ಬೆಂಗಳೂರಿಗರೆ, ಸಂಗೀತ ಸುಧೆಯಲ್ಲಿ ನೆನೆಯಲು ಸಿದ್ಧರಾಗಿ
ಬೆಂಗಳೂರು, ಡಿಸೆಂಬರ್ 03 : ಮಳೆಸುರಿಸದೆ ಆಟವಾಡಿಸುತ್ತಿರುವ ಕಾರ್ಮೋಡಗಳು, ಸುಯ್ಯನೆ ಬೀಸುತ್ತಿರುವ ಚಳಿಗಾಳಿಯ ನಡುವೆ ಬೆಚ್ಚನೆ ಸಂಗೀತದ ಅನುಭವ ಪಡೆಯಲು ಬೆಂಗಳೂರು ಸಜ್ಜಾಗಿದೆ. ಡಿಸೆಂಬರ್ 4ರಿಂದ 6ರವರೆಗೆ ಬೆಂಗಳೂರಿನಲ್ಲಿ ಸಂಗೀತದ ವರ್ಷಧಾರೆ ಸುರಿಯಲಿದೆ. ಬೆಂಗಳೂರಿಗರೆ, ಸಂಗೀತದ ಸುಧೆಯಲ್ಲಿ ನೆನೆಯಲು ಸಿದ್ಧರಾಗಿರಿ.
ಸುಗಮ ಸಂಗೀತದ ದಿಗ್ಗಜೆ, ಖ್ಯಾತ ಹಿನ್ನೆಲೆ ಸಂಗೀತಗಾರ್ತಿ ಕಸ್ತೂರಿ ಶಂಕರ್ ಅವರ ಮಯೂರ ಸ್ಕೂಲ್ ಆಫ್ ಮ್ಯೂಸಿಕ್ 'ಗೀತಸಮ್ಮಿಲನ'ದ 8ನೇ ವಾರ್ಷಿಕೋತ್ಸವವನ್ನು ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಜೆ ಹಮ್ಮಿಕೊಂಡಿದೆ. ಸಂಗೀತೋತ್ಸವದ ಉದ್ಘಾಟನೆ ಶುಕ್ರವಾರ ಸಂಜೆ 4.30ಕ್ಕೆ ಆಗಲಿದೆ. [ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ?]

ಈ ಕಾರ್ಯಕ್ರಮದಲ್ಲಿ ಸಂಗೀತ ದಿಗ್ಗಜರಾದ ವಿದ್ವಾನ್ ಅನೂರು ಅನಂತ ಕೃಷ್ಣಶರ್ಮ, ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿ ಮುಂತಾದವರು ಗಾನಸುಧೆ ಹರಿಸಲಿದ್ದಾರೆ. ಜೊತೆಗೆ, ಹಾರ್ಮೋನಿಯಂ ಅರುಣಾಚಲಪ್ಪ ಅವರ ಸ್ಮರಣಾರ್ಥ 'ಅರುಣಾ' ವಾರ್ಷಿಕ ಪ್ರಶಸ್ತಿ ಪ್ರದಾನ, ಮಯೂರ ಶಾಲೆ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ಮುಂತಾದವುಗಳು ಶ್ರೋತೃಗಳನ್ನು ರಂಜಿಸಲಿವೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆಯಲಿರುವ ಎಸ್.ಡಿ. ಬರ್ಮನ್ ಮತ್ತು ಆರ್.ಡಿ. ಬರ್ಮನ್ ಸಂಗೀತ ಸಂಜೆ ಸಭಿಕರನ್ನು ಹಿಂದಿ ಚಿತ್ರಗೀತೆಗಳ ಸಂಗೀತ ಸಾಗರದಲ್ಲಿ ತೇಲಿಸಲಿದೆ. ಇದರಲ್ಲಿ ಅರ್ಚನಾ ಉಡುಪ, ಎಂಡಿ ಪಲ್ಲವಿ, ಪಂಚಮ್ ಹಳಿಬಂಡಿ ಮುಂತಾದವರು ಹಾಡಿ ರಂಜಿಸಲಿದ್ದಾರೆ. [ಕಾರು ಚಾಲಕನ ಸಂಗೀತ ಪ್ರತಿಭೆಗೆ ತಲೆದೂಗಿದ ಕಲಾಂ]

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೀತಸಮ್ಮಿಲನಕ್ಕೆ ಸಹಕಾರ ನೀಡುತ್ತಿದ್ದು, ಸಂಗೀತ ನೃತ್ಯ ಅಕಾಡೆಮಿ ಪ್ರಾಯೋಜಿಸುತ್ತಿದೆ. ಎಸ್ ಡಿ ಬರ್ಮನ್ ಮತ್ತು ಆರ್ ಡಿ ಬರ್ಮನ್ ಸಂಗೀತ ಸಂಜೆಯ ನಿರೂಪಣೆಯನ್ನು 92.7 ಬಿಗ್ ಎಫ್ಎಂನ ಆರ್ ಜೆ ಮಯೂರ್ ರಾಘವೇಂದ್ರ ಅವರು ಮಾಡಲಿದ್ದಾರೆ.











Click it and Unblock the Notifications