ಅಂಬೇಡ್ಕರ್ ಫೋಟೊ ಎಸೆದ ಬಿಎಸ್ ವೈ ಈಗ ರಾಜ್ಯಾಧ್ಯಕ್ಷ
ಬೆಂಗಳೂರು, ಏಪ್ರಿಲ್ 14: ಬಿಎಸ್ ಯಡಿಯೂರಪ್ಪ ಅವರು ಏನು ಮಾಡಿದರೂ ದಲಿತರಿಗೆ ನಾಯಕರಾಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಡಿಸಿಎಂಯಾಗಿದ್ದ ಕಾಲದಲ್ಲಿ ಬಿ.ಆರ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರು ಇಂದು ಅಂಬೇಡ್ಕರ್ ಹುಟ್ಟುಹಬ್ಬದಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ದುರಂತ ಎಂದು ಕಾಂಗ್ರೆಸ್ ಶಾಸಕ ವಿಎಸ್ ಉಗ್ರಪ್ಪ ಗುಡುಗಿದ್ದಾರೆ.[ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]
'ನಾನು ಲಿಂಗಾಯತ ನಾಯಕನಷ್ಟೇ ಅಲ್ಲ, ನಾನು ಎಲ್ಲಾ ವರ್ಗಗಳ ನಾಯಕ. ನನ್ನ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರು,ದಲಿತರಿಗೆ ಹೆಚ್ಚಿನ ಅನುದಾನ, ಆದ್ಯತೆ ನೀಡಿದ್ದೇನೆ' ಎಂದು ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ['ಸಿಎಂ ಆಗುವುದಕ್ಕಿಂತ 150 ಸ್ಥಾನ ಗೆಲ್ಲುವುದು ನನ್ನ ಗುರಿ': ಬಿಎಸ್ವೈ]

ಆದರೆ, ಡಿಸಿಎಂ ಆಗಿದ್ದಾಗ ಅವರ ಕಚೇರಿಯಲ್ಲಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಎತ್ತಂಗಡಿ ಮಾಡಿಸಿದ್ದು ಜನರು ಮರೆತ್ತಿಲ್ಲ. ಈಗ ಅಂಬೇಡ್ಕರ್ ಹುಟ್ಟುಹಬ್ಬದ ದಿನ ಬಿಜೆಪಿ ಅಧ್ಯಕ್ಷರಾಗುತ್ತಿರುವುದು ನನ್ನ ಪುಣ್ಯ ಎಂದು ಬೃಹತ್ ನಾಟಕವಾಡುತ್ತಿದ್ದಾರೆ ಎಂದು ಉಗ್ರಪ್ಪ ಲೇವಡಿ ಮಾಡಿದ್ದಾರೆ.[ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ ಪಟ್ಟ : ಯಾರು, ಏನು ಹೇಳಿದರು?]
ಭ್ರಷ್ಟಾಚಾರ, ಸ್ವಜನಪಕ್ಷಪಾತಿಯಾಗಿರುವ ಯಡಿಯೂರಪ್ಪ ಅವರ ಪ್ರತಿಷ್ಠೆ, ಕೋಪ ತಾಪಕ್ಕೆ ಅನೇಕ ಬಿಜೆಪಿ ನಾಯಕರು ಬೇಸರಿಸಿಕೊಂಡಿದ್ದಾರೆ. ಅಷ್ಟೇ ಏಕೆ 2011ರಲ್ಲಿ ಯಡಿಯೂರಪ್ಪ ಅವರಿಗೆ ಯಾವುದೇ ಉನ್ನತ ಹುದ್ದೆ ಬೇಡ ಎಂದು ಅನಂತಕುಮಾರ್, ಸುರೇಶ್ ಕುಮಾರ್ ಹಾಗೂ ಈಶ್ವರಪ್ಪ ಅವರು ವಿರೋಧಿಸಿದ್ದನ್ನು ಮರೆಯಲು ಸಾಧ್ಯವೇ?
ಜನ ಇವರನ್ನು ಆಯ್ಕೆ ಮಾಡಿ ಸಂಸದರಾಗಿ ಕಾರ್ಯ ನಿರ್ವಹಿಸಿ ಎಂದು ಕಳಿಸಿದರೆ, ಜನ ಮನ್ನಣೆಗೆ ಬೆಲೆ ಕೊಡದೆ ಸಿಎಂ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನ ಪಡೆಯಲು ಕರ್ನಾಟಕದಲ್ಲೇ ಬೀಡು ಬಿಟ್ಟ ಯಡಿಯೂರಪ್ಪ ಅವರಿಂದ ಏನು ತಾನೆ ನಿರೀಕ್ಷಿಸಲು ಸಾಧ್ಯ?[ಎಂಎಲ್ ಸಿ ವಿ.ಎಸ್.ಉಗ್ರಪ್ಪ ವಿರುದ್ಧ ಎಫ್ ಐಆರ್]
ಯಡಿಯೂರಪ್ಪ ವಿರುದ್ಧ ಎಲ್ಲಾ ಕೇಸುಗಳು ಖುಲಾಸೆಗೊಂಡಿದೆ ಎಂದರೆ ಅದಕ್ಕಿಂತ ದೊಡ್ಡ ಸುಳ್ಳು ಮತ್ತೊಂದ್ದಿಲ್ಲ. ರಾಚೇನಹಳ್ಳಿ ಪ್ರಕರಣ, ಹಲವಾರು ಡಿನೋಟಿಫಿಕೇಷನ್ ಕೇಸ್, ಭದ್ರಾ ಅರಣ್ಯ ಒತ್ತುವರಿ, ಗಣಿ ಕಂಪನಿಗಳಿಂದ ಲಂಚ ಹೀಗೆ ನಾನಾ ಪ್ರಕರಣಗಳು ಇನ್ನೂ ಬಾಕಿ ಇವೆ ಎಂಬುದು ಬಿಜೆಪಿಯವರಿಗೆ ನೆನಪಲ್ಲಿ ಇರಲಿ ಎಂದು ಉಗ್ರಪ್ಪ ಹೇಳಿದ್ದಾರೆ.












Click it and Unblock the Notifications