ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ: ಕಮಲ ಪಡೆ ವಿರುದ್ಧ ಕೆಂಡಾಮಂಡಲರಾದ ಯತ್ನಾಳ್
ಬೆಂಗಳೂರು, ಏಪ್ರಿಲ್04: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಜೆಪಿ ನಡೆಯನ್ನು ಖಂಡಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಂಡಾಮಂಡಲರಾಗಿದ್ದಾರೆ. ಕೊಡಗಿನ ಬಿಜೆಪಿ ಕಾರ್ಯಕರ್ತರಾದ ವಿನಯ್ ಎಂಬುವವರು ಕಾಂಗ್ರೆಸ್ ನ ಕೆಲ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿ ಬೆದರಿಕೆಯೊಡ್ಡಿದ್ದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ.
ಇಷ್ಟೆಲ್ಲಾ ಆಗುತ್ತಿದ್ದರೂ ಬಿಜೆಪಿ ಕರ್ನಾಟಕ ಘಟಕವು ವಿನಯ್ ಅವರಿಗೆ ಯಾವುದೇ ಕಾನೂನು ನೆರವು ನೀಡದೆ ಈಗ ಟ್ವಿಟ್ಟರ್ನಲ್ಲಿ ಆರ್ಭಟಿಸುತ್ತಿರುವುದು ಇವರ ಆದ್ಯತೆಗಳನ್ನು ತೋರಿಸುತ್ತದೆ ಎಂಬುದಾಗಿ ಗುಡುಗಿದ್ದಾರೆ. ಆಡಳಿತಾರೂಢ ಪಕ್ಷದ ಇಬ್ಬರು ಹಾಲಿ ಶಾಸಕರ ಪಾತ್ರವಿದೇ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಿಂದುತ್ವವಾದಿಗಳನ್ನು ಹಾಗೂ ಬಲಪಂಕ್ತೀಯರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅವರ ಕುಟುಂಬವನ್ನು, ಸ್ನೇಹಿತರನ್ನು ಬೆದರಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಕುಟಿಲ ರಾಜಕಾರಣವನ್ನು ತೋರಿಸುತ್ತದೆ.

ಹಿಂದುತ್ವದ ಪರ ಮಾತನಾಡಿದವರನ್ನು ಮೂಲೆಗುಂಪು ಮಾಡಿ ಅವರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡುವವರನ್ನು ಸುಮ್ಮನೆ ಬಿಡಬಾರದು. ವಿನಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೆಯೇ ಅವರ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಪೊಲೀಸರು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಿ. ಈಗಲಾದರೂ ಬಿಜೆಪಿ ನಾಯಕರು ಅಡ್ಜಸ್ಟ್ಮೆಂಟ್ ಮಾಡಿಕೊಳ್ಳದೆ ವಿನಯ್ ಆತ್ಮಕ್ಕೆ ಶಾಂತಿ ಸಿಗುವುದಕ್ಕಾಗಿ ಹೋರಾಟ ಮಾಡಲಿ. ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಯತ್ನಾಳ್ ಅವರು ತಿಳಿಸಿದ್ದಾರೆ.
ವಿನಯ್ ಸಾವಿನ ಪ್ರಕರಣದ ಸಿಬಿಐ ತನಿಖೆ ಆಗ್ರಹ
ವಿನಯ್ ಸೋಮಯ್ಯ ರವರ ಸಾವಿನ ಪ್ರಕರಣದಲ್ಲಿ ಎಸ್.ಪಿ. ನೇರ ಹೊಣೆ ಎಂಬುದು ಗೊತ್ತಾಗಿದೆ. ಎಸ್ಪಿಯವರನ್ನು ಅಮಾನತು ಮಾಡಬೇಕು. ಪ್ರಕರಣದಲ್ಲಿ ಒಳಗೊಂಡ ಆರೋಪಿತರಾದ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಆರೋಪಿತ ತನ್ನೀರ್ ಮೈನಾ ಅವರನ್ನು ಎಫ್ಐಆರ್ನಲ್ಲಿ ಸೇರಿಸಿ ತನಿಖೆ ನಡೆಸಬೇಕು. ಅವರನ್ನು ಬಂಧಿಸಬೇಕು' ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ರವರು ಅಕಾಲಿಕ ನಿಧನರಾಗಿದ್ದು, ಅವರಿಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಲ್ಲದೇ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. 'ಆತ್ಮಹತ್ಯೆ ಹಿಂದೆ ಮಾನ್ಯ ಶಾಸಕ ಪೊನ್ನಣ್ಣನವರು ಇದ್ದಾರೆ ಎಂದು ವಿನಯ್ ಸೋಮಯ್ಯ ಡೆತ್ ನೋಟಿನಲ್ಲಿ ಬರೆದುಕೊಂಡಿದ್ದಾರೆ' ಎಂದು ತಿಳಿಸಿದರು. 'ತಡಮಾಡದೇ ಈ ಕೇಸನ್ನು ಸಿಬಿಐಗೆ ಕೊಡಿ' ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
'ಪ್ರಕರಣದಲ್ಲಿ ಪೊಲೀಸರು ನೇರವಾಗಿ ಭಾಗವಹಿಸಿದ್ದಾರೆ. ಜಾಮೀನು ಪಡೆದರೂ ಯಾಕೆ ಅವರನ್ನು ಹುಡುಕುತ್ತಿದ್ದರು? ಅವರೇನು ರೌಡಿಯೇ?' ಎಂದು ಕೇಳಿದರು. 'ಕಾಂಗ್ರೆಸ್ಸಿನ ಅಟ್ಟಹಾಸ ಮೆಟ್ಟಿ ನಿಲ್ಲುವ ಶಕ್ತಿ ನಮಗಿದೆ ಎಂದು ಈ ಸರಕಾರಕ್ಕೆ ಎಚ್ಚರಿಕೆ ನೀಡುವುದಾಗಿ' ತಿಳಿಸಿದರು. 'ಯಾವುದೇ ಕಾರಣಕ್ಕೆ ಜೀವತ್ಯಾಗ ಮಾಡಬಾರದು. ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದು ಎರಡು ತಿಂಗಳಿಂದ ನಡೆದ ಘಟನೆ; ಆವತ್ತಿನಿಂದ ವಿನಯ್ ಸೋಮಯ್ಯರಿಗೆ ಕಿರುಕುಳ ಕೊಟ್ಟಿದ್ದಾರೆ. ತೊಂದರೆ ಆಗಿದೆ. ಅಪಮಾನ ಆಗಿದೆ. ಸಹಿಸಿಕೊಳ್ಳಲಾಗದ ಪರಿಸ್ಥಿತಿ ಉದ್ಭವವಾಗಿದೆ. ಅವರಿಗೆ ತೊಂದರೆ ಕೊಟ್ಟ ಕಾರಣ ಕೋರ್ಟಿಗೆ ಹೋಗಿದ್ದರು. ಅವರು ತಮ್ಮ ಡೆತ್ನೋಟಿನಲ್ಲಿ ಇಷ್ಟು ಕಾಲ ನನ್ನ ತಾಯಿಯನ್ನೂ ನೋಡಲು ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ವಿವರಿಸಿದರು.
ಮಂಥರ್ ಗೌಡ ಎಂಬ ಇನ್ನೊಬ್ಬ ಶಾಸಕರೂ ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ. ಸರಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಸ್ವಚ್ಛತೆಯೇ ಇಲ್ಲ ಎಂದು ಸೋಷಿಯಲ್ ಮೀಡಿಯ ಗುಂಪಿನಲ್ಲಿ ಯಾರೋ ಹಾಕಿದ್ದನ್ನು ವಿನಯ್ ಮರುಪೋಸ್ಟ್ ಮಾಡಿದ್ದರು. ಈ ಗ್ರೂಪಿನಲ್ಲಿ ನಾಲ್ಕೈದು ಜನ ಆಡ್ಮಿನ್ಗಳಿದ್ದಾರೆ. ಈತನು ಕೂಡ ಒಬ್ಬ ಆಡ್ಮಿನ್. ರೌಡಿಶೀಟರ್ ಮಾಡಲು ಪೊಲೀಸರು ಹೊರಟ ವಿಚಾರವೂ ಡೆತ್ ನೋಟಿನಲ್ಲಿದೆ ಎಂದರು.
'ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಇದೆ. ಕಾಂಗ್ರೆಸ್ ಶಾಸಕರ ಮತ್ತು ನಾಯಕರ ಅಧಿಕಾರದ ಅಟ್ಟಹಾಸ ಬಹಳ ಹೆಚ್ಚಾಗಿದೆ. ಯಾದಗಿರಿಯಲ್ಲಿ ಎಸ್ಐ ಪರಶುರಾಂ ಆತ್ಮಹತ್ಯೆ ಮಾಡಿಕೊಂಡಾಗ ಅಲ್ಲಿ ಶಾಸಕ ಚೆನ್ನಾರೆಡ್ಡಿ ಹೆಸರು ಬರೆಯಲಾಗಿತ್ತು. ಜಾತಿ ನಿಂದನೆ, ಹಣ ಕೇಳಿದ ಆರೋಪವಿತ್ತು' ಎಂದು ವಿವರಿಸಿದರು. 'ಅಲ್ಲಿ ಶಾಸಕರನ್ನು ಬಂಧಿಸಿಲ್ಲ; ಗುಲ್ಬರ್ಗದಲ್ಲಿ ಸಚಿನ್ ಪಾಂಚಾಳ್ ಡೆತ್ ನೋಟಿನಲ್ಲಿ ಪ್ರಿಯಾಂಕ್ ಖರ್ಗೆಯವರ ಹೆಸರು ಬರೆದಿತ್ತು. ಅವರ ಸಹಚರರ ಹೆಸರಿದ್ದರೂ ಕೇಸ್ ಏನಾಗಿದೆ ಎಂದು ಪ್ರಶ್ನಿಸಿದರು.












Click it and Unblock the Notifications