ಏಪ್ರಿಲ್ನಲ್ಲಿ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮೆಟ್ರೋ ಸಂಚಾರ
ಬೆಂಗಳೂರು, ಮಾರ್ಚ್ 16 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ರೈಲು ಮಾರ್ಗ ಜನರ ಸಂಚಾರಕ್ಕೆ ಮುಕ್ತವಾಗಲಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಏಪ್ರಿಲ್ನಲ್ಲಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಮಂಗಳವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಈ ಮಾರ್ಗದಲ್ಲಿನ ನಿಲ್ದಾಣಗಳ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಮಾತನಾಡಿದ ಅವರು, 'ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಚ್ 25ರಂದು ಮಾರ್ಗದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಅವರು ಪ್ರಮಾಣ ಪತ್ರ ನೀಡಿದ ಬಳಿಕ ಸಂಚಾರ ಆರಂಭವಾಗಲಿದೆ' ಎಂದರು. [ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ಪ್ರಾಯೋಗಿಕ ಪರೀಕ್ಷೆ]

18 ಕಿ.ಮೀ.ಮಾರ್ಗ : ಬೈಯಪ್ಪನಹಳ್ಳಿ-ಮೈಸೂರು ರಸ್ತೆಯ ಪೂರ್ವ-ಪಶ್ಚಿಮ ಕಾರಿಡಾರ್ನ ಮಾರ್ಗ 18 ಕಿ.ಮೀ. ಇದೆ. ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಈಗಾಗಲೇ ನಡೆಯುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ 5.ಕಿ.ಮೀ.ಉದ್ದದ ಸುರಂಗ ಮಾರ್ಗದಲ್ಲಿ ಒಂದು ನಿಲ್ದಾಣದ ಕಾಮಗಾರಿ ಬಾಕಿ ಇದ್ದು, ಅದು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ. [ನಮ್ಮ ಮೆಟ್ರೋಗೆ ರಾಜೀನಾಮೆ ನೀಡಿದ 25 ಚಾಲಕರು]
ಪೂರ್ವ-ಪಶ್ಚಿಮ ಕಾರಿಡಾರ್ನ 18 ಕಿ.ಮೀ ನೇರಳೆ ಮಾರ್ಗದ ಪೈಕಿ 13 ಕಿ.ಮೀ.ಎತ್ತರಿಸಿದ ಮಾರ್ಗ ಮತ್ತು 5 ಕಿ.ಮೀ.ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ರೈಲು ಸುರಂಗ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. [ಮೆಟ್ರೋ 2ನೇ ಹಂತಕ್ಕೆ ಭೂ ಸ್ವಾಧೀನ ಆರಂಭ]
ಮಾರ್ಚ್ 18ರಂದು ಪತ್ರ : 'ಮಾರ್ಚ್ 18 ಅಥವ 19ರಂದು ಬಿಎಂಆರ್ಸಿಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ಎಂಸಿಎಸ್) ತಂಡಕ್ಕೆ ಪತ್ರ ಬರೆಯಲಿದೆ. ಅವರು ಬಂದು ಸಂಚಾರ ವೀಕ್ಷಣೆ ಮಾಡಿದ ಬಳಿಕ ಪ್ರಮಾಣ ಪತ್ರ ನೀಡಲಿದ್ದಾರೆ' ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.

ನಿಲ್ದಾಣಗಳು : ಬೈಯಪ್ಪನಹಳ್ಳಿಯಿಂದ ಹೊರಡುವ ನಮ್ಮ ಮೆಟ್ರೋ ರೈಲು ಇಂದಿರಾ ನಗರ, ಎಂ.ಜಿ.ರಸ್ತೆ, ವಿಧಾನಸೌಧ, ಕೆಂಪೇಗೌಡ ಬಸ್ ನಿಲ್ದಾಣದ ಮೂಲಕ ಮಾಗಡಿ ರಸ್ತೆ ತಲುಪಲಿದೆ. ಅಲ್ಲಿಂದ ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ ನಿಲ್ದಾಣದ ಮೂಲಕ ಮೈಸೂರು ರಸ್ತೆ (ನಾಯಂಡಹಳ್ಳಿ) ತಲುಪಲಿದೆ.
ಅಂದಹಾಗೆ ಸದ್ಯ ಎಂಜಿ ರಸ್ತೆ-ಬೈಯಪ್ಪನಹಳ್ಳಿ, ಸಂಪಿಗೆ ರಸ್ತೆ-ನಾಗಸಂದ್ರ ಮತ್ತು ಮಾಗಡಿ ರಸ್ತೆ-ಮೈಸೂರು ರಸ್ತೆ ಮಾರ್ಗಗಳಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. [ನಮ್ಮ ಮೆಟ್ರೋ ವೆಬ್ ಸೈಟ್]












Click it and Unblock the Notifications