ಬೀಫ್ ಫೆಸ್ಟ್ : ಕವಯಿತ್ರಿಗೆ ಮುಸ್ಲಿಂರಿಂದಲೇ ಮಂಗಳಾರತಿ
ಬೆಂಗಳೂರು, ಮೇ 29 : ದೇಶಾದ್ಯಂತ ಗೋಹತ್ಯೆ ನಿಷೇಧವನ್ನು ವಿರೋಧಿಸಿ ಸೋಮವಾರ ಸಂಜೆ ಪುರಭವನ ಎದಿರು 'ಬುದ್ಧಿಜೀವಿ'ಗಳು ಹಮ್ಮಿಕೊಂಡಿರುವ 'ಗೋಮಾಂಸ ಉತ್ಸವ'ಕ್ಕೆ ಭಾರೀ ಹಿನ್ನಡೆಯುಂಟಾಗಿದೆ.
ಒಂದೆಡೆ ಈ ಉತ್ಸವ ನಡೆಸಲು ಮತ್ತು ಪ್ರತಿಭಟನೆ ಮಾಡಲು ಅನುಮತಿ ನೀಡಿಲ್ಲ, ಮತ್ತೊಂದೆಡೆ ಈ ಉತ್ಸವ ನಡೆಸಲು ಯತ್ನಿಸುತ್ತಿರುವ ಬುದ್ಧಿಜೀವಿಯೊಬ್ಬರಿಗೆ ಮುಸ್ಲಿಂರೇ ಮಂಗಳಾರತಿ ಎತ್ತಿದ್ದಾರೆ.
ಟೌನ್ ಹಾಲ್ ಎದಿರು 4 ಗಂಟೆಗೆ ಆಯೋಜಿಸಲಾಗಿದ್ದ ಬೀಫ್ ಫೆಸ್ಟಿವಲ್ ಗೆ ಬೆಂಗಳೂರು ಪೊಲೀಸ್ ಆಯುಕ್ತರು ಅನುಮತಿ ನೀಡಿಲ್ಲ. ಗೋಮಾಂಸ ಭಕ್ಷಣೆಯ ಉತ್ಸವಕ್ಕಾಗಲಿ ಪ್ರತಿಭಟನೆಗಾಗಲಿ ಅನುಮತಿ ನೀಡಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಡಾ. ಚಂದ್ರಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ.[ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]
ಬುದ್ಧಿಜೀವಿಗಳ ಪ್ರತಿಭಟನೆಗೆ ಪ್ರತಿಯಾಗಿ #StopBeefFest ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರಲ್ಲಿ ಟ್ರೆಂಡ್ ಆಗಿದೆ. ಏನೇ ಆಗಲಿ ಗೋಮಾಂಸ ತಿನ್ನುವ ಈ ಅನಿಷ್ಠ ಚಳವಳಿಗೆ ಅವಕಾಶ ನೀಡಬಾರದು ಎಂದು ಗೋವುಗಳನ್ನು ಪೂಜನೀಯವಾಗಿ ಕಾಣುವ ಜನರು ಟ್ವೀಟ್ ಮಾಡುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಇದೇ ಪುರಭವನದ ಎದಿರು ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಡಾ. ಮರುಳಸಿದ್ದಪ್ಪ, ಮಾಜಿ ಪತ್ರಕರ್ತರಾದ ದಿನೇಶ್ ಅಮಿನಮಟ್ಟು, ಚೇತನಾ ತೀರ್ಥಹಳ್ಳಿ ಮುಂತಾದವರು ಒಬ್ಬರಿಗೊಬ್ಬರ ಬಾಯಿಗೆ ಗೋಮಾಂಸ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು ಮತ್ತು ತೀವ್ರ ಟೀಕೆಗೂ ಗುರಿಯಾಗಿದ್ದರು.[ಬೀಫ್ ಫೆಸ್ಟಿವಲ್ ಗೆ ಅನುಮತಿ ನೀಡಿಲ್ಲ: ಬೆಂಗಳೂರು ಪೊಲೀಸ್]

ಕವಯಿತ್ರಿಯ ಫೇಸ್ ಬುಕ್ ಪೋಸ್ಟ್ ಗೆ ಆಕ್ಷೇಪ
ಫೇಸ್ ಬುಕ್ ನ ಖ್ಯಾತ ಕವಯಿತ್ರಿ ಚೇತನಾ ತೀರ್ಥಹಳ್ಳಿ ಅವರು, ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸಿದ್ದು, ಕರ್ನಾಟಕದಲ್ಲಿ ರಂಜಾನ್ ಆರಂಭವಾಗಿರುವ ಕಾರಣ, ನಾಲ್ಕು ಗಂಟೆಗೆ ಪ್ರತಿಭಟನೆಯಿದ್ದರೂ 6.45ರ ಹೊತ್ತಿಗೆ ಗೋಮಾಂಸವನ್ನು ನೀಡುವುದಾಗಿ ಬರೆದುಕೊಂಡಿದ್ದರು.

ಮುಸ್ಲಿಂರ ಮಾನವನ್ನು ಹರಾಜು ಹಾಕುತ್ತಿದ್ದೀರಿ
ಇದಕ್ಕೆ ಮುಸ್ಲಿಂ ಯುವಕರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಮುಸ್ಲಿಂರ ಮಾನವನ್ನು ನೀವು ಹರಾಜು ಹಾಕುತ್ತಿದ್ದೀರಿ. ನೀವು ಬೀಫ್ ಫೆಸ್ಟಿವಲ್ ಸೆಲಿಬ್ರೇಟ್ ಮಾಡಬೇಕಿದ್ದರೆ ಯಾವಾಗ ಬೇಕಾದರೂ ಮಾಡಿಕೊಳ್ಳಿ, ಇಫ್ತಾರ್ ಸಮಯದಲ್ಲಿ ಮಾಡಬೇಡಿ. ಗೋಮಾಂಸ ಇಫ್ತಾರ್ ಕೂಟದಲ್ಲಿ ಇರುತ್ತದೆ. ಆದರೆ, ಇದು ಮುಸ್ಲಿಂರ ಆಹಾರ ಎಂದು ಹೇಳುತ್ತಿರುವುದು ಸಂಪೂರ್ಣ ತಪ್ಪು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.[ದೇವರನಾಡಿನ ಪುಣ್ಯಕೋಟಿ ಭಕ್ಷಕರನ್ನು ಹುರಿದು ಬೆಂಡೆತ್ತಿದ ಟ್ವಿಟ್ಟಿಗರು]

ಮದ್ರಾಸ್ ಐಐಟಿಯಲ್ಲಿಯೂ ಬೀಫ್ ಫೆಸ್ಟ್
ಐಐಟಿ ಮದ್ರಾಸ್ ಕ್ಯಾಂಪಸ್ಸಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೋವುಗಳ ಮಾರಾಟವನ್ನು ವಿರೋಧಿಸಿ ಭಾನುವಾರ ರಾತ್ರಿ ಬೀಫ್ ಫೆಸ್ಟಿವಲ್ ಆಚರಿಸಿದ್ದಾರೆ. ಹುಲ್ಲಿನ ಹಾಸಿಗೆಯ ಮೇಲೆ ವಿದ್ಯಾರ್ಥಿಗಳೆಲ್ಲ ಕುಳಿತುಕೊಂಡು ಗೋಮಾಂಸ ತಿಂದಿರುವುದು ವರದಿಯಾಗಿದೆ. ಕೇರಳದಲ್ಲಿ ಬೀಫ್ ಫೆಸ್ಟಿವಲ್ ನಡೆದ ಮರುದಿನವೇ ತಮಿಳುನಾಡಿನಲ್ಲಿಯೂ ನಡೆದಿದೆ.[ಕಣ್ಣೂರಿನ ನಂತರ ಐಐಟಿ, ಮದ್ರಾಸಿನಲ್ಲಿ ಬೀಫ್ ಫೆಸ್ಟಿವಲ್]

ಕಾಂಗ್ರೆಸ್ ನಡೆಸಿದ ಫೆಸ್ಟ್ ಗೆ ರಾಹುಲ್ ಕಿಡಿ
ಕೇರಳದಲ್ಲಿ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸೇರಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಗೋಮಾಂಸ ಭಕ್ಷಣೆ ಉತ್ಸವವನ್ನು ಶನಿವಾರ ಆಚರಿಸಿದ್ದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಆಚರಣೆಯನ್ನು ನಾನಾಗಲಿ, ಕಾಂಗ್ರೆಸ್ಸಾಗಲಿ ಎಂದೂ ಸಮ್ಮತಿಸುವುದಿಲ್ಲ ಎಂದು ಛೀಮಾರಿ ಹಾಕಿದ್ದಾರೆ. ಎಂದು ಬುದ್ಧಿ ಬರುತ್ತದೋ ಇವರಿಗೆಲ್ಲ?[ಬೆಂಗಳೂರಲ್ಲಿ ಬೀಫ್ ಫೆಸ್ಟಿವಲ್ ವಿರುದ್ಧ ಗೋರಕ್ಷಕರ ಪ್ರತಿಭಟನೆ]












Click it and Unblock the Notifications