ಎಂಟಿಬಿ ನಾಗರಾಜ್ ನಾಮಪತ್ರ ರದ್ದುಗೊಳಿಸಲು ಕಾಂಗ್ರೆಸ್ ಒತ್ತಾಯ
ಬೆಂಗಳೂರು, ನವೆಂಬರ್ 21: ಎಂಟಿಬಿ ನಾಗರಾಜು ಅವರ ನಾಮಪತ್ರವನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ, 'ಎಂಟಿಬಿ ನಾಗರಾಜು ಸಿದ್ದರಾಮಯ್ಯ ಸೇರಿ ಹಲವರಿಗೆ ಕೋಟ್ಯಂತರ ಸಾಲ ಕೊಟ್ಟಿದ್ದಾಗಿ ಹೇಳಿದ್ದಾರೆ, ಆದರೆ ಅದರ ಉಲ್ಲೇಖವನ್ನು ನಾಮಪತ್ರದ ಆಸ್ತಿ ವಿವರದಲ್ಲಿ ಮಾಡಿಲ್ಲ' ಎಂದು ಹೇಳಿದರು.
ಒಂದು ವೇಳೆ ಎಂಟಿಬಿ ನಾಗರಾಜು ಕೋಟ್ಯಂತರ ಹಣ ಸಾಲ ಕೊಟ್ಟಿದ್ದರೆ ಅದರ ಉಲ್ಲೇಖವನ್ನು ಆಸ್ತಿ ವಿವರದಲ್ಲಿ ಮಾಡಬೇಕಿತ್ತು. ಆದರೆ ಮಾಡಿಲ್ಲ. ಇದು ಚುನಾವಣೆ ನಿಯಮಕ್ಕೆ ವಿರುದ್ಧ ಹಾಗಾಗಿ ಅವರ ನಾಮಪತ್ರವನ್ನು ಆಯೋಗವು ರದ್ದುಗೊಳಿಸಬೇಕು' ಎಂದು ಉಗ್ರಪ್ಪ ಒತ್ತಾಯಿಸಿದರು.

ಅಷ್ಟೆ ಅಲ್ಲದೆ ಎಂಟಿಬಿ ನಾಗರಾಜು ಎಷ್ಟು ಸಾಲ ಕೊಟ್ಟಿದ್ದಾರೆ. ಆ ಹಣ ಬಂದದ್ದು ಎಲ್ಲಿಂದ ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ಸಹ ಆಗಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ಮುಂದುವರೆದು ಮಾತನಾಡಿದ ಉಗ್ರಪ್ಪ, ಪಿಎಫ್ಐ, ಎಸ್ಡಿಪಿಐ ಸಂಘಟನೆಯ ನಿಷೇಧದ ಬಗ್ಗೆ ಸಚಿವರು ಮಾತನಾಡುತ್ತಿದ್ದಾರೆ. ಆದರೆ ಕೆಲವು ದಿನಗಳ ಹಿಂದಷ್ಟೆ ನಡೆದ ಮಂಗಳೂರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಪಿಎಫ್ಐ ಪಕ್ಷಗಳೇ ಅನಧಿಕೃತ ಮೈತ್ರಿ ಮಾಡಿಕೊಂಡಿದ್ದವು. ಎರಡೂ ಪಕ್ಷಗಳ ಬಾವುಟ ಜೊತೆಯಾಗಿ ಹಾರಿಸಲಾಗುತ್ತು, ಬಿಜೆಪಿಗೆ ಇಂಥಹಾ ಸಂಘಟನೆಗಳ ಸಖ್ಯ ಹೆಚ್ಚಿದೆ ಎನಿಸುತ್ತದೆ ಎಂದರು.
ಇತ್ತೀಚೆಗೆ ಯಡಿಯೂರಪ್ಪ ಅವರು, ಡಿ.ಕೆ.ರವಿ ಮತ್ತು ಪಿಎಸ್ಐ ಗಣೇಶ್ ಸಾವಿನ ಬಗ್ಗೆ ಉಲ್ಲೇಖಿಸಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಬಗ್ಗೆ ಮಾತನಾಡಿರುವ ಬಗ್ಗೆ ಪ್ರಸ್ತಾಪಿಸಿದ ಉಗ್ರಪ್ಪ, 'ಸಿಬಿಐ ನಡೆಸಿದ ತನಿಖೆ ವರದಿ ಪ್ರಕಾರ ಗಣೇಶ್ ಸಾವಿನಲ್ಲಿ ಕೆ.ಜೆ.ಜಾರ್ಜ್ ಆಗಲಿ ಅಥವಾ ಮತ್ಯಾವುದೇ ಪೊಲೀಸರ ಕೈವಾಡವಾಗಲಿ ಇಲ್ಲ' ಎಂದರು.
ಡಿ.ಕೆ.ರವಿ ಸಾವಿನ ಬಗ್ಗೆಯೂ ಸಿಬಿಐ ತನಿಖೆ ನಡೆಸಿ ವರದಿ ನೀಡಿದೆ. ಸಿಬಿಐ ಇರುವುದು ಮೋದಿ, ಅಮಿತ್ ಶಾ ಕೈ ಕೆಳಗೆ ಎಂದು ಉಗ್ರಪ್ಪ ಹೇಳಿದರು.












Click it and Unblock the Notifications