ಮಲ್ಲೇಶ್ವರಂ ಕ್ಷೇತ್ರದಿಂದ ಟಿಕೆಟ್ ಬಯಸಿಲ್ಲ : ಎಂ.ಆರ್.ಸೀತಾರಾಮ್
ಬೆಂಗಳೂರು, ಮಾರ್ಚ್ 15 : 'ನಾನಗಲಿ ನನ್ನ ಮಗನಾಗಲಿ ಟಿಕೆಟ್ ಆಕಾಂಕ್ಷಿ ಅಲ್ಲ. ಮಲ್ಲೇಶ್ವರಂ ಕ್ಷೇತ್ರದಿಂದ ನಾವು ಟಿಕೆಟ್ ಬಯಸಿಲ್ಲ' ಎಂದು ಸಚಿವ ಎಂ.ಆರ್.ಸೀತಾರಾಮ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಯೋಜನೆ, ಸಾಂಖ್ಯಿಕ, ಹಣಕಾಸು ಮತ್ತು ಅನುಷ್ಠಾನ ಖಾತೆ ಸಚಿವರಾದ ಎಂ.ಆರ್.ಸೀತಾರಾಮ್, 'ನಾನು ಮತ್ತು ನನ್ನ ಮಗ ಮಲ್ಲೇಶ್ವರಂ ಕ್ಷೇತ್ರದ ಟಿಕೆಟ್ ಬಯಸಿಲ್ಲ' ಎಂದು ಹೇಳಿದರು.
'ನಾನು ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ನನ್ನ ಪುತ್ರನೂ ಪಕ್ಷದಲ್ಲಿ ತೊಡಗಿಸಿಕೊಳ್ಳಲಿ. ನಂತರ ಆಕಾಂಕ್ಷಿಯಾಗಲಿ' ಎಂದು ತಿಳಿಸಿದರು.

ಎಂ.ಆರ್.ಸೀತಾರಾಮ್ ಮಲ್ಲೇಶ್ವರಂ ಕ್ಷೇತ್ರದಿಂದ 2018ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿಗಳಿಗೆ ಇಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಎರಡು ಬಾರಿ ಎಂ.ಆರ್.ಸೀತಾರಾಂ (1999, 2004) ಅವರು ಮಲ್ಲೇಶ್ವರಂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಸದ್ಯ ಅವರು ವಿಧಾನಪರಿಷತ್ ಸದಸ್ಯರಾಗಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ.
2013ರ ಚುನಾವಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಲ್ಲೇಶ್ವರಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 36,543 ಮತಗಳನ್ನು ಪಡೆದು ಬಿಜೆಪಿಯ ಡಾ.ಅಶ್ವಥ್ ನಾರಾಯಣ ವಿರುದ್ಧ ಸೋಲು ಅನುಭವಿಸಿದ್ದರು.
2008, 2013ರ ಚುನಾವಣೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಗೆದ್ದಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಖಚಿತ.












Click it and Unblock the Notifications