ಹೋಟೆಲ್ ತಿಂಡಿ, ಊಟ ದರ ಏರಿಕೆ ಬಗ್ಗೆ ನ.18, 23ಕ್ಕೆ ಸಭೆ
ಬೆಂಗಳೂರು, ನವೆಂಬರ್ 14: ಸದ್ಯಕ್ಕೆ ಬೆಂಗಳೂರಿನ ಹೋಟೆಲ್ಗಳ ತಿಂಡಿ, ಊಟದ ಬೆಲೆ ಏರಿಕೆ ಮಾಡಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ಪಷ್ಟಪಡಿಸಿದರು.
ಹೋಟೆಲ್ ಊಟ, ತಿಂಡಿ ದರ ಏರಿಕೆ ಕುರಿತು 'ಒನ್ ಇಂಡಿಯಾ' ಜೊತೆಗೆ ಮಾತನಾಡಿದ ಅವರು, ಪ್ರತಿ ಲೀಟರ್ಗೆ ಹಾಲಿನ ದರ ಏರಿಕೆ ಆಗಿದೆ. ಸರ್ಕಾರಿ ಗ್ಯಾಸ್ ಸಿಲೆಂಡರ್ ಮೇಲಿನ ಸಬ್ಸಿಡಿ ಮರುಪಾವತಿ ಸ್ಥಗಿತಗೊಳಿಸಿದೆ. ಇದರಿಂದ ಹೋಟೆಲ್ ಉದ್ಯಮ ಮೇಲೆ ಹೊರೆಯಾಗಲಿದೆ. ಈ ಸಂಬಂಧ ಚರ್ಚಿಸಿ, ಸಾಧಕ ಬಾಧಕ ನೋಡಿಕೊಂಡು ದರ ಏರಿಕೆ ಮಾಡಲಾಗುವುದು ಎಂದು ಹೇಳಿದರು.
Breaking; ಬೆಂಗಳೂರಿನ ಹೋಟೆಲ್ನಲ್ಲಿ ಊಟ, ತಿಂಡಿ ದರ ಏರಿಕೆ?
ಸಬ್ಸಿಡಿ ಕಡಿತ, ದರ ಏರಿಕೆ ಕುರಿತು ಚರ್ಚಿಸಿಲು ಇದೇ ನವೆಂಬರ್ 18ರಂದು ದಕ್ಷಿಣ ಭಾರತದ ಹೋಟೆಲ್ ಮಾಲೀಕರ ಸಂಘದಿಂದ ಸಭೆ ನಡೆಯಲಿದೆ. ನಂತರ ನವೆಂಬರ್ 23ಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಮತ್ತೊಂದು ಸಭೆ ನಡೆಸಲಾಗುವುದು. ಆನಂತರವೇ ದರ ಏರಿಕೆ ಬಗ್ಗೆ ನೀರ್ಧರಿಸಲಾಗುವುದು.
ಸರ್ಕಾರಕ್ಕೆ ಈಗಾಗಲೇ ನೀಡಿದ ಮನವಿಯಂತೆ ಸಿಲಿಂಡರ್ ಸಬ್ಸಿಡಿ ಮರಳಿ ನೀಡುವಂತೆ ಆಗ್ರಹಿಸಲಾಗುವುದು. ವಾರದ ಏಳು ದಿನವು 24x7 ಹೋಟೆಲ್ ತೆರೆಯಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಕಾನೂನು ರೀತಿ ಹೋರಾಟ ಕುರಿತು ಚರ್ಚಿಸಲಿದ್ದೇವೆ ಎಂದರು.
ನಿಯಮದಂತೆ ರಸ್ತೆ ಬದಿ ಸಿಲೆಂಡರ್ ಇಟ್ಟುಕೊಂಡು ಊಟು, ತಿಂಡಿ ಮಾರಾಟ ಮಾಡುವುದು ನಿಶಿದ್ಧ. ಹೀಗಾಗಿ ಹೋಟೆಲ್ಗಳಿಗೆ ಇರುವ ನಿಯಮದಂತೆ ರಸ್ತೆ ಬದಿ ತಿಂಡಿ, ಊಟ ಮಾರಾಟಗಾರರಿಗೆ ನಿಯಮ ವಿಧಿಸಬೇಕು. ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಶುಚಿತ್ವ, ಗುಣಮಟ್ಟದ ಆಹಾರ ಮಾರಾಟಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಆತಂಕದಲ್ಲಿ ಗ್ರಾಹಕರು, ಭಯದಲ್ಲಿ ಉದ್ಯಮಿಗಳು
ಈಗಾಗಲೇ ಹೋಟೆಲ್ಗಳಲ್ಲಿ ಒಂದು ಕಪ್ ಟಿ/ಕಾಫಿ ಬೆಲೆ 10ರಿಂದ 20ರೂ.ವರೆಗೆ ಇದೆ. ಇದೇ ವೇಳೆ ಹಾಲಿನ ದರ ಏರಿಕೆ ಆಗಿದೆ. ಜೊತೆಗೆ ಸಿಲೆಂಡರ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದೀಗ ಪುನಃ ಊಟ, ತಿಂಡಿ ಏರಿಸಿದರೆ ಹೇಗೆ ಎಂಬ ಆತಂಕದಲ್ಲಿ ಗ್ರಾಹಕರಿದ್ದಾರೆ.
ಇತ್ತ ಕೋವಿಡ್ ಬಳಿಕ ಹೋಟೆಲ್ ಉದ್ಯಮ ಚೇತರಿಸಿಕೊಂಡಿದೆ. ಇದೀಗ ಡಿಢೀರನೆ ತಿಂಡಿ, ಊಟ, ಚಹಾ, ಕಾಫಿ ದರ ಹೆಚ್ಚಿಸಿದರೆ ಇನ್ನಷ್ಟು ನಷ್ಟವಾಗುವ, ಹಾಲಿ ಆಗುವ ವ್ಯಾಪಾರ ವಹೀವಾಟಿನ ಮೇಲೆ ಹೊಡೆತ ಬೀಳಲಿದೆ ಎಂದು ಭಯ ಹೋಟೆಲ್ ಉದ್ಯಮಿದಾರರಲ್ಲಿಯೂ ಇದೆ.
ನವೆಂಬರ್ 23ರ ನಂತರ ಈ ಎಲ್ಲ ಗೊಂದಲ, ಭಯ, ಆತಂಕಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಸಭೆಯ ಬಳಿಕ ಹೋಟೆಲ್ ಮಾಲೀಕರು ದರ ಏರಿಕೆಗೆ ನಿರ್ಧರಿಸಿದರೆ ಡಿಸೆಂಬರ್ ತಿಂಗಳಿನಿಂದ ದರ ಏರಿಕೆ ಆಗಬಹುದು ಎನ್ನಲಾಗಿದೆ.