ಬನ್ನೇರುಘಟ್ಟದಲ್ಲಿ ಗಣಿಗಾರಿಕೆ ನಿರ್ಬಂಧಿಸುವಂತೆ ರಾಜೀವ್ ಮನವಿ
ಬೆಂಗಳೂರು, ಡಿಸೆಂಬರ್ 21: ಬನ್ನೇರುಘಟ್ಟ ಜೈವಿಕ ಅರಣ್ಯದ ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆಯನ್ನು ನಿರ್ಬಂಧಿಸುವಂತೆ ಒತ್ತಾಯಿಸಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಶುಕ್ರವಾರ ಕೇಂದ್ರ ಸಚಿವ ಹರ್ಷವರ್ದನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ರಾಜೀವ್ ಅವರ ಮನವಿಗೆ ಸ್ಪಂದಿಸಿರುವ ಸಚಿವರು ಗಣಿಗಾರಿಕೆ ನಿರ್ಬಂಧದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸೇವ್ ಬನ್ನೇರುಘಟ್ಟ ಎಂಬ ಶೀರ್ಷಿಕೆಯಡಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಬೆಂಗಳೂರು ಸಂಸ್ಥೆಯು ನಿರಂತರ ಹೋರಾಟ ಮಾಡುತ್ತಿದೆ. ಬನ್ನೇರುಘಟ್ಟ ಅರಣ್ಯದ ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ಮಾಡುವುದರಿಂದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ತೊಂದರೆಯುಂಟಾಗುತ್ತಿದೆ ಎನ್ನುವುದು ಅವರ ವಾದವಾಗಿದೆ.
ಗಣಿಗಾರಿಕೆ ಹೆಚ್ಚಳದಿಂದ ಕಾಡು ನಾಶವಾಗುತ್ತಿದೆ, ಅಷ್ಟೇ ಅಲ್ಲದೆ ಗಣಿಗಾರಿಕೆ ಮಾಫಿಯಾದಿಂದ ಹಳ್ಳಿಗೆ ಹಳ್ಳಿಯೇ ನಾಶವಾಗುತ್ತಿದೆ, ಆನೆಗಳು ಆ ಸ್ಥಳವನ್ನು ಬಿಟ್ಟು ಬೇರೆಡೆಗೆ ಹೋಗುತ್ತಿವೆ. ಸುತ್ತಮುತ್ತಲಿನ ಹಳ್ಳಿ ಜನರ ಆರೋಗ್ಯದ ಮೇಲೂ ತೀವ್ರ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ನಮ್ಮ ಬೆಂಗಳೂರು ಪ್ರತಿಷ್ಠಾನ ಆರ್ಟಿಐ ಅರ್ಜಿ ಹಾಕಿ ಪಡೆದಿರುವ ಮಾಹಿತಿ ಪ್ರಕಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶದಿಂದ ಕೇವಲ 1 ಕಿ.ಮೀ ಹಾಗೂ ಬಫರ್ ವಲಯದಿಂದ ಕೇವಲ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ.












Click it and Unblock the Notifications