಗೆ ಪುನೀತ್ ರಾಜ್ಕುಮಾರ್ ಹೆಸರು ಇಟ್ಟು ನೆಚ್ಚಿನ ನಟನ ನೆನಪು ಉಳಿಯುವಂತೆ ಮಾಡಿದ್ದಾರೆ ಅಭಿಮಾನಿಗಳು.












Click it and Unblock the Notifications