Breaking; ನಮ್ಮ ಮೆಟ್ರೋ ತಡೆಗೋಡೆ ಕುಸಿತ, ಅಧಿಕಾರಿಗಳು ನಾಪತ್ತೆ
ಬೆಂಗಳೂರು, ಅಕ್ಟೋಬರ್ 20; ಬೆಂಗಳೂರು ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿದೆ. ನಮ್ಮ ಮೆಟ್ರೋ ತಡೆಗೋಡೆ ಕುಸಿತಗೊಂಡಿದೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಶೇಷಾದ್ರಿಪುರಂ ಸಮೀಪ ಜೆಡಿಎಸ್ ಪಕ್ಷದ ಮುಂಭಾಗದಲ್ಲಿರುವ ನಮ್ಮ ಮೆಟ್ರೋ ತಡೆ ಗೋಡೆ ಭಾರೀ ಮಳೆಗೆ ಕುಸಿದಿದೆ. ಇದರಿಂದಾಗಿ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು, ಬೈಕುಗಳು ಜಖಂಗೊಂಡಿವೆ.
ತಡೆಗೋಡೆ ಪಕ್ಕದಲ್ಲಿದ್ದ 6 ಕಾರುಗಳು, 2 ಬೈಕ್ಗಳಿಗೆ ಹಾನಿಯಾಗಿದೆ. ಆದರೆ ಗೋಡೆ ಕುಸಿತದ ಕುರಿತು ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ರಾತ್ರಿಯೇ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು 10 ಗಂಟೆ ಕಳೆದರೂ ಸ್ಥಳಕ್ಕೆ ಆಗಮಿಸಿಲ್ಲ.

ನಾಗಸಂದ್ರ-ರೇಷ್ಮೆ ಸಂಸ್ಥೆ ನಡುವಿನ ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲುಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಈ ಮಾರ್ಗದಿಂದ ಮುಂದೆ ಮೆಜೆಸ್ಟಿಕ್ ಜಂಕ್ಷನ್ ನಿಲ್ದಾಣವಿದೆ.
ಬುಧವಾರ ರಾತ್ರಿ ಬೆಂಗಳೂರು ನಗರದಲ್ಲಿ ಭಾರೀ ಮಳೆ ಸುರಿದಿದೆ. ಹಂಪಿ ನಗರದಲ್ಲಿ ಅತಿ ಹೆಚ್ಚು ಎಂದರೆ 85 ಮಿ. ಮೀ. ಮಳೆಯಾಗಿದೆ. ಸುಮಾರು 3 ಗಂಟೆಗಳ ಕಾಲ ಸುರಿದ ಮಳೆಗೆ ಶೇಷಾದ್ರಿಪುರಂ ಬಳಿ ನಮ್ಮ ಮೆಟ್ರೋ ತಡೆಗೋಡೆ ಕುಸಿತಗೊಂಡಿದೆ.
ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ವಿಲ್ಸನ್ ಗಾರ್ಡನ್, ವಿಜಯನಗರ, ಬೆಳ್ಳಂದೂರು, ಶಿವಾನಂದ ಸರ್ಕಲ್ ಮುಂತಾದ ಕಡೆ ರಸ್ತೆಗಳು ಜಲಾವೃತಗೊಂಡು ಜನರು ಪರದಾಡಿದರು. ನಗರದ ಬಹುತೇಕ ಅಂಡರ್ಪಾಸ್ಗಳಲ್ಲಿ ನೀರು ನಿಂತಿತ್ತು.
ಮಳೆ ಮುನ್ಸೂಚನೆ; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿಯೂ ಇನ್ನೂ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರಕ್ಕೆ ಇಂದು ಸಹ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications