ಚಂದ್ರಶೇಖರ ಕಂಬಾರ 'ನಾಯೀಕತೆ' ನಾಟಕ ನಾಳೆ ಪ್ರದರ್ಶನ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಅವರ 'ನಾಯೀಕತೆ' ನಾಟಕ ನಾಳೆ (ಶನಿವಾರ) ಸಂಜೆ 7.30ಕ್ಕೆ ಹನುಮಂತನಗರದ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನ ಆಗಲಿದೆ. ಸೈಡ್ ವಿಂಗ್ ಬೆಂಗ್ಳೂರ್ ತಂಡ ಈ ನಾಟಕವನ್ನು ಪ್ರಸ್ತುತ ಪಡಿಸಲಿದೆ. ಶೈಲೇಶ್ ಕುಮಾರ್ ಎಂ.ಎಂ. ನಾಟಕದ ನಿರ್ದೇಶನ ಮಾಡಿದ್ದಾರೆ.
ಪ್ರೀತಿ ಮತ್ತು ದುಡ್ಡು ಎರಡರ ನಡುವಿನ ನಾಟಕ
'ಗ್ರಾಮೀಣ ಸೊಗಡಿನ ನಾಟಕ' ಎಂದಷ್ಟೇ ಸೀಮಿತಗೊಳ್ಳದೇ, ಸಮಾಜದ ಪರಿಸ್ಥಿತಿಯನ್ನು ಒಂದು ಅದ್ಭುತ ಕಥೆಯ ಜೊತೆ ಪೋಣಿಸಿ, ಗ್ರಾಮೀಣ ಭಾಷೆಯ ಶ್ರೀಮಂತಿಕೆಯನ್ನು ಬೆರೆಸಿ, ಅಲೆಮಾರಿ ಜನಾಂಗದ ಹೊಟ್ಟೆಪಾಡಿನ ದುರಂತ ಚಿತ್ರಣವನ್ನು ಹಾಸ್ಯದ ಲೇಪನದೊಂದಿಗೆ ನೇಯ್ದು, ಹೆಣ್ಣಿನ ದಿಟ್ಟತನವನ್ನು ಮುಖ್ಯಭೂಮಿಕೆಯಲ್ಲಿರಿಸಿ, 'ಪ್ರೀತಿ-ಪ್ರೇಮ ದೊಡ್ಡದೋ? ಹಣ ದೊಡ್ಡದೋ?' ಎಂಬ ಪ್ರಶ್ನೆಯಿಂದ ಆರಂಭವಾಗುವ ಕಥೆಗೆ ಕಡೆಯಲ್ಲಿ ಮೇಲಿನ ಎಲ್ಲಾಅಂಶಗಳನ್ನೂ ಹದವಾಗಿ ಬೆರೆಸಿ ಕಂಬಾರರು ಉತ್ತರಿಸಿರುವ ನಾಟಕವೇ 'ನಾಯೀಕತೆ'.
ನಾಟಕದ ಮಜವೇ ರಿಯಲಿಸ್ಟಿಕ್ ಆಗಿ ಕಂಬಾರರು ಯಾವುದೇ ಮಡಿವಂತಿಕೆಯಿಲ್ಲದೇ ಪರಿಸ್ಥಿತಿಯನ್ನು ಚಿತ್ರಿಸಿರುವ ರೀತಿ ಹಾಗೂ ಈ ಪ್ರದರ್ಶನದಲ್ಲೂ ಸಹ ಅದೇ ರೀತಿ, ಯಾವುದೇ ಮಡಿವಂತಿಕೆಯಿಲ್ಲದೇ ರಿಯಲಿಸ್ಟಿಕ್ ಆಗಿ ಆ ಚಿತ್ರಣ ಮೂಡಿಬಂದಿದೆ. ವಸ್ತುವಿನ ಹಿಂದೆ ಓಡುತ್ತಿರುವ ಮನುಷ್ಯನಿಗೆ ಮತ್ತೊಬ್ಬ ಮನುಷ್ಯನೂ ವಸ್ತುವಂತೆ ಕಾಣುವ ಶೋಚನೀಯ ಪರಿಸ್ಥಿತಿಯಲ್ಲಿ, 'ಪ್ರೀತಿ- ಪ್ರೇಮ ದೊಡ್ಡದಲ್ಲವೇ?' ಎಂಬುದನ್ನು ಸಾರುವ ಈ 'ನಾಯೀಕತೆ' ಇಂದಿನ ಸಮಾಜಕ್ಕೆ ಅತ್ಯವಶ್ಯಕವಾದ ನಾಟಕ.
ನಾಟಕ ನಿರ್ದೇಶಕರ ಬಗ್ಗೆ
'ನಾಯೀಕತೆ' ನಾಟಕವನ್ನು ಶೈಲೇಶ್ ಕುಮಾರ್ ಎಂ.ಎಂ ನಿರ್ದೇಶನ ಮಾಡಿದ್ದಾರೆ. ಉದ್ಯಮಿಯಾಗಿರುವ ಶೈಲೇಶ್ ಕುಮಾರ್ ಅವರು ರಂಗಭೂಮಿಯ ಸೆಳೆತಕ್ಕೆ ಒಳಗಾಗಿ, ರಂಗಭೂಮಿಯಲ್ಲಿ ಒಂದು ವರ್ಷದ ಡಿಪ್ಲೋಮಾ ಮುಗಿಸಿ ನಂತರ 'ಸೊಂಡಲ್ ಮ್ಯಾನ್', 'ಸಲಿಲ', 'ಕಾಡ್ನಲ್ಲೊಂದೂರಿತ್ತಂತೆ' ಹೀಗೆ ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರು ರಚಿಸಿವ ದ್ವಿವ್ಯಕ್ತಿ ಪ್ರದರ್ಶನ 'ಇಲ್ಲ.. ಅಂದ್ರೆ ಇದೆ !' ನಾಟಕವು ಯಶಸ್ವಿ 49 ಪ್ರದರ್ಶನಗಳನ್ನು ಕಂಡು ಹಲವಾರು ನಾಟಕೋತ್ಸವಗಳಲ್ಲಿ ಪ್ರದರ್ಶನವಾಗಿ ರಂಗಭೂಮಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ.
ಕಲಾವಿದರ ಬಗ್ಗೆ
ಶೈಲೇಶ್ ಕುಮಾರ್.ಎಂ.ಎಂ, ಭರತ್ ಸ ಜಗನ್ನಾಥ್, ಲತಾ ಸರ್ವೇಶ್, ಆದಿತ್ಯ ಭಾರದ್ವಾಜ್, ಅಶ್ವಿತಾ ಹೆಗ್ಡೆ, ಕೃಷ್ಣಾನಂದ, ಗುರು ಪ್ರಸಾದ್, ಅರ್ಜುನ್, ಅಕ್ಷಯ್, ನವೀನ್, ರಚನಾ ಮುಧೋಳ್, ನಿಶ್ಚಲ್ ಮುಧೋಳ್, ನಿತ್ಯಾ ಜೋಶಿ, ಸಿಂಚನಾ, ನಿಶಿತಾ, ಶುಭಾಂಗ
ನಾಟಕ ತಂಡದ ಬಗ್ಗೆ
ನಿರಂತರವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ, ಸಮಾನಮನಸ್ಕರು ಸೇರಿ ಆರಂಭಿಸಿರುವ ರಂಗತಂಡ 'ಸೈಡ್ ವಿಂಗ್ ಬೆಂಗ್ಳೂರ್'. ಇದು ಹೊಸ ತಂಡವಾಗಿದ್ದು ಈಗಾಗಲೇ ಐದು ಬೀದಿನಾಟಕಗಳನ್ನು ಹಾಗೂ 'ಇಲ್ಯಾಡ್ಗಣ್ಣ', 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್', 'ಸಡನ್ನಾಗ್ ಸತೋದ್ರೆ? 'ಇಲ್ಲ..ಅಂದ್ರೆ ಇದೆ!', ಹಾಗೂ 'ಸರ್ಗ' ನಾಟಕಗಳನ್ನು ರಾಜ್ಯದೆಲ್ಲಡೆ ಮಾಡಿ ದೊಡ್ಡ ಪ್ರತಿಕ್ರಿಯೆಯನ್ನು ಪಡೆದಿದೆ.