ಅಟ್ಟ ಏರಿ ಕೂತ ವೆಚ್ಚದ ಭಾರದಲ್ಲಿ ನಮ್ಮ ಮೆಟ್ರೋ ಎಂಬ ಗಜ ಗರ್ಭ...
ಬೆಂಗಳೂರು ಮೆಟ್ರೋ ರೈಲು ಎಂಬುದು ಎಂಥ ಗಜಗರ್ಭ ಎಂಬುದನ್ನು ವಿವರಿಸುವುದಕ್ಕೆ ಈ ಲೇಖನ ಖಂಡಿತಾ ಕೈಮರ ಇದ್ದ ಹಾಗೆ. ಆರು ವರ್ಷಗಳ ಕಾಲ ವಿಳಂಬವಾದ, ಒಂಬತ್ತು ಬಾರಿ ಕೊಟ್ಟಿದ್ದ ಸಮಯಾವಕಾಶ ತಪ್ಪಿಸಿದ ಕುಖ್ಯಾತಿ ಬಿಎಂಆರ್ ಸಿಎಲ್ ಗೆ ಸಲ್ಲುತ್ತದೆ. ವೆಚ್ಚದಲ್ಲಿ ಭಯಂಕರ ಏರಿಕೆ ಆಗಿರುವುದು ಕೂಡ ನೆನಪಿಸಿಕೊಳ್ಳಬೇಕು.
ನೀವು ಇದನ್ನು ನಂಬ್ತೀರೋ ಇಲ್ಲವೋ 2011ರಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಬೇಕಿತ್ತು. ಸಾರ್ವಜನಿಕವಾಗಿಯೇ ಘೋಷಿಸಿದ ಏಳು ಡೆಡ್ ಲೈನ್ ಗಳನ್ನು ಮೀರಲಾಗಿದೆ. ಇತ್ತೀಚಿನದು ಅಂದರೆ ಕಳೆದ ವರ್ಷದ ನವೆಂಬರ್ ನಲ್ಲಿ ಘೋಷಣೆ ಮಾಡಿದ್ದು. ಈ ವಿಳಂಬದ ಕಾರಣಕ್ಕೆ ಪ್ರತಿ ಕಿಲೋಮೀಟರ್ ಗೆ ನೂರಾ ನಲವತ್ನಾಲ್ಕು ಕೋಟಿ ರುಪಾಯಿ ಹೆಚ್ಚು ಖರ್ಚಾಗಿದೆ.
ಕೊಚ್ಚಿ ಮೆಟ್ರೋ V/s ನಮ್ಮ ಮೆಟ್ರೋ: ಒಂದು ಹೋಲಿಕೆ
ಕಳೆದ ಜನವರಿ ಅಂತ್ಯಕ್ಕೆ ಬಿಎಂಆರ್ ಸಿಎಲ್ ಈ ಯೋಜನೆಗೆ ಖರ್ಚು ಮಾಡಿದ್ದು 14,291.28 ಕೋಟಿ ರುಪಾಯಿ. ಈ ಯೋಜನೆಯ ಮೂಲ ಅಂದಾಜು ವೆಚ್ಚ ಅಂತ ಇದ್ದಿದ್ದು 6,395 ಕೋಟಿ ರುಪಾಯಿ. ಆಗ 33 ಕಿಮೀಗೆ ಎಂಬ ಅಂದಾಜಿತ್ತು. ಆ ಯೋಜನೆಗೆ 2006ರಲ್ಲಿ ಒಪ್ಪಿಗೆ ಸಿಕ್ಕಿತು.
ಯೋಜನೆ ಆರಂಭವಾಗಿದ್ದು 2007ರಲ್ಲಿ
ಆದರೆ, ಯೋಜನೆ ಆರಂಭವಾಗಿದ್ದೇ 2007ರಲ್ಲಿ. ಇನ್ನು ಹಲವು ಕೆಲಸಗಳು ಶುರುವಾಗಿದ್ದು 2008ರಲ್ಲಿ. ಕೇಂದ್ರ ಸರಕಾರ ಹೆಚ್ಚುವರಿಯಾಗಿ 9.3 ಕಿಲೋಮೀಟರ್ ಗೆ ಒಪ್ಪಿಗೆ ಕೊಟ್ಟಿದ್ದು 2010ರಲ್ಲಿ. ಆಗ ಮೊದಲ ಹಂತದ ಮೆಟ್ರೋ ವ್ಯಾಪ್ತಿ 42.2 ಕಿಲೋಮಿಟರ್ ಗೆ ವಿಸ್ತರಣೆಯಾಗಿ, ಒಟ್ಟು ಅಂದಾಜು ಮೊತ್ತ 8158 ಕೋಟಿಗೆ ಏರಿಕೆಯಾಯಿತು.
ಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಯ ವೆಚ್ಚ ಹೆಚ್ಚು
ವಿಳಂಬ ಮಾಡಿ, ಮಾಡಿ ವೆಚ್ಚವು ಹೆಚ್ಚುತ್ತಲೇ ಹೋಯಿತು. ಈ ಕಾರಣಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಯ ವೆಚ್ಚ ಹೆಚ್ಚಾಯಿತು. ಜನವರಿ 2011ರಲ್ಲಿ ಯೋಜನಾ ವೆಚ್ಚವು 11609 ಕೋಟಿಗೆ ಬಂದು ನಿಂತಿತು. ಆದರೆ ಸರಕಾರವಾಗಲೀ ಬಿಎಂಆರ್ ಸಿಎಲ್ ಆಗಲೀ ಇತ್ತ ಗಮನ ಕೊಡದೆ ಆ ನಂತರ ಕೂಡ ಎರಡು ಬಾರಿ ದರ ಪರಿಷ್ಕರಣೆ ಆಯಿತು.
ಒಟ್ಟು ಮೊತ್ತ 14405 ಕೋಟಿ ರುಪಾಯಿ
ನಗರಾಭಿವೃದ್ಧಿ ಸಚಿವಾಲಯಕ್ಕೆ ನೀಡಿದ ಮಾಹಿತಿ ಪ್ರಕಾರ ಒಪ್ಪಿಗೆ ಸಿಕ್ಕ ಒಟ್ಟು ಮೊತ್ತ 14405 ಕೋಟಿ ರುಪಾಯಿ. ಇಷ್ಟು ಮೊತ್ತವನ್ನು ಬಿಎಂಆರ್ ಸಿಎಲ್ ಖರ್ಚು ಮಾಡಿರುವ ಸಾಧ್ಯತೆ ಇದ್ದು, ಇನ್ನೂ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಕೆಲಸಗಳು ಬಾಕಿ ಉಳಿದಿವೆ. ಮೆಟ್ರೋಗಾಗಿ ಕೆಲಸ ಮಾಡಿದ ಅಧಿಕಾರಿಗಳೇ ಸಮಸ್ಯೆಗೆ ಕಾರಣ ಬಿಚ್ಚಿಡುತ್ತಾರೆ. ದೆಹಲಿ ಮೆಟ್ರೋ ರೈಲ್ ಕಾರ್ಪೋರೇಷನ್ ಪ್ರೈಮ್ ಅಡ್ವೈಸರ್ ಆಗಿ ಕಳೆದುಕೊಂಡಿದ್ದು ಹಾಗೂ ಇಡೀ ಆಡಳಿತ ವ್ಯವಸ್ಥೆಯ ರಚನೆಯಲ್ಲಿನ ಲೋಪ ಹೊಡೆತ ಕೊಟ್ಟಿದೆ. ಇದು ಎರಡನೇ ಹಂತದಲ್ಲೂ ಮುಂದುವರಿಯಲಿದೆ ಎನ್ನುತ್ತಾರೆ.
ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ
ಇಲ್ಲಿ ಮತ್ತೊಂದು ಮುಖ್ಯ ಸಮಸ್ಯೆ ಇದೆ. ಬಿಎಂಆರ್ ಸಿಎಲ್ ನಲ್ಲಿ ಯಾವುದೇ ಕಾರ್ಯನಿರ್ವಹಣಾ ನಿರ್ದೇಶಕರಿಗೆ ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಎಂಡಿಯನ್ನು ಬದಲಾಯಿಸಿದೆ. ಯಾವುದೇ ಅಧಿಕಾರಿಗೆ ಸನ್ನಿವೇಶಕ್ಕೆ ಹೊಂದುಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಈ ಕಾರಣಕ್ಕೆ ಸಮಯ ಹಾಗೂ ವೆಚ್ಚ ಎರಡೂ ವಿಪರೀತ ಹೆಚ್ಚಾಗಿದೆ.
ಸಾಮರಸ್ಯವೇ ಆಗಿಲ್ಲ
ಇವೆಲ್ಲ ರಂಕಲುಗಳ ಜತೆಗೆ ರಾಜ್ಯದ ಏಜೆನ್ಸಿಗಳು ಹಾಗೂ ಮೆಟ್ರೋ ಅಧಿಕಾರಿಗಳ ಜತೆಗೆ ಸಾಮರಸ್ಯವೇ ಆಗಿಲ್ಲ. ವಿಧಾನಸೌಧದ ಮುಂದಿನ ಅಂಬೇಡ್ಕರ್ ಪುತ್ಥಳಿ ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವೇ ಅದಕ್ಕೆ ಅತ್ಯುತ್ತಮ ಉದಾಹರಣೆ. ಪೂರ್ವ-ಪಶ್ಚಿಮ ಕಾರಿಡಾರ್ ನ ಅತ್ಯಂತ ಮುಖ್ಯ ಅಂಡರ್ ಗ್ರೌಂಡ್ ಯೋಜನೆ ಒಂದು ವರ್ಷ ತಡವಾಯಿತು.
ತೆರಿಗೆದಾರರ ಮೇಲೇ ಹೊರೆ
ಸರಕಾರ ಹಾಗೂ ಬಿಎಂಆರ್ ಸಿಎಲ್ ಎರಡೂ ಕೂತು ಚಿಂತಿಸಬೇಕಿದೆ. ಮೆಟ್ರೋದಂಥ ಯೋಜನೆಗಳ ವೆಚ್ಚ ಈ ಪರಿ ಹೆಚ್ಚಾಗುವುದಕ್ಕೆ ಏನು ಕಾರಣ ಎಂಬುದನ್ನು. ಈ ಹೊರೆ ಯಥಾಪ್ರಕಾರ ತೆರಿಗೆದಾರರ ಮೇಲೇ ಬೀಳುತ್ತದೆ. ಇದರ ತೆಗಳಿಕೆಯನ್ನು ಮುಂದಿನ ಮೂರು ವರ್ಷಗಳ ಕಾಲ ಅಧಿಕಾರಿಗಳು ಕೇಳುತ್ತಲೇ ಇರಬೇಕು. ಮುಂದಿನ ಹಂತದ ಮೇಲೂ ಇದರ ಪರಿಣಾಮ ಆಗುತ್ತದೆ.
ಜೂನ್ ಹದಿನೇಳರಂದು ಮೊದಲ ಹಂತಕ್ಕೆ ಚಾಲನೆ
ಅಂತೂ ಜೂನ್ ಹದಿನೇಳರಂದು ಮೊದಲ ಹಂತದ ಬೆಂಗಳೂರು ಮೆಟ್ರೋಗೆಗೆ ಚಾಲನೆ ದೊರೆಯಲಿದೆ. ಇದೇ ವೇಳೆ ಕೊಚ್ಚಿ ಮೆಟ್ರೋ ಕೂಡ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಅಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿದಿದೆ. ಆತ್ಮವಿಮರ್ಶೆಗೆ ಹಾಗೂ ಹೋಲಿಕೆಗೆ ಇದು ಸೂಕ್ತ ಸಮಯ.