ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಪುತ್ಥಳಿಗಾಗಿ ಪೂರ್ವಭಾವಿ ಸಭೆ
ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರು ನಗರ ನಿರ್ಮಾಣದ ವೇಳೆ ತನ್ನಲ್ಲೇ ತಾನು ಅರ್ಪಿಸಿಕೊಳ್ಳುವ ಮೂಲಕ, ಬೆಂದಕಾಳೂರು ನಗರದ ನಿರ್ಮಾಣ ಸುಸೂತ್ರವಾಗಿ ಸಾಗುವಂತೆ ಅನುವು ಮಾಡಿದ ಮಹಾ ತ್ಯಾಗಿಯಾದ ಲಕ್ಷ್ಮೀದೇವಿ (ನಾಡಪ್ರಭು ಕೆಂಪೇಗೌಡರ ಸೊಸೆ) ಅವರ ಪುತ್ಥಳಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಬಿಬಿಎಂಪಿ ಕಚೇರಿಯ ಆವರಣದಲ್ಲಿ ಸೆಪ್ಟೆಂಬರ್ 22ರಂದು ಈ ಪ್ರತಿಮೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಇದಕ್ಕೆ ಒಕ್ಕಲಿಗರ ಸಂಘದಿಂದ ಬೇಕಿರುವ ಸಹಕಾರದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ ಎಂದು ವರದಿಯಾಗಿದೆ.

ಈ ಸಂಬಂಧ ಮೇಯರ್ ಪದ್ಮಾವತಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಒಕ್ಕಲಿಗ ಪ್ರಮುಖರ ಸಭೆಯು ವಿಜಯ ನಗರದಲ್ಲಿರುವ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಮೇಯರ್ ಪದ್ಮಾವತಿ ಸೇರಿದಂತೆ ಶಾಸಕರು, ಬಿಬಿಎಂಪಿ ಸದಸ್ಯರು, ಒಕ್ಕಲಿಗ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆಂದು ಹೇಳಲಾಗಿದೆ.
ಯಾರು ಲಕ್ಷ್ಮೀದೇವಿ?
ಲಕ್ಷ್ಮೀದೇವಿಯು ಬೆಂಗಳೂರು ನಗರದ ನಿರ್ಮಾತೃವಾದ ನಾಡಪ್ರಭು ಕೆಂಪೇಗೌಡರು. ರಾಜಧಾನಿಯ ಬೆಂಗಳೂರು ನಗರದ ಕೋಟೆಯ ನಿರ್ಮಾಣದ ಕಾರ್ಯ ಭರದಿಂದ ಸಾಗುವಾಗ ದಕ್ಷಿಣದ ಹೆಬ್ಬಾಗಿಲನ್ನು ನಿಲ್ಲಿಸುವಾಗ ಆ ಬಾಗಿಲಿನ ಸ್ತಂಭಗಳು ಎಷ್ಟೇ ಶಾಸ್ತ್ರೋಕ್ತವಾಗಿ ನಿಲ್ಲಿಸಿದರೂ ಪದೇ ಪದೇ ಕುಸಿದು ಬೀಳುತ್ತಿರುತ್ತದೆ. ಹಲವಾರು ದಿನಗಳ ಕಾಲ ಇದೇ ಪದೇ ಪದೇ ನಡೆದು ಕೆಂಪೇಗೌಡರು ಚಿಂತೆಗೀಡಾಗುತ್ತಾರೆ.
ಇದಕ್ಕೆ ಬಂದ ಜ್ಯೋತಿಷಿಗಳ ಪರಿಹಾರೋಪಾಯವೇನೆಂದರೆ, ಭೂತದ ಚೇಷ್ಟೆಯಿಂದಾಗಿ ದ್ವಾರದ ಸ್ತಂಭಗಳು ಪದೇ ಪದೇ ಉರುಳಿ ಹೋಗುತ್ತಿರುವುದು ಭೂತ ಚೇಷ್ಟೆಯೆಂದೂ ಇದಕ್ಕೆ ಪರಿಹಾರವಾಗಿ ಗರ್ಭಿಣಿ ಸ್ತ್ರೀಯನ್ನು ಬಲಿಕೊಟ್ಟರೆ ಸರಿಹೋಗುತ್ತದೆಂದು ಹೇಳುತ್ತಾರೆ. ಆದರೆ, ಇದಕ್ಕೆ ಕೆಂಪೇಗೌಡರು ಸುತರಾಂ ಒಪ್ಪುವುದಿಲ್ಲ ಹಾಗೂ ರಾಜಧಾನಿ ನಿರ್ಮಾಣ ಅಪೂರ್ಣವಾದ ಬಗ್ಗೆ ಭಾರೀ ನಿರಾಸೆ ಹೊಂದುತ್ತಾರೆ.
ಆಗ, ಈ ವಿಚಾರವೆಲ್ಲಾ ತಿಳಿದವರಾದ ಲಕ್ಷ್ಮೀದೇವಿಯು (ಆಗ ಅವರು ಗರ್ಭಿಣಿಯಾಗಿರುತ್ತಾರೆ) ತಮ್ಮನ್ನೇ ಬಲಿದಾನ ಮಾಡಲು ನಿರ್ಧರಿಸುತ್ತಾರೆ. ಯಾರಿಗೂ ತಿಳಿಸದೇ ದಕ್ಷಿಣ ದ್ವಾರದ ಬಳಿ ತಮ್ಮನ್ನು ತಾವು ಬಲಿದಾನಗೈಯ್ಯುವ ಮೂಲಕ ರಾಜಧಾನಿ ನಿರ್ಮಾಣ ಸುಸೂತ್ರವಾಗಿ ಮುಂದುವರಿಯಲು ನೆರವಾಗಿರುತ್ತಾರೆಂದು ಇತಿಹಾಸ ಹೇಳುತ್ತದೆ.












Click it and Unblock the Notifications