'ಎಪಿಎಂಸಿ ಕಾಯ್ದೆ: ವಿರೋಧ ಪಕ್ಷವು ಜನರ ದಾರಿ ತಪ್ಪಿಸುತ್ತಿದೆ'
ಬೆಂಗಳೂರು, ಸೆಪ್ಟೆಂಬರ್ 23: ಕೃಷಿ ಮಸೂದೆ ಕುರಿತು ಇಲ್ಲ ಸಲ್ಲದ ಆರೋಪ ಮಾಡಿ ವಿರೋಧ ಪಕ್ಷವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಎಸ್ಟಿ ಸೋಮಶೇಖರ್ ಆರೋಪಿಸಿದ್ದಾರೆ.
ಎಪಿಎಂಸಿ ಕಾಯ್ದೆ ರೈತರಿಗೆ ಉಪಕಾರಿಯಾಗಿದೆ. ಕರ್ನಾಟಕದಲ್ಲಿ 162 ಎಪಿಎಂಸಿಗಳಿದ್ದು, ಇವುಗಳೂ ಸೇರಿದಂತೆ ರೈತರು ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸಹ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆದರೆ, ವಿರೋಧಪಕ್ಷದವರಿಂದ ಜನರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಈ ಕಾಯ್ದೆಯಿಂದ ಎಪಿಎಂಸಿಗೆ ಯಾವುದೇ ಧಕ್ಕೆ ಇಲ್ಲ. ಮೊದಲು 1 ರೂ. ಸೆಸ್ ನಿಗದಿ ಮಾಡಿದ್ದೆವು. ಕೊನೆಗೂ ದರವೂ ಹೆಚ್ಚಾಯಿತು ಎಂಬ ಮನವಿಗಳು ಬಂದ ಹಿನ್ನೆಲೆಯಲ್ಲಿ ನಾವು ಸಂಪುಟದಲ್ಲಿ ಚರ್ಚೆ ನಡೆಸಿ 35 ಪೈಸೆಗೆ ನಿಗದಿ ಮಾಡಿದೆವು. ಇಷ್ಟಾದರೂ ಎಪಿಎಂಸಿಗೆ ವರ್ಷಕ್ಕೆ 120 ಕೋಟಿ ರೂ. ಆದಾಯ ಬರುತ್ತದೆ.
ಇದರಿಂದ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರದು. ಅಲ್ಲದೆ, ಎಪಿಎಂಸಿಯ ಅಧಿಕಾರ ಮೊಟುಕುಗೊಳ್ಳುವುದಿಲ್ಲ, ಇದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದರು.

ರೈತರ ಪ್ರತಿಭಟನೆ ಬಗ್ಗೆ ಸರ್ಕಾರದ ಗಮನ
ರೈತರ ಪ್ರತಿಭಟನೆ ಬಗ್ಗೆ ಸರ್ಕಾರ ಸಹ ಗಮನಹರಿಸುತ್ತಿದೆ. ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಕೊಡುವಂತೆ ಮುಖ್ಯಮಂತ್ರಿಗಳು ಸಹ ತಿಳಿಸಿದ್ದಾರೆ. ಹೀಗಾಗಿ ನಾನೂ ಸಹ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರದ ಮಸೂದೆಯನ್ನು ಸ್ವಾಗತಿಸುತ್ತೇನೆ
ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ಸಚಿವನಾಗಿ ನಾನು ಸ್ವಾಗತಿಸುತ್ತೇನೆ. ಇದು ರೈತರಿಗೆ ಅನುಕೂಲವಾಗುವ ಕಾನೂನೇ ವಿನಹ ಯಾವುದೇ ತೊಂದರೆಯಾಗುವುದಿಲ್ಲ. ಈ ಕಾಯ್ದೆ ಬರುವುದಕ್ಕೆ ಮೊದಲು 50ಕ್ಕೂ ಹೆಚ್ಚು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಮಾರಾಟ ಮಾಡುವ ಅವಕಾಶವನ್ನು ಈ ಹಿಂದಿನ ಸರ್ಕಾರವೇ ಅನುಮತಿ ಕೊಟ್ಟಿತ್ತು. ಆದರೆ, ಅದರಿಂದಲೂ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈಗಿನ ನೂತನ ಕಾಯ್ದೆಯಿಂದ ಪೈಪೋಟಿ ಏರ್ಪಟ್ಟು ರೈತರಿಗೇ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸ್ಥಳೀಯ ಎಪಿಎಂಸಿಗೆ ಅಧಿಕಾರ ಇಲ್ಲ
ಸ್ಥಳೀಯ ಎಪಿಎಂಸಿಗೆ ಅಧಿಕಾರ ಇಲ್ಲದಿದ್ದರೂ ರಾಜ್ಯ ಎಪಿಎಂಸಿ ಬೋರ್ಡ್ ಗೆ ಸಂಪೂರ್ಣ ಅಧಿಕಾರ ಇದೆ. ಹೀಗಾಗಿ ಮಲ್ಟಿ ನ್ಯಾಷನಲ್ ಕಂಪನಿಗಳು ಅಕ್ರಮ ಎಸಗುತ್ತಿದ್ದರೆ, ಹಣವನ್ನು ರೈತರಿಗೆ ಸರಿಯಾಗಿ ನೀಡದಿದ್ದರೆ ದೂರು ಕೊಟ್ಟರೆ ಅಂಥವರ ಪರವಾನಗಿಯನ್ನೇ ರದ್ದುಪಡಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಪರ ಅಲೆ
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಈ ಬಾರಿ ವಿಜಯ ಸಾಧಿಸಲಿದೆ. ಪಕ್ಷದ ಪರ ಪೂರಕ ವಾತಾವರಣ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. 264 ಬೂತ್ ಗಳಲ್ಲಿ ಕಮಿಟಿ ರಚಿಸಿ, ವಾಟ್ಸಾಪ್ ಗ್ರೂಪ್ ಮಾಡುತ್ತೇವೆ.
ಅಕ್ಟೋಬರ್ 2 ರಂದು 2 ಸಭೆ ಮಾಡಿ, 2 ಹಂತಗಳಲ್ಲಿ ಸಭೆ ನಡೆಸುತ್ತೇವೆ. ಸಂಜೆ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿ ಬೂತ್ ಗೆ ತಲಾ 5 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ ಎಂದು ಬಿಜೆಪಿ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಅವರು ಹೇಳಿದರು.












Click it and Unblock the Notifications