ಎಂಟಿಬಿ ನಾಗರಾಜು ಬೆಂಬಲಿಗರ ಮೇಲೆ ಶರತ್ ಬಚ್ಚೇಗೌಡ ಬೆಂಬಲಿಗರ ಹಲ್ಲೆ
ಹೊಸಕೋಟೆ, ನವೆಂಬರ್ 27: ಈಗಾಗಲೇ ಹಣಬಲದ ರಾಜಕೀಯದಿಂದ ರಾಜ್ಯದ ಗಮನ ಸೆಳೆದಿರುವ ಹೊಸಕೋಟೆಯಲ್ಲಿ ಈಗ ತೋಳ್ಬಲದ ರಾಜಕೀಯೂ ನಡೆಯುತ್ತಿರುವಂತೆ ತೋರುತ್ತಿದೆ.
ಹೊಸಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜು ಅವರ ಬೆಂಬಲಿಗರ ಮೇಲೆ ನಿನ್ನೆ ರಾತ್ರಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಹೊಸಕೋಟೆಯ ಕಾಜಿ ಹೊಸಹಳ್ಳಿ ಗ್ರಾಮಕ್ಕೆ ನಿನ್ನೆ ಎಂಟಿಬಿ ಬೆಂಬಲಿಗರಾದ ಮಂಜುನಾಥ ಮತ್ತಿತರರು ಪ್ರಚಾರಕ್ಕೆಂದು ತೆರಳಿದ್ದಾಗ ಗ್ರಾಮದಲ್ಲಿನ ಶರತ್ ಬಚ್ಚೇಗೌಡ ಬೆಂಬಲಿಗರಿಗೂ ಎಂಟಿಬಿ ಬೆಂಬಲಿಗರಿಗೂ ಮಾತಿನ ಚಕಮಕಿ ಏರ್ಪಟ್ಟು, ನಂತರ ಕೈ-ಕೈ ಮಿಲಾಯಿಸಿದ್ದಾರೆ.

ಮಂಜುನಾಥ ಎಂಬುವರಿಗೆ ತಲೆಗೆ ತೀವ್ರ ಪೆಟ್ಟಾಗಿದೆ. ಇನ್ನೂ ಕೆಲವರಿಗೆ ಗಾಯಗಳಾಗಿವೆ. ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ ಮಾಡಬಾರದು ಎಂದು ಹೇಳಿ ಶರತ್ ಬಚ್ಚೇಗೌಡ ಪರ ಬೆಂಬಲಿಗರು ಹಲ್ಲೆ ಮಾಡಿದರು ಎಂದು ಗಾಯಾಳುಗಳು ಹೇಳಿದ್ದಾರೆ.
ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಎಂಟಿಬಿ ನಾಗರಾಜು ಅವರು ಗಾಯಾಳುಗಳನ್ನು ಮಾತನಾಡಿಸಿ ಧೈರ್ಯ ತುಂಬಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜು, 'ಬಚ್ಚೇಗೌಡರು ಕಳೆದ ಮೂವತ್ತು ವರ್ಷಗಳಿಂದ ರೌಡಿಸಂ ರಾಜಕಾರಣ ಮಾಡುತ್ತಾ ಹೊಸಕೋಟೆಯನ್ನು ಆಳಿದರು, ಈಗ ಅವರ ಮಗ ಕೂಡ ಅದೇ ಹಾದಿ ಹಿಡಿದಿದ್ದಾರೆ' ಎಂದರು.
'ನಮ್ಮ ಬೆಂಬಲಿಗರ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಕಲ್ಲು ತೂರಿ ಗಾಯಗೊಳಿಸಿದ್ದಾರೆ. ಚುನಾವಣೆ ಸಮಯ ರೌಡಿಸಂ ರಾಜಕೀಯ ಪ್ರಾರಂಭ ಮಾಡಿದ್ದಾರೆ. ಈ ಹಿಂದೆಯೂ ಬಚ್ಚೇಗೌಡ ಕುಟುಂಬ ಇದನ್ನೇ ಮಾಡುತ್ತಿತ್ತು. ಈಗ ಮತ್ತೆ ಅದೇ ಕೆಟ್ಟ ರಾಜಕೀಯ ಪ್ರಾರಂಭ ಮಾಡಿದ್ದಾರೆ' ಎಂದರು.
'ಎಷ್ಟೇ ರೌಡಿಸಂ ಮಾಡಿದರೂ ಬಚ್ಚೇಗೌಡರ ಕುಟುಂಬದವರು ನನ್ನ ವಿರುದ್ಧ ಮೂರು ಬಾರಿ ಸೋತಿದ್ದಾರೆ. ಈಗಲೂ ಜನರು ಅವರ ರೌಡಿ ರಾಜಕಾರಣಕ್ಕೆ ತಕ್ಕ ಉತ್ತರ ಕೊಡುತ್ತಾರೆ' ಎಂದರು.












Click it and Unblock the Notifications