ಮಹಿಳೆಯರಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ; ಪ್ರಚಾರದ ಕೊನೇ ದಿನ ಗ್ಯಾರಂಟಿ ಘೋಷಿಸಿದ ಡಿಕೆಶಿ
ಬೆಂಗಳೂರು, ಮೇ 8: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ರಣಕಣ ಅಂತಿಮ ಹಂತ ತಲುಪಿದ್ದು, ಮತದಾನಕ್ಕೆ ಎರಡೇ ದಿನಗಳು ಬಾಕಿ ಉಳಿದಿವೆ. ಮೇ 10ರಂದು ಮತದಾನ ನಡೆಯಲಿದೆ.
ಇಂದು (ಸೋಮವಾರ, ಮೇ 8) ಸಂಜೆ 6 ಗಂಟೆಯ ನಂತರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಇದಕ್ಕೂ ಮುನ್ನ ರಾಜಕೀಯ ಪಕ್ಷಗಳು ಮತ್ತು ನಾಯಕರು ಮತದಾರರ ಮನ ಗೆಲ್ಲಲು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಈ ಬಾರಿ ಅಧಿಕಾರದ ಗದ್ದುಗೆಗೇರಲು ಪ್ರಯತ್ನಿಸಿರುವ ಕಾಂಗ್ರೆಸ್, ಚುನಾವಣೆಗೂ ಮುನ್ನ ಹಲವು ಗ್ಯಾರಂಟಿ ಘೋಷಣೆಗಳನ್ನು ತಿಳಿಸಿದೆ. ಇವುಗಳನ್ನು ಕಾಂಗ್ರೆಸ್ನ ಪ್ರಣಾಳಿಕೆಯಲ್ಲೂ ಸೇರಿಸಲಾಗಿದೆ.
ಈಗಾಗಲೇ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂ., ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿಯೊಬ್ಬರಿಗೆ 10 ಕೆಜಿ ಉಚಿತ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ 3000 ರೂಪಾಯಿ, ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ವೇತನ, ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ವೇತನದಂತಹ ಗ್ಯಾರಂಟಿಗಳನ್ನು ಘೋಷಿಸಿದೆ.
ಇದೀಗ ಕೊನೆಯ ದಿನದ ಚುನಾವಣಾ ಪ್ರಚಾರದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತೊಂದು ಗ್ಯಾರಂಟಿ ಭರವಸೆಯನ್ನು ಘೋಷಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗಾಗಿ ಎಷ್ಟು ಸಾಧ್ಯವೋ ಅಷ್ಟು ಕೆರೆಗಳನ್ನು ತುಂಬಿಸುತ್ತೇವೆ. ಹೆಣ್ಣುಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಯನ್ನು ಹೊಸದಾಗಿ ನಿರ್ಮಿಸಿ, ಉಚಿತವಾಗಿ ಹೆರಿಗೆ ಸೌಲಭ್ಯ ಸಿಗುವಂತೆ ಮಾಡುತ್ತೇವೆ," ಎಂದು ತಿಳಿಸಿದರು.
"ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಂತಹ ನಗರಗಳಿಗೆ ಬರುವುದನ್ನು ತಪ್ಪಿಸುತ್ತೇವೆ," ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರಲ್ಲ
'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರದ ಯೋಜನೆಗಳಿಗೆ ಬ್ರೇಕ್ ಬೀಳಲಿದೆ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಮಿಸ್ಟರ್ ನಡ್ಡಾಜಿ, ಏನ್ ಹೆದರಿಸ್ತೀರಾ? ಕೇಂದ್ರದ ಯೋಜನೆಗಳನ್ನು ನಿಲ್ಲಿಸುತ್ತೇವೆ ಅಂತ ಹೆದರಿಸ್ತೀರಾ? ಇಂತಹ ಬ್ಲ್ಯಾಕ್ಮೇಲ್ಗೆ ಹೆದರಲ್ಲ," ಎಂದರು.
"ನಿಮ್ಮ ಬಿಜೆಪಿ ಶಾಸಕರು, ಸಂಸದರು ಮಕ್ಕಳ ತರಹ ಸುಮ್ಮನಿರಬಹುದು. ಆದರೆ ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರುವುದಿಲ್ಲ. ನಿಮ್ಮ ಪ್ರಧಾನಿಯನ್ನು ಬೀದಿ ಬೀದಿ ಅಲೆಯೋ ತರಹ ಮಾಡಿದ್ದೀರಿ," ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
"ನಾವು ಈ ಬಾರಿ 141 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಮೇ 15ನೇ ತಾರೀಕು ಕಾಂಗ್ರೆಸ್ ಸರ್ಕಾರ ತಂದು ನಾವು ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ," ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಭಾಗವಾಗಿ 224 ಕ್ಷೇತ್ರಗಳಿಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಯಾವ ಪಕ್ಷ ನೂತನ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.












Click it and Unblock the Notifications