ಶಾಸಕ ಮುನಿರತ್ನರಿಂದ ಜೀವಬೆದರಿಕೆ; ಬಿಬಿಎಂಪಿ ಗುತ್ತಿಗೆದಾರನಿಗೆ ಒಕ್ಕಲಿಗ ಸಂಘದವರು ಹೇಳಿದ್ದೇನು.?
Munirathna Case: ಗುತ್ತಿಗೆದಾರ ಚೆಲುವರಾಜು ಎಂಬುವವರಿಗೆ ಅವಾಚ್ಯ ಪದಗಳಿಂದ ನಿಂದನೆ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರ ಬಂಧನವಾಗಿದೆ. ಅಲ್ಲದೆ ಮುನಿರತ್ನರಿಂದ ಬೇದರಿಕೆ ಹಿನ್ನೆಲೆ ಬಿಬಿಎಂಪಿ ಗುತ್ತಿಗೆದಾರನ ಮನೆಗೆ ಒಕ್ಕಲಿಗ ಸಂಘ ಭೇಟಿ ನೀಡಿ ಧೈರ್ಯ ತುಂಬುವ ಕೆಲಸವನ್ನು ಮಾಡಿದೆ ಎಂದು ತಿಳಿದುಬದಿದೆ.
ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಶಾಸಕರಾದ ಮುನಿರತ್ನರಿಂದ ಒಕ್ಕಲಿಗರ ಜಾತಿ ನಿಂದನೆ, ಜೀವ ಬೆದರಿಕೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಹೀನ ಮಾತುಗಳಿಂದ ನೊಂದಿರುವ ಬಿಬಿಎಂಪಿ ಗುತ್ತಿಗೆದಾರರಾದ ಚಲುವರಾಜು ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಇದೇ ವೇಳೆ ಸಂಘದ ವತಿಯಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಿ.ಎನ್.ಬಾಲಕೃಷ್ಣ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಖಜಾಂಚಿ ಉಮಾಪತಿ ಶ್ರೀನಿವಾಸ ಗೌಡ ಮತ್ತು ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಮುಖಂಡರಾದ ಗಿರೀಶ್ ಗೌಡ್ರು ಉಪಸ್ಥಿತರಿದ್ದರು.
ಮುನಿರತ್ನ ವಿರುದ್ಧ ಭುಗಿಲೆದ್ದ ಆಕ್ರೋಶ: ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ
ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. "ಮುನಿರತ್ನ ಕಾಮುಕನಾಗಿದ್ದು, ಅತ್ಯಾಚಾರಿ, ಹನಿಟ್ರ್ಯಾಪ್ನ ರೂವಾರಿಯಾಗಿದ್ದಾನೆ. ಗುತ್ತಿಗೆದಾರರನ್ನು ಶೋಷಣೆ ಮಾಡಿದ್ದು, ಹಣ ವಸೂಲಿ ಮಾಡಿದ್ದಾನೆ. ಗುತ್ತಿಗೆದಾರರ ಜೊತೆ ಸಂಭಾಷಣೆಯಲ್ಲಿ ಹೆಣ್ಣುಮಕ್ಕಳ ವಿಷಯವಾಗಿ, ಪರಿಶಿಷ್ಟರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾನೆ," ಎಂದು ಆಕ್ರೊಶ ಹೊರಹಾಕಿದರು.
ಬಳಿಕ ಮಾತನಾಡಿದ ಜಿ.ಸಿ.ಚಂದ್ರಶೇಖರ್ ಅವರು, ಮುನಿರತ್ನ ಒಬ್ಬ ಗೂಂಡಾ ಶಾಸಕನಾಗಿದ್ದು, ಆತನ ಬಗ್ಗೆ ದೂರು ನೀಡಲು ಸಹ ಭಯ ಪಡುವ ವಾತಾವರಣ ಇದೆ. ಆದ್ದರಿಂದ ತುಂಬಾ ಜನ ದೂರು ನೀಡಲು ಮುಂದೆ ಬಂದಿಲ್ಲವೆಂದು ಹೇಳಿದರು.
ಇಂತಹ ನಾಚಿಕೆಗೆಟ್ಟ ಶಾಸಕನನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣ ಆಗಿದೆ. ಬಿಜೆಪಿ ನಾಯಕರ ನೈತಿಕತೆ ಕೂಡ ಪ್ರಶ್ನಾರ್ಹವಾಗಿದೆ. ಆತನನ್ನು ಗೆಲ್ಲಿಸಿದ ಆರ್ಆರ್ ನಗರ ಕ್ಷೇತ್ರದ ಜನ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications