Namma Metro: ಸೆ.29ರಂದು ಚಲ್ಲಘಟ್ಟ - ಕೆಂಗೇರಿ ಮಾರ್ಗದ ಸುರಕ್ಷತಾ ತಪಾಸಣೆ : ಈ ಭಾಗದಲ್ಲಿ ಮೆಟ್ರೋ ಸೇವೆ ಇರಲ್ಲ
ಕರ್ನಾಟಕ ಬಂದ್ ನಡುವೆಯೂ ಮೊದಲೇ ನಿರ್ಧಾರ ಮಾಡಿದಂತೆ ಸೆ.29ರಂದು ಚಲ್ಲಘಟ್ಟ - ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ. ಬಿಎಂಆರ್ಸಿಎಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ನೇರಳೆ ಮಾರ್ಗದ ಮಿಸ್ಸಿಂಗ್ ಲಿಂಕ್ ಕೆಆರ್ ಪುರ - ಬೈಯಪ್ಪನಹಳ್ಳಿ ನಡುವಿನ 2-ಕಿಮೀ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ನಡೆಸಿರುವ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಅದರ ಬೆನ್ನಲ್ಲೇ ಕೆಂಗೇರಿ ಚಲ್ಲಘಟ್ಟ ನಡುವಿನ ಮಾರ್ಗದಲ್ಲಿ ಸುರಕ್ಷತಾ ತಪಾಸಣೆಗೂ ಮುಹೂರ್ತ ನಿಗದಿಯಾಗಿದೆ.

ಸೆಪ್ಟೆಂಬರ್ 29ರಂದು ಕಾವೇರಿ ನೀರಿಗಾಗಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದರಿಂದ ಒಂದು ದಿನ ಮೊದಲು ಅಂದರೆ ಸೆ. 28ರಂದು ಸಿಎಂಆರ್ಎಸ್ ಸುರಕ್ಷತಾ ತಪಾಸಣೆ ನಡೆಸಲಿದೆ ಎಂದು ಹೇಳಲಾಗಿತ್ತು, ಈಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು ನಿಗದಿಯಂತೆ ಸೆ.29ರಂದೇ ಸುರಕ್ಷತಾ ತಪಾಸಣೆ ನಡೆಸಲಾಗುತ್ತದೆ.
ಮೆಟ್ರೋ ಸಂಚಾರ ವ್ಯತ್ಯಯ
ಸುರಕ್ಷತಾ ತಪಾಸಣೆ ಇರುವ ಕಾರಣ ಸೆ. 29ರಂದು ಇಡೀ ದಿನ ನೇರಳೆ ಮಾರ್ಗದ ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಇಡೀ ದಿನ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬಿಎಂಆರ್ ಸಿಎಲ್ ಹೇಳಿದೆ.
ಬೈಯಪ್ಪನಹಳ್ಳಿ - ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಮತ್ತು ಕಾಡುಗೋಡಿ - ಕೆಆರ್ ಪುರ ನಿಲ್ದಾಣಗಳ ನಡುವೆ ಇಡೀ ದಿನ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಹೇಳಿದೆ.
ಒಂದೇ ದಿನ ನೇರಳೆ ಮಾರ್ಗ ಸಂಪೂರ್ಣ ಉದ್ಘಾಟನೆ
ಕೆಆರ್ ಪುರ - ಬೈಯಪ್ಪನಹಳ್ಳಿ ಮತ್ತು ಚಲ್ಲಘಟ್ಟ - ಕೆಂಗೇರಿ ನಡುವೆ ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸಲು ಮೊದಲು ನಿರ್ಧಾರ ಮಾಡಿತ್ತು. ಆದರೆ ಎರಡೂ ಮಾರ್ಗಗಳಲ್ಲಿ ಏಕಕಾಲಕ್ಕೆ ಸುರಕ್ಷತಾ ತಪಾಸಣೆ ನಡೆಯದ ಕಾರಣ ಮೊದಲು ಕೆಆರ್ ಪುರ - ಬೈಯಪ್ಪನಹಳ್ಳಿ ನಡುವೆ ಸಂಚಾರ ಆರಂಭಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಸೆ. 29ರಂದು ಸುರಕ್ಷತಾ ತಪಾಸಣೆ ನಡೆಯುವ ಕಾರಣ ಎರಡೂ ಮಾರ್ಗಗಳಲ್ಲಿ ಒಂದೇ ದಿನ ಮೆಟ್ರೋ ಸಂಚಾರ ಉದ್ಘಾಟನೆ ಮಾಡಲು ಬಿಎಂಆರ್ ಸಿಎಲ್ ಯೋಜಿಸಿದೆ ಎಂದು ವರದಿಯಾಗಿದೆ. ಅಕ್ಟೋಬರ್ 15ರ ಒಳಗೆ 44 ಕಿಮೀ ಉದ್ದದ ನೇರಳೆ ಮಾರ್ಗ ಸಂಪೂರ್ಣವಾಗಿ ತೆರೆಯಲಿದೆ ಎಂದು ಹೇಳಲಾಗಿದೆ.
44 ಕಿಮೀ ಉದ್ದದ ನೇರಳೆ ಮಾರ್ಗದ ಸಂಪೂರ್ಣವಾಗಿ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ದಿನದ ಪ್ರಯಾಣಿಕರ ಸಂಖ್ಯೆ 75000 ದಿಂದ 1 ಲಕ್ಷ ದಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.












Click it and Unblock the Notifications