#NammaBengaluru ಟ್ವಿಟ್ಟರ್ ಟ್ರೆಂಡ್; ರಸ್ತೆ ಸರಿಪಡಿಸಲು ಸರಕಾರಕ್ಕೆ ಏನು ಧಾಡಿ?
ಗಣೇಶ ಚತುರ್ಥಿ ಮುಗಿಸಿರುವ ಬೆಂಗಳೂರಿಗರಿಗೆ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಅನ್ವಯ ಬದಲಾಗಿರುವ ದಂಡಗಳ ಬಗ್ಗೆ ಸಟಕ್ಕನೆ ನೆನಪಾಗಿದೆ. ಮಂಗಳವಾರ ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ #NammaBengaluru ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡ್ ನಲ್ಲಿದೆ. "ಸರಕಾರದಿಂದ ದಂಡ ಹಾಕ್ತೀರಾ ಸರಿ, ಆದರೆ ರಸ್ತೆಗಳು ಇಷ್ಟು ದಟ್ಟ ದರಿದ್ರವಾಗಿದೆಯಲ್ಲಾ ಅದಕ್ಕಾಗಿ ಏನು ಮಾಡ್ತೀರಿ?" ಎಂಬುದೇ ಒಟ್ಟಾರೆ ಧ್ವನಿ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಇಂತಿಷ್ಟು ಅವಧಿಯೊಳಗೆ ಮುಚ್ಚಬೇಕು ಎಂದು ಹೈ ಕೋರ್ಟ್ ನಿಂದ ನಿರ್ದೇಶನ ಬಂದಿತ್ತು. ಬೆಂಗಳೂರಿನ ರಸ್ತೆಯಲ್ಲಿ ಒಂದು ಗುಂಡಿಯನ್ನು ತೋರಿಸಿದರೆ ಒಂದು ಸಾವಿರ ರುಪಾಯಿ ಕೊಡ್ತೀವಿ ಎಂಬ ಹೇಳಿಕೆಯನ್ನು ಬಿಬಿಎಂಪಿಯಿಂದ ನೀಡಲಾಗಿತ್ತು.
ಹೀಗೆ ಒಂದು ಗುಂಡಿಯನ್ನು ತೋರಿಸಿದರೆ ಸಾವಿರ ರುಪಾಯಿ ಈಗ ನೀಡುವುದಾದರೆ, ಬಿಬಿಎಂಪಿಯಿಂದ ಹಣ ನೀಡುವುದಕ್ಕೆ ಅದೇನು ಮಾರಿಕೊಂಡರೂ ಕಡಿಮೆಯೇ. ಬೆಂಗಳೂರಿನ ರಸ್ತೆಗಳ ಸ್ಥಿತಿ ಅಷ್ಟು ಅಧ್ವಾನವಾಗಿದೆ. ಸೆಪ್ಟೆಂಬರ್ ಒಂದರಿಂದ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆ ಅನ್ವಯದ ಹೊಸ ದಂಡದ ಮೊತ್ತವನ್ನು ಜಾರಿಗೆ ತರುವುದಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರಕಾರಕ್ಕೆ ಖಂಡಿತಾ ಆಸಕ್ತಿ ಇರುತ್ತದೆ.

ಆದರೆ, ರಸ್ತೆಗಳ ಕಡೆಗೆ ನೋಡಬೇಕಲ್ಲವಾ? ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂಬುದು ನಾಗರಿಕ ಪ್ರಜ್ಞೆ. ದೊಡ್ಡ ಮೊತ್ತದ ದಂಡ ಹಾಕಿಯೇ ನಿಯಮ ಪಾಲನೆಗೆ ಒತ್ತಡ ತರಬೇಕು ಅನ್ನೋದು ಈಗಿನ ಸರಕಾರದ ಆಲೋಚನೆ. ಹೌದು, ಲಂಚದ ಬಗ್ಗೆ ಕೂಡ ಜನಸಾಮಾನ್ಯರಲ್ಲಿ ಅಂಥದ್ದೇ ಆಲೋಚನೆ ಇದೆ.
ಹಾಗಿದ್ದರೆ ಲಂಚ ತೆಗೆದುಕೊಂಡು ಸಿಕ್ಕಿಬೀಳುವವರಿಗೆ, ಅದು ಯಾವುದೇ ಹುದ್ದೆ ಇರಲಿ, ಅಂಥ ಲಂಚಕೋರರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ತಿದ್ದುಪಡಿ ತಂದುಬಿಟ್ಟರೆ ಬದಲಾವಣೆ ಸಾಧ್ಯ ಇದೆ ಅಲ್ಲವಾ? -ಹೀಗೆ ಪ್ರಶ್ನಿಸುವವರು ಕೂಡ ಬೀದಿಗೆ ಇಬ್ಬರಂತೆ ಸಿಕ್ಕೇ ಸಿಗುತ್ತಾರೆ.
ಜನ ಸಾಮಾನ್ಯರಿಗೆ ಬೇಕಿರುವುದು ಅಭಿವೃದ್ಧಿ. ಮೂಲಸೌಕರ್ಯ. ಗುಂಡು ಸೂಜಿಯಿಂದ ಮೊದಲುಗೊಂಡು ನಿತ್ಯವೂ ಒಂದಲ್ಲ ಒಂದು ವಸ್ತುವಿಗೆ ತೆರಿಗೆ (ಜಿಎಸ್ ಟಿ) ಪಾವತಿಸುವ ಜನರಿಗೆ ಒಂದೊಳ್ಳೆ ರಸ್ತೆ ನಿರ್ಮಾಣ ಮಾಡಿಕೊಡದೆ, ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಅಷ್ಟೇ ಎಂದು ಬೆದರಿಸುವುದು ಎಷ್ಟು ಸರಿ?
ಆದಾಯ ತೆರಿಗೆ (ಇನ್ ಕಂ ಟ್ಯಾಕ್ಸ್) ಪಾವತಿ ಮಾಡುತ್ತಿರುವವರ ಸಂಖ್ಯೆ ಈ ದೇಶದಲ್ಲಿ ಕಡಿಮೆ. ಆದರೆ ನಿತ್ಯವೂ ಖರೀದಿಸುವ ವಸ್ತುಗಳ ಮೇಲೆ ಸರಕಾರಗಳು (ಕೇಂದ್ರ ಮತ್ತು ರಾಜ್ಯ) ವಿಧಿಸುತ್ತಿರುವ ತೆರಿಗೆ ಬಗ್ಗೆ ಕೂಡ ಮಾತನಾಡಬೇಕಲ್ಲ?
ಇನ್ನು ಯಾವುದೇ ವಾಹನ ಖರೀದಿ ಸಂದರ್ಭದಲ್ಲಿ ರೋಡ್ ಟ್ಯಾಕ್ಸ್ (ರಸ್ತೆ ತೆರಿಗೆ) ವಸೂಲಿ ಮಾಡಲಾಗುತ್ತದೆ. ಹದಿನಾರು ಅಥವಾ ಇಪ್ಪತ್ತು ವರ್ಷದ ಅವಧಿಗೋ ಆ ಹಣ ವಸೂಲಿ ಮಾಡಲಾಗುತ್ತದೆ. ಅದರ ಹೊರತಾಗಿಯೂ ಈಗಾಗಲೇ ನಮ್ಮೆಲ್ಲರ ತಲೆ ಮೇಲೆ (ರಾಜಕಾರಣಿಗಳು, ಅದರಲ್ಲೂ ಅಧಿಕಾರಸ್ಥರಿಗೆ ಮತ್ತು ಕೆಲ ಸರಕಾರಿ ಉದ್ಯೋಗಿಗಳಿಗೆ ವಿನಾಯಿತಿ ಇದೆ) ಟೋಲ್ ಎಂಬ ಹೊರೆಯನ್ನು ಹಾಕಲಾಗಿದೆ.
ರಸ್ತೆ ತೆರಿಗೆಯನ್ನು ಪಾವತಿಸಿದ ಮೇಲೂ, ನಿತ್ಯವೂ ಒಂದಲ್ಲ ಒಂದು ವಸ್ತುವಿಗೆ ಜಿಎಸ್ ಟಿ ಕೊಟ್ಟ ಮೇಲೂ ಸರಿಯಾದ ರಸ್ತೆ ನಿರ್ಮಿಸಲು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ ಅಂದರೆ ಇದಕ್ಕಿಂತ ನಾಚಿಕೆಗೇಡಿನ ವಿಷಯ ಇನ್ನೇನಿದೆ?
ಕಲಾವಿದರಾದ ಬಾದಲ್ ನಂಜುಂಡಸ್ವಾಮಿ ಅವರು ಬೆಂಗಳೂರಿನ ರಸ್ತೆಗಳ ಸ್ಥಿತಿಯನ್ನು ತಮ್ಮ ಕಲೆಯ ಮೂಲಕ ತುಂಬ ಚೆನ್ನಾಗಿ ಬಿಂಬಿಸಿದ್ದಾರೆ. ಅದೇ ವೈರಲ್ ಆಗಿ ಈಗ ಟ್ವಿಟ್ಟರ್ ನಲ್ಲಿ #NammaBengaluru ಹ್ಯಾಶ್ ಟ್ಯಾಗ್ ನಲ್ಲಿ ಟ್ರೆಂಡ್ ಆಗುತ್ತಿದೆ. ಅದಕ್ಕೆ ಪ್ರತಿಕ್ರಿಯೆಗಳು ಕೂಡ ದೊಡ್ಡ ಮಟ್ಟದಲ್ಲಿ ಬರುತ್ತಿವೆ.
ಸರಕಾರದಿಂದ ಯಾವುದೇ ನಿಯಮ ತಂದರೂ ವಿರೋಧಿಸಲೇಬೇಕು ಎಂಬ ಧೋರಣೆ ಎಷ್ಟು ತಪ್ಪೋ, ನಮ್ಮ ಹಕ್ಕುಗಳನ್ನು ಕೇಳದೆ, ಪ್ರಶ್ನಿಸದೆ, ಎಲ್ಲವನ್ನೂ ಒಪ್ಪಿಕೊಂಡು ಸುಮ್ಮನಿರುವುದೂ ಅಷ್ಟೇ ತಪ್ಪು. ಬೆಂಗಳೂರಿನದು ಅಷ್ಟೇ ಆಲ್ಲ, ಯಾವುದೇ ಊರಿನ ರಸ್ತೆಯಾದರೂ ಸರಿ, ಮೊದಲಿಗೆ ಹಳ್ಳ- ಕೊಳ್ಳ ಇಲ್ಲದಂತೆ ನಿರ್ಮಿಸಲಿ. ಆ ಮೇಲೆ ಸಂಚಾರ ನಿಯಮವನ್ನು ಈಗಿನದಕ್ಕಿಂತ ಕಠಿಣ ಮಾಡಲಿ, ಯಾರು ಬೇಡ ಅಂತಾರೆ?
ಇಲ್ಲದಿದ್ದರೆ ಸರಕಾರಗಳು ಹಣಕಾಸಿನ ಮುಗ್ಗಟ್ಟಿನಲ್ಲಿ ಇರಬೇಕು. ಆದಾಯಕ್ಕೆ ಹೀಗೂ ಒಂದು ದಾರಿ ಹುಡುಕಿಕೊಂಡು ಇರಬಹುದು ಅಂದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications