Breaking; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ
ಬೆಂಗಳೂರು, ಜನವರಿ 12; ಕರ್ನಾಟಕ ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು ಜಾರಿಗೊಳಿಸಿದ್ದ ನಿಯಮಗಳನ್ನು ಜನವರಿ 31ರ ತನಕ ವಿಸ್ತರಣೆ ಮಾಡಿದೆ. ಈ ಹಿನ್ನಲೆಯಲ್ಲಿ ಬಿಎಂಆರ್ಸಿಎಲ್ ಸಹ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಕಳೆದ ಶನಿವಾರ ಮತ್ತು ಭಾನುವಾರ ವಾರಾಂತ್ಯದ ಕರ್ಫ್ಯೂ ಹಿನ್ನಲೆಯಲ್ಲಿ 20 ನಿಮಿಷಗಳ ಅಂತರದಲ್ಲಿ ನಮ್ಮ ಮೆಟ್ರೋ ರೈಲು ಓಡಿಸಲಾಗಿತ್ತು. ಈ ವಾರದಿಂದ ಅದನ್ನು 30 ನಿಮಿಷಗಳಿಗೆ ಏರಿಕೆ ಮಾಡಲಾಗಿದೆ. ವಾರಾಂತ್ಯದ ಕರ್ಫ್ಯೂ ಹಿನ್ನಲೆ ಹೆಚ್ಚು ರೈಲುಗಳು ಸಂಚಾರ ನಡೆಸುವುದಿಲ್ಲ.
ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಪ್ರಯಾಣಿಕರು ರೈಲಿಗಾಗಿ ಮೆಟ್ರೋ ನಿಲ್ದಾಣದಲ್ಲಿ ವಾರಾಂತ್ಯದಲ್ಲಿ 30 ನಿಮಿಷ ಕಾಯುವುದು ಅನಿವಾರ್ಯವಾಗಿದೆ. ಮುಂದಿನ ಆದೇಶದ ತನಕ ವಾರಾಂತ್ಯದಲ್ಲಿ 30 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚಾರ ನಡೆಸಲಿವೆ.

ಹೊಸ ಮಾರ್ಗಸೂಚಿಯನ್ನು ರೈಲುಗಳಲ್ಲಿ ಸೀಟುಗಳು ಲಭ್ಯವಿದ್ದರೆ ಮಾತ್ರ ಪ್ರಯಾಣಿಕರನ್ನು ರೈಲು ನಿಲ್ದಾಣದೊಳಗೆ ಬಿಡಲಾಗುತ್ತದೆ. ಒಂದು ವೇಳೆ ರೈಲಿನಲ್ಲಿ ಸೀಟುಗಳು ಭರ್ತಿಯಾಗಿದ್ದರೆ ಮತ್ತೊಂದು ರೈಲು ಬರುವ ತನಕ ಕಾಯಬೇಕಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.
ಬಿಎಂಆರ್ಸಿಎಲ್ ಆದೇಶ; ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ ತರುವುದೇನೆಂದರೆ ರೈಲುಗಳಲ್ಲಿ ಲಭ್ಯವಿರುವ ಆಸನ ಸಾಮರ್ಥ್ಯದ ಆಧಾರದ ಮೇಲೆ ನಿಲ್ದಾಣಗಳಿಗೆ ಪ್ರಯಾಣಿಕರ ಪ್ರವೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿರುತ್ತದೆ.
ಇದಲ್ಲದೇ ಪ್ರಯಾಣಿಕರು ರೈಲಿನಲ್ಲಿ ಆಸನ ಸಾಮರ್ಥ್ಯವು ತುಂಬಿರುವುದನ್ನು ಗಮನಿಸಿದರೆ ಅವರು ಸಾಕಷ್ಟು ಆಸನ ಸಾಮರ್ಥ್ಯವಿರುವ ಲೀನರ್ ಕೋಚ್ಗಳು/ ಮುಂದೆ ಬರುವ ರೈಲುಗಳಲ್ಲಿ ಆಸನ ಲಭ್ಯವಿದ್ದರೆ ಹತ್ತಬೇಕಾಗುತ್ತದೆ. ಕರ್ನಾಟಕ ಸರ್ಕಾರವು ಕೋವಿಡ್ ಹರಡುವಿಕೆ ನಿಯಂತ್ರಿಸಲು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಇದನ್ನು ಜಾರಿಗೊಳಿಸಲಾಗುತ್ತಿದೆ.
ವಾರಾಂತ್ಯದ ಕರ್ಫ್ಯೂ ಕಾರಣದಿಂದಾಗಿ ಶನಿವಾರ ಮತ್ತು ಭಾನುವಾರದಂದು ಮೆಟ್ರೋ ರೈಲುಗಳು 20 ನಿಮಿಷಗಳ ಬದಲಿಗೆ 30 ನಿಮಿಷಗಳ ಆವರ್ತನಗಳಲ್ಲಿ ಕಡಿಮೆ ರೈಲುಗಳು ಕಾರ್ಯ ನಿರ್ವಹಣೆ ಮಾಡುತ್ತವೆ ಎಂಬುದನ್ನು ಪ್ರಯಾಣಿಕರ ಗಮನಕ್ಕೆ ತರಲಾಗುತ್ತಿದೆ.
ಮುಖ್ಯಮಂತ್ರಿಗಳ ಸಭೆ; ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿ- ಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಸಭೆಯನ್ನು ನಡೆಸಿದ್ದರು. ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಜನವರಿ ತಿಂಗಳ ಅಂತ್ಯದವರೆಗೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದರು.
ಕರ್ನಾಟಕದಲ್ಲಿ ಮಂಗಳವಾರ 14,473 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ರಾಜ್ಯದ ಪಾಸಿಟಿವಿಟಿ ದರ ಶೇ 10.30ಕ್ಕೆ ಏರಿಕೆಯಾಗಿತ್ತು. ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 10,800 ಆಗಿತ್ತು. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 58,917 ಆಗಿದೆ.
ಬಿಎಂಟಿಸಿ ಬಸ್, ನಮ್ಮ ಮೆಟ್ರೋದಲ್ಲಿ ನಿಗದಿತ ಸೀಟುಗಳನ್ನು ಮಾತ್ರ ಭರ್ತಿ ಮಾಡಬೇಕು. ನಿಂತು ಪ್ರಯಾಣಿಸಲು ಅವಕಾಶ ನೀಡಬಾರದು. ಬಸ್ ನಿಲ್ದಾಣ ಮತ್ತು ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಜನಸಂದಣಿ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಈ ವಾರದಲ್ಲಿ ಸಂಕ್ರಾಂತಿ, ವೈಕುಂಠ ಏಕಾದಶಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕಂದಾಯ ಮತ್ತು ಮುಜರಾಯಿ ಇಲಾಖೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 1.3 ಲಕ್ಷ ವರೆಗೆ ಹೆಚ್ಚಿಸಲು ಸೂಚನೆ ಕೊಟ್ಟಿದ್ದರು. ಬೆಂಗಳೂರು ನಗರದಲ್ಲಿ 1-9ನೇ ತರಗತಿಗೆ ಜನವರಿ 31ರ ತನಕ ಆನ್ಲೈನ್ ಕ್ಲಾಸ್ ನಡೆಸಲು ಆದೇಶ ನೀಡಲಾಗಿದ್ದು, ಭೌತಿಕ ತರಗತಿಗಳನ್ನು ರದ್ದುಗೊಳಿಸಲಾಗಿದೆ.












Click it and Unblock the Notifications