Namma Metro: ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಮಾರ್ಗಕ್ಕಿಲ್ಲ ಮುಕ್ತಿ- ರೈಲು ಸಂಚಾರ ಕಾರ್ಯಾರಂಭ ಮತ್ತೆ ವಿಳಂಬ
ಬೆಂಗಳೂರು, ಸೆಪ್ಟೆಂಬರ್ 14: ಶುಕ್ರವಾರದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಬೆಂಗಳೂರು ಮೆಟ್ರೋದ ನೇರಳೆ ಮಾರ್ಗವು ವಿಳಂಬವಾಗುವ ಸಾಧ್ಯತೆಯಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಿರ್ಮಿಸಿರುವ ಸ್ಟ್ರೆಚ್ಗಳ ಸುರಕ್ಷತೆಯನ್ನು ಮೆಟ್ರೋ ರೈಲು ಸುರಕ್ಷತೆ (ಸಿಎಂಆರ್ಎಸ್) ಆಯುಕ್ತರು ಪರಿಶೀಲನೆ ನಡೆಸಲು ಇನ್ನೂ ಸಾಧ್ಯವಾಗಿಲ್ಲವೆಂದು ವರದಿಗಳು ಹೇಳಿವೆ.
ಈ ಮೊದಲು ಶುಕ್ರವಾರ ಪರಿಶೀಲನೆ ನಡೆಸಲು ನಿರ್ಧರಿಸಲಾಗಿತ್ತು. ಈಗ ಕೆಆರ್ ಪುರಂನಿಂದ ಬೈಯಪ್ಪನಹಳ್ಳಿ ವರೆಗಿನ ಮಾರ್ಗದ ಪರಿಶೀಲನೆಯನ್ನು ಸೆಪ್ಟೆಂಬರ್ 21 ರ ವರೆಗೆ ಮುಂದೂಡಲಾಗಿದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ. ಇದಾದ ಬಳಿಕವೇ ನೇರಳ ಮಾರ್ಗದ ಬಹುನಿರೀಕ್ಷಿತ ವಿಸ್ತರಣೆಯ ಪರಿಶೀಲನೆ ನಡೆಯಲಿದೆ ಎಂದು ತಿಳಿದುಬಂದಿದೆ.

ಕೆಂಗೇರಿ-ಚಲ್ಲಘಟ್ಟ ಮಾರ್ಗದ ಉದ್ಘಾಟನೆ ದಿನಾಂಕವು ಅಕ್ಟೋಬರ್ವರೆಗೆ ಮುಂದೂಡಬಹುದು ಎಂದು ಅಧಿಕಾರಿಗಳು ಹೇಳಿದ್ದರೆ.
ಸಿಎಂಆರ್ಎಸ್ ಸೆಪ್ಟೆಂಬರ್ 21 ರಂದು ಕೆಆರ್ ಪುರಂ - ಬೈಯಪ್ಪನಹಳ್ಳಿ ಮಾರ್ಗವನ್ನು ತಾತ್ಕಾಲಿಕವಾಗಿ ಪರಿಶೀಲಿಸುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಕಾರಿಗಳ ಪ್ರಕಾರ, ಸುಮಾರು ಎರಡು ಕಿಲೋಮೀಟರ್ ಉದ್ದದ ಕೆಂಗೇರಿ ಮಾರ್ಗವನ್ನು ಕೆಆರ್ ಪುರಂ - ಬೈಯಪ್ಪನಹಳ್ಳಿ ಮಾರ್ಗದೊಂದಿಗೆ ಜೋಡಿಸಲಾಗುವುದು. ಇದು ಪ್ರಯಾಣಿಕರಿಗೆ ಭಾರೀ ಅನುಕೂಲ ಮಾಡಿಕೊಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧಿಕಾರಿಗಳು ಚಾಲನೆ ದಿನಾಂಕವನ್ನು ಬಿಡುಗಡೆ ಮಾಡಲಿದ್ದಾರೆ. ಚಾಲನೆಯಾದ ಬಳಿಕ ಸಂಪೂರ್ಣ ನೇರಳೆ ಮಾರ್ಗ ತೆರೆದಂತಾಗುತ್ತದೆ. ಇದು ಬೆಂಗಳೂರು ನಿವಾಸಿಗಳಿಗೆ ಪ್ರಯಾಣವನ್ನು ಗಮನಾರ್ಹವಾಗಿ ಸುಲಭಗೊಳಿಸುತ್ತದೆ. ವಿಸ್ತೃತ ನೇರಳೆ ಮಾರ್ಗದಲ್ಲಿನ ಎಲ್ಲಾ ಸುರಕ್ಷತಾ ಪರಿಶೀಲನೆಗಳನ್ನು ಬಿಎಂಆರ್ಸಿಎಲ್ಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೈಟ್ಫೀಲ್ಡ್-ಚಲ್ಲಘಟ್ಟ ಸಂಪರ್ಕವು ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದ ಭಾಗವಾಗಿದೆ. ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗವು ಸಂಪೂರ್ಣಗೊಂಡ ಬಳಿಕ ದಿನನಿತ್ಯದ ಜನಸಂದಣಿಯಲ್ಲಿ ಗಮನಾರ್ಹ ಹೆಚ್ಚಳವನ್ನು ಬಿಎಂಆರ್ಸಿಎಲ್ ನಿರೀಕ್ಷಿಸಿದೆ. ಈ ಮಾರ್ಗದ ಕಾರ್ಯಾಚರಣೆಯ ನಂತರ ಪ್ರತಿದಿನ 75,000 ಇರುವ ಪ್ರಯಾಣಿಕರ ಸಂಖ್ಯೆ ಸುಮಾರು 100,000 ಪ್ರಯಾಣಿಕರಿಗೆ ಏರುತ್ತದೆ ಎಂದು ಅಂದಾಜಿಸಲಾಗಿದೆ.
ಮಾರ್ಚ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೈಟ್ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ 12.75 ಕಿಲೋಮೀಟರ್ ವ್ಯಾಪ್ತಿಯ ಮೆಟ್ರೊ ಮಾರ್ಗವನ್ನು ಉದ್ಘಾಟಿಸಿದ್ದರು. ಇದು ಪ್ರಸ್ತುತ ಪ್ರತಿದಿನ ಸುಮಾರು 30,000 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ.












Click it and Unblock the Notifications