ಅಭಿಮಾನಿಗಳನ್ನು ಕಂಡು ಭಾವುಕರಾದ ಅಂಬರೀಷ್
ಬೆಂಗಳೂರು, ಏ.11:ಅನಾರೋಗ್ಯದಿಂದ ಬಳಲುತ್ತಿದ್ದ ವಸತಿ ಸಚಿವ, ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಷ್ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಮಲೇಷಿಯಾದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅಂಬರೀಷ್ ದಂಪತಿಗೆ ಅವರ ಜೆಪಿ ನಗರ ನಿವಾಸದಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ.
ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಅಂಬರೀಷ್ ಅವರು ಪತ್ನಿ ಸುಮಲತಾ ಅವರ ಜತೆ ನಗರ ಕೆಂಪೇಗೌಡ ಅಂತಾರಾಷ್ತ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಗೇಟ್ 3 ರಿಂದ ವಿಮಾನ ನಿಲ್ದಾಣದಿಂದ ನಿರ್ಗಮಿಸಿರುವ ಅಂಬರೀಷ್ ಅವರನ್ನು ಅಭಿಮಾನಿಗಳು, ಆಪ್ತರು ಸ್ವಾಗತಿಸಿದ್ದಾರೆ. ಅಂಬರೀಷ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಬೆಳ್ಳಂಬೆಳ್ಳಗೆ ಮಂಡ್ಯ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದೇವನಹಳ್ಳಿ ಸಮೀಪದ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಂಬರೀಷ್ ಗಾಗಿ ಕಾದು ಕುಳಿತ್ತಿದ್ದರು. ಇನ್ನಷ್ಟು ಮಂದಿ ಜೆ.ಪಿ ನಗರದ ಅಂಬರೀಷ್ ನಿವಾಸದ ಬಳಿ ನೆರೆದಿದ್ದಾರೆ.

ಸಮಯ 13.50: ಏಪ್ರಿಲ್ 14ರಂದು ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಘಟಕ ಆಯೋಜಿಸಿರುವ ಬೃಹತ್ ಬಹಿರಂಗ ಸಭೆಯಲ್ಲಿ ಅಂಬರೀಷ್ ಭಾಗವಹಿಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
* ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಮಾಡಿರುವ ಮನವಿಗೆ ಸ್ಪಂದಿಸಿರುವ ಅವರು ಏ. 14ರಂದು ನಡೆಯುವ ಬಹಿರಂಗ ಸಭೆಯಲ್ಲಿ ರಮ್ಯ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ.
* ಚುನಾವಣಾ ಪ್ರಚಾರ ನಿರತ ಮಂಡ್ಯ ಕ್ಷೇತ್ರದ ಅಭ್ಯರ್ಥಿ ರಮ್ಯಾ ಅವರು ಅಂಬರೀಷ್ ಆಗಮನದ ಬಗ್ಗೆ ತಿಳಿದು ಸಂತೋಷ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯ ಮುಖ್ಯ. ಪ್ರಚಾರಕ್ಕೆ ಬರುವ ವಿಷಯದ ಬಗ್ಗೆ ಕೆಪಿಸಿಸಿ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ಬೆಂಬಲ ನನಗೆ ಸದಾ ಕಾಲ ಇದೆ ಎಂದಿದ್ದಾರೆ.
ಸಮಯ 13.25: ಅಭಿಮಾನಿಗಳನ್ನು ಕಂಡು ಭಾವುಕರಾದ ಅಂಬರೀಷ್,ಪೇಷಂಟ್ ಆಗಿ ಕರೆದುಕೊಂಡು ಹೋಗಿ ರೆಬೆಲ್ ಸ್ಟಾರ್ ಆಗಿ ಹಿಂತಿರುಗುತ್ತಾರೆ ಎಂಬ ಡೈಲಾಗ್ ನೆನಪಿಸಿಕೊಂಡರು.
* ಕರ್ನಾಟಕದಲ್ಲಿ ಅಂಬರೀಷ್ ಆಸ್ತಿ ಎಂದರೆ ಏನು ಎಂಬುದು ಇಂದು ಎಲ್ಲರಿಗೂ ಗೊತ್ತಾಗಿದೆ. ಅಭಿಮಾನಿಗಳ ಹಾರೈಕೆಗೆ ತಕ್ಕಂತೆ ನಾಡಿನ ಪರ ಕೆಲಸ ಮಾಡು ಹೋಗು ಎಂದು ದೇವರು ನನ್ನನ್ನು ವಾಪಸ್ ಕಳಿಸಿದ್ದಾರೆ ಎಂದರು.
* ನಿವಾಸದ ಎದುರು ಜನಸಾಗರ ಉದ್ದೇಶಿಸಿ ಮಾತನಾಡಿದ ಅಂಬರೀಷ್, ಜನರ ಸೇವೆಗಾಗಿ ಪತ್ನಿ ಸುಮಲತಾ ನನ್ನನ್ನು ಉಳಿಸಿದಳು. ನನ್ನ ಆರೋಗ್ಯ ಸುಧಾರಣೆಗೆ ಜಾತಿ ಮತ ಪಂಥ ಮೀರಿ ಶುಭ ಹಾರೈಸಿದ ಎಲ್ಲಾ ಜನರಿಗೆ, ವೈದ್ಯರಿಗೆ ನಾನು ಎಂದೆಂದೂ ಚಿರಋಣಿ ಎಂದರು.
* ಇನ್ನು ಜಾಸ್ತಿ ಗಲಾಟೆ ಮಾಡಬಾರದು, ನೋಡಿದ್ದಾಯ್ತಲ್ಲ, ಎಲ್ರೂ ಊರಿಗೆ ಹೋಯ್ತಾ ಇರ್ಬೇಕು ಎಂದು ಅಂಬರೀಷ್ ಎಂದಿನಂತೆ ಘರ್ಜಿಸಿದರು.
ಸಮಯ 13.00: ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜೆ.ಪಿ ನಗರ ನಿವಾಸಕ್ಕೆ ಆಗಮಿಸಿದ ಅಂಬರೀಷ್ ಅವರಿಗೆ ಸುಮಂಗಲಿಯರು ಆರತಿ ಬೆಳಗಿ ಶುಭ ಸ್ವಾಗತ ಕೋರಿದರು.
* ಮಂಡ್ಯ, ಮಳವಳ್ಳಿ, ಮದ್ದೂರು, ಮೈಸೂರು, ಬೆಂಗಳೂರು ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಬಂದಿರುವ ಅಭಿಮಾನಿಗಳು ಅಂಬಿಗೆ ಜಯಘೋಷ ಹಾಕಿದ್ದಾರೆ.

ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಸೋಂಕಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ನಟ, ಸಚಿವ ಅಂಬರೀಷ್ ಆಸ್ಪತ್ರೆಯಿಂದ ಕಳೆದ ವಾರ ಬಿಡುಗಡೆಯಾಗಿದ್ದರು. ಸಿಂಗಾಪುರದಲ್ಲಿರುವ ತಮ್ಮ ಸ್ನೇಹಿತರೊಬ್ಬರ ಫ್ಲಾಟಿನಲ್ಲಿ ತಂಗಿದ್ದ ಅಂಬರೀಷ್ ಅವರು ವಿಶ್ರಾಂತಿ ಪಡೆಯಲು ಅಲ್ಲಿಂದ ಮಲೇಷಿಯಾಕ್ಕೆ ತೆರಳಲಿದ್ದರು.
ಮಾ.30ರಂದು ಅಂಬರೀಷ್ ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದಿನಿಂದ ಪಕ್ಷದ ಅಭ್ಯರ್ಥಿ(ರಮ್ಯಾ) ಪರ ಕೆಲಸ ಮಾಡಲು ಮುಂದಾಗೋಣ. ಅಂಬರೀಷ್ ನಾಯಕತ್ವದಲ್ಲೇ ಚುನಾವಣೆ ನಡೆಯಲಿ ಎಂದು ಅಂಬಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಸುನೀತಾ ರಾಜೇಶ್ ಅವರು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಲೇಷಿಯಾದಿಂದ ಬೆಂಗಳೂರಿನ ನಿವಾಸಕ್ಕೆ ತೆರಳಲಿರುವ ಅಂಬರೀಷ್ ಅವರು ಸಂಜೆ ವೇಳೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಗೃಹ ಸಚಿವ ಕೆಜೆ ಜಾರ್ಜ್ ಅವರ ನೇತೃತ್ವದಲ್ಲಿ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಆಯೋಜನೆಗೊಂಡಿದೆ. ಈ ಮೊದಲು ಜೆಪಿ ನಗರದ ಅಂಬರೀಷ್ ನಿವಾಸದಲ್ಲೇ ಸಂಜೆ 4ಕ್ಕೆ ಸುದ್ದಿಗೋಷ್ಠಿ ನಡೆಸುವ ಸುದ್ದಿ ಬಂದಿತ್ತು. ಆದರೆ, ಕರ್ನಾಟಕ ಸರ್ಕಾರದ ವತಿಯಿಂದ ಸಂಜೆ ಸುದ್ದಿಗೋಷ್ಠಿ ನಡೆಯಲಿದೆ.

ವೈದ್ಯರ ಪ್ರಕಾರ ಅಂಬರೀಷ್ ಅವರು ಗುಣಮುಖರಾಗಿ ಕರ್ನಾಟಕಕ್ಕೆ ವಾಪಸ್ ಬಂದರೂ ಬಹಿರಂಗ ಪ್ರಚಾರದಲ್ಲಿ ತಕ್ಷಣವೇ ತೊಡಗಿಕೊಳ್ಳುವುದು ಕಷ್ಟಸಾಧ್ಯ, ಅಗತ್ಯ ಬಿದ್ದರೆ ಒಂದೆರಡು ದಿನ ಮಾತ್ರ ಬಹಿರಂಗ ಪ್ರಚಾರದಲ್ಲಿ ತೊಡಗಿಕೊಳ್ಳಬಹುದು ಎಂದು ತಿಳಿದು ಬಂದಿದೆ.












Click it and Unblock the Notifications