ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಮು ರೈಲು; ಸಂಸದರಿಂದ ಬೇಡಿಕೆ
ಬೆಂಗಳೂರು, ಜೂನ್ 24: ಬೆಂಗಳೂರು ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕ್ಯಾಬ್, ಬಸ್, ರೈಲು ಸೇರಿದಂತೆ ಅನೇಕ ಸಾರಿಗೆ ವ್ಯವಸ್ಥೆ ಇದೆ. ಆದರೆ ಕ್ಯಾಬ್ ದರ ವಿಮಾನದ ಪ್ರಯಾಣ ದರಕ್ಕಿಂತ ಹೆಚ್ಚು ಎಂಬ ದೂರು ಇದ್ದು, ಇದನ್ನು ಪ್ರಯಾಣಿಕರು ಸಹ ಒಪ್ಪುತ್ತಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಕಲ್ಪಿಸಲು 2021ರಲ್ಲಿ ನೈಋತ್ಯ ರೈಲ್ವೆ ಪ್ರಯತ್ನ ಆರಂಭಿಸಿತು. ರೈಲು ಸೇವೆಯೂ ಆರಂಭವಾಯಿತು. ಆದರೆ ಈ ಸೇವೆ ನಿರೀಕ್ಷೆ ಮಾಡಿದಷ್ಟು ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಸೆಳೆಯುತ್ತಿಲ್ಲ.

ವಿಮಾನ ಮತ್ತು ರೈಲು ಪ್ರಯಾಣದ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಇಲ್ಲ. ಲಗೇಜ್ ಸಾಗಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಪ್ರಯಾಣಿಕರು ಮಾತ್ರವಲ್ಲ, ಪ್ರತಿದಿನ ಸಂಚಾರ ನಡೆಸುವ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ರೈಲನ್ನು ಬಳಕೆ ಮಾಡುತ್ತಿಲ್ಲ.
ಬೆಂಗಳೂರು ನಗರದಿಂದ ಏರ್ಪೋರ್ಟ್ ತಲುಪಲು ಕಡಿಮೆ ಪ್ರಯಾಣ ದರವಿದೆ. ರೈಲ್ವೆ ಇಲಾಖೆ ಸುಮಾರು 3 ಕೋಟಿ ರೂ. ಖರ್ಚು ಮಾಡಿ 'ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್' ಎಂದು ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಿದೆ. ಆದರೆ ಜನರನ್ನು ಸೆಳೆಯಲು ಮಾತ್ರ ಇನ್ನೂ ಸಾಧ್ಯವಾಗಿಲ್ಲ.
ಟ್ವೀಟ್ ಮಾಡಿದ ಸಂಸದರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ. ಸಿ. ಮೋಹನ್ ಸೋಮವಾರ ಟ್ವೀಟ್ವೊಂದನ್ನು ಮಾಡಿದ್ದಾರೆ. ನೈಋತ್ಯ ರೈಲ್ವೆ ಬೈಯಪ್ಪನಹಳ್ಳಿಯಿಂದ (ಮೆಟ್ರೋ ಸಂಪರ್ಕಿಸುವಂತೆ) ವಿಮಾನ ನಿಲ್ದಾಣಕ್ಕೆ ಮೆಮು ರೈಲು ಓಡಿಸಬೇಕು ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಬೈಯಪ್ಪನಹಳ್ಳಿಯಿಂದ ಪ್ರತಿ 30 ನಿಮಿಷಕ್ಕೆ ಬೆಳಗ್ಗೆ 5 ರಿಂದ 8 ಗಂಟೆಯ ತನಕ ಮೆಮು ರೈಲು ಓಡಿಸಬೇಕು. ಏರ್ಪೋರ್ಟ್ಗೆ ಹೆಚ್ಚು ಜನರು ಪ್ರಯಾಣಿಸುವ ಸಂದರ್ಭದಲ್ಲಿಯೂ ರೈಲುಗಳು ಸಂಚಾರ ನಡೆಸಬೇಕು ಎಂದು ಸಂಸದರು ಹೇಳಿದ್ದಾರೆ.
Taking a cab from Bengaluru city to @BLRAirport can cost more than the flight itself. @SWRRLY should introduce MEMU trains from Baiyappanahalli (accessible via Metro) to the airport every 30 mins between 5 AM and 8 AM, aligning with available line capacity and peak airport times. pic.twitter.com/wI5F5AkEmO
— P C Mohan (@PCMohanMP) June 24, 2024
2021ರಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ರೈಲು ಸಂಚಾರ ಕಲ್ಪಿಸಬೇಕು ಎಂಬ ಬೇಡಿಕೆ ಈಡೇರಿತು. ನಗರದಿಂದ 'ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್'ಗೆ ರೈಲುಗಳನ್ನು ಪರಿಚಯಿಸಲಾಯಿತು. ಆದರೆ ರೈಲ್ವೆ ಇಲಾಖೆ ನಿರೀಕ್ಷೆ ಮಾಡಿದಷ್ಟು ಪ್ರಯಾಣಿಕರು ಆಗಮಿಸಲಿಲ್ಲ.
ಮೊದಲು ರೈಲ್ವೆ ಇಲಾಖೆ 'ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್'ಗೆ 10 ರೈಲುಗಳನ್ನು ಪರಿಚಯಿಸಿತು. ಪ್ರಯಾಣಿಕರ ಪ್ರತಿಕ್ರಿಯೆ ನಿರೀಕ್ಷೆ ಮಾಡುವಾಗಲೇ ಕೋವಿಡ್ ಬಂತು. ಎಲ್ಲಾ ರೈಲುಗಳ ಸಂಚಾರ ರದ್ದುಗೊಂಡವು. ಬಳಿಕ ರೈಲು ಸಂಚಾರ ಆರಂಭಗೊಂಡರೂ ಪ್ರಯಾಣಿಕರು ಆಗಮಿಸಲಿಲ್ಲ.
ಕೆಐಎಗೆ ಆಗಮಿಸುವ ಪ್ರಯಾಣಿಕರು, ಪ್ರತಿದಿನ ಸಂಚಾರ ನಡೆಸುವ ಸಿಬ್ಬಂದಿ ಗಮನದಲ್ಲಿಟ್ಟುಕೊಂಡು ರೈಲು ಸೇವೆ ಆರಂಭಿಸಲಾಯಿತು. ಆಗ ಕೇಂದ್ರ ರೈಲ್ವೆ ಸಚಿವರು ಸಹ ಟ್ವೀಟ್ ಮಾಡಿ, ಇದು ಬೆಂಗಳೂರು ನಗರಕ್ಕೆ ದೊಡ್ಡ ಕೊಡುಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ, ಮೆಜೆಸ್ಟಿಕ್ ಮೂಲಕ ದೇವನಹಳ್ಳಿ ಮಾರ್ಗವಾಗಿ ಕೋಲಾರ, ಚಿಕ್ಕಬಳ್ಳಾಪುರ ಸಂಪರ್ಕಿಸಲು ಹೆಚ್ಚು ರೈಲುಗಳನ್ನು ಓಡಿಸುವ ಮೂಲಕ ಕೆಐಎಗೆ ರೈಲು ಸಂಪರ್ಕ ಹೆಚ್ಚಿಸಲು ಪ್ರಯತ್ನ ನಡೆದಿದೆ.












Click it and Unblock the Notifications