ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮರಿಗೌಡ
ಬೆಂಗಳೂರು ಅಕ್ಟೋಬರ್ 16: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ವಿಧಾನಸೌಧದಲ್ಲಿ ನಗರಾಭಿವೃದ್ದಿ ಕಾರ್ಯದರ್ಶಿ ದೀಪಾ ಚೋಳನ್ಗೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ಸಲ್ಲಿಸಿದ್ದಾರೆ.
ಮುಡಾ ಹಗರಣ ಪ್ರಕರಣದ ತನಿಖೆ ಮುಂದುವರೆದಿದೆ. ಲೋಕಾಯುಕ್ತ ತನಿಖೆ ಹೊತ್ತಲ್ಲೇ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ, ಅವರ ಪತ್ನಿ, ಬಾವೈದ ಮತ್ತು ಜಮೀನುದಾರರ ಮೇಲೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಸಿಎಂ ಸೂಚನೆ ಮೇರೆಗೆ ಮರಿಗೌಡ ರಾಜೀನಾಮೆ ನೀಡಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಮುಡಾಗೆ ಹೊಸ ಆಡಳಿತಾಧಿಕಾರಿ ನೇಮಕ ಮಾಡಲು ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಕೆ.ಮರಿಗೌಡ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಮರಿಗೌಡ ಅವರು. ಸಿಎಂ ಅವರು ರಾಜೀನಾಮೆ ಕೊಡು ಅಂದರು ಕೊಟ್ಟಿದ್ದೇನೆ. ಮುಡಾ ತನಿಖೆ ನಡೆಯುತ್ತಿದೆ. ತನಿಖೆ ನಡೆಯಲಿ. ಅಕ್ರಮ ಆಗಿದೆಯಾ ಇಲ್ಲ ಅಂತ ನಾನು ಹೇಳಲ್ಲ. ಈಗ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯ ಹೊರಬರುತ್ತದೆ ಎಂದರು.
ನನಗೆ ಯಾರೂ ಕೂಡ ಯಾವುದೇ ಒತ್ತಡವನ್ನು ಹಾಕಿಲ್ಲ. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆ. ಸಿದ್ದರಾಮಯ್ಯ ನಮ್ಮ ನಾಯಕರು. ಅವರು ಯಾವುದೇ ಒತ್ತಡ ಹಾಕಿಲ್ಲ. ನಲವತ್ತು ವರ್ಷದಿಂದ ನಾನು ಅವರೊಂದಿಗೆ ಇದ್ದೆನೆ. ಯಾವತ್ತೂ ಕೂಡ ನನಗೆ ಅವರು ಅಕ್ರಮ ಮಾಡಿ ಅಂತ ಹೇಳಿಲ್ಲ. ಹೀಗೆ ಮೂಡಾ ವಿಚಾರದಲ್ಲೂ ಅವರು ನನಗೆ ಯಾವುದೇ ಒತ್ತಡ ಹಾಕಿಲ್ಲ ಎಂದರು.
ಮುಡಾ ಹಗರಣ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಮೂರು ದಶಕಗಳ ಇತಿಹಾಸವಿದೆ.
ಮುಡಾದಿಂದ ಸ್ವಾಧೀನಪಡಿಸಿಕೊಂಡಿರುವ ಅವರ ಜಮೀನಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ಮೈಸೂರಿನ ಹೆಚ್ಚು ಮೌಲ್ಯ ಹೊಂದಿರುವ ಪ್ರದೇಶದಲ್ಲಿ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು 2004ರ ಆಗಸ್ಟ್ನಲ್ಲಿ ಈ 3.16 ಎಕರೆ 'ಕೃಷಿ' ಭೂಮಿಯನ್ನು ಮೂಲ ಜಮೀನು ಮಾಲೀಕನ ಪುತ್ರರಿಂದ ಖರೀದಿಸಿ, ಜುಲೈ 2005ರಲ್ಲಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿದ್ದರು. ಮಲ್ಲಿಕಾರ್ಜುನ ಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಾಮೈದ. ಅಂದರೆ ಧರ್ಮಪತ್ನಿಯ ಅಣ್ಣ. ನಂತರ 3ಎಕರೆ 16 ಗುಂಟೆ ಜಾಗವನ್ನು ಪಾರ್ವತಮ್ಮ ಅವರಿಗೆ ದಾನಪತ್ರದ ಮೂಲಕ 2010ರಲ್ಲಿ ಈ ಜಮೀನನ್ನು ನೀಡುತ್ತಾರೆ.
ಆದರೆ 2001ರಲ್ಲಿಯೇ ಬಡಾವಣೆ ರಚನೆಯಾಗಿ ವಿವಿಧ ಜನರಿಗೆ ನಿವೇಶನ ಹಂಚಿಕೆಯಾಗಿರುವ ಜಮೀನನ್ನು 2004ರಲ್ಲಿ ಸಿದ್ದರಾಮಯ್ಯ ಬಾಮೈದ ಜಮೀನು ಖರೀದಿಸಿ ಪಾರ್ವತಿ ಅವರಿಗೆ ಹೇಗೆ ಉಡುಗೊರೆ ನೀಡಿದ್ದಾರೆ. ಹಾಗೆಯೇ 2005ರಲ್ಲಿ ಕೃಷಿಯೇತರವಾಗಿ ಪರಿವರ್ತನೆಯಾಗಲು ಡಿನೋಟಿಫೈ ಮಾಡಿದ ಭೂಮಿ ಹೇಗೆ 'ಕೃಷಿ' ಭೂಮಿಯಾಯಿತು ಎಂಬ ಪ್ರಶ್ನೆಗಳು ಎದ್ದಿವೆ.












Click it and Unblock the Notifications