ಬೇಲೇಕೇರಿ : ವಿವೇಕ್ ಹೆಬ್ಬಾರ್ ಜಾಮೀನು ಮಂಜೂರು
ಬೆಂಗಳೂರು, ಅ.13: ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿವೇಕ್ ಹೆಬ್ಬಾರ್ ಅವರಿಗೆ ಸೋಮವಾರ ಸಿಬಿಐ ವಿಶೇಷ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ.
ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಅವರ ಪುತ್ರ ಉದ್ಯಮಿ ವಿವೇಕ್ ಹೆಬ್ಬಾರ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿವೇಕ್ ಹೆಬ್ಬಾರ್ ಅವರನ್ನು 2013ರ ಡಿಸೆಂಬರ್ ನಲ್ಲಿ ಬಂಧಿಸಲಾಗಿತ್ತು. ಈಗಾಗಲೇ ಮತ್ತೊಂದು ಪ್ರಕರಣದಲ್ಲಿ ವಿವೇಕ್ ಹೆಬ್ಬಾರ್ ಹಾಗೂ ಪ್ರಕಾಶ್ ಹೆಗಡೆ ಅವರಿಗೆ ಜಾಮೀನು ಮಂಜೂರಾಗಿದೆ.

ವಿವೇಕ್ ಹೆಬ್ಬಾರ್ ಒಡೆತನದ ಡ್ರೀಮ್ಸ್ ಲಾಜಿಸ್ಟಿಕ್ಸ್ ಸಂಸ್ಥೆ 9.16 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಬೇಲೇಕೇರಿ ಬಂದಿರನ ಮೂಲಕ ಅಕ್ರಮವಾಗಿ ಸಾಗಿಸಿದ ಆರೋಪ ಹೊತ್ತಿದೆ. ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ನಡೆದ ಈ ಕಾರ್ಯದಲ್ಲಿ ಬಳ್ಳಾರಿಯ ರೆಡ್ಡಿ ಸೋದರರ ಗಣಿಗೆ ಸೇರಿದ ಅದಿರು ಇರುವುದು ಪತ್ತೆಯಾಗಿದೆ. ಈ ಸಾಗಾಣಿಕೆಯ ಜವಾಬ್ದಾರಿಯನ್ನು ಗಾಲಿ ರೆಡ್ಡಿ ಸೋದರರ ಆಪ್ತರಾದ ಸ್ವಸ್ತಿಕ್ ನಾಗರಾಜ್, ಖಾರಪುಡಿ ಮಹೇಶ್ ಅವರು ವಹಿಸಿಕೊಂಡಿದ್ದರು.
ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಜನಾರ್ದನ ರೆಡ್ಡಿ, ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್ಬಾಬು, ಆನಂದ್ಸಿಂಗ್ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಒಟ್ಟು 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. [ಜನಾರ್ದನ ರೆಡ್ಡಿ ಆರೋಪಿ ನಂ.1]
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೂಡ್ಲಿಗಿ ಶಾಸಕ ನಾಗೇಂದ್ರ, ಕಂಪ್ಲಿಶಾಸಕ ಸುರೇಶ್ ಬಾಬು, ಕಾರವಾರದ ಶಾಸಕ ಸತೀಶ್ ಸೈಲ್, ಅಂಕೋಲದ ಮಾಜಿ ಅರಣ್ಯಾಧಿಕಾರಿ ನರೇಂದ್ರ ಹಿತಲಮಕ್ಕಿ, ಮಾಜಿ ರೇಂಜ್ ಆಫೀಸರ್ ಜಿ.ಸಿ ನಾಯಕ್, ಬೇಲೇಕೇರಿ ಬಂದರು ಅಧಿಕಾರಿ ಕ್ಯಾಪ್ಟನ್ ಸಿ ಸ್ವಾಮಿ, ಪ್ರೊಪ್ರೆಟರ್ ಲಾಲ್ ಮಹಲ್ ಲಿ. ರಾಜಕುಮಾರ್ ಇವರೆಲ್ಲರ ಜತೆಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನವಾಗಿದ್ದು ಎಲ್ಲರೂ ಜೈಲಿನಲ್ಲಿದ್ದಾರೆ.












Click it and Unblock the Notifications