ಲಿಂಗಾಯತ ಪ್ರತ್ಯೇಕ ಧರ್ಮ: ಮತ್ತೆ ವಿಭಜನೆಯ ಮಾತಾಡಿದ ಎಂಬಿ ಪಾಟೀಲ್
ಬೆಂಗಳೂರು, ಆಗಸ್ಟ್ 11: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕಾಂಗ್ರೆಸ್ ಪಕ್ಷವನ್ನು ಸಾಕಷ್ಟು ಬಾಗಿಸಿದ್ದರೂ ಇದೀಗ ಮತ್ತೆ ಮಾಜಿ ಸಚಿವ ಎಂಬಿ ಪಾಟೀಲ್ ಪ್ರತ್ಯೇಕ ಧರ್ಮದ ಅಪಸ್ವರವನ್ನು ಪುನರುಚ್ಛರಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹಿಂದಿನ ಧರ್ಮ ವಿಭಜನೆಯ ವಾದವನ್ನು ಮತ್ತೆ ಪ್ರಬಲವಾಗಿ ಮಂಡಿಸಿದ್ದು ತಮ್ಮ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಆ ಮೂಲಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದು ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ನೋಡಬೇಕಿದೆ.
ಶುಕ್ರವಾರವಷ್ಟೇ ಪ್ರತ್ಯೇಕ ಧರ್ಮ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದಿವೆ, ನಾವು ನಮ್ಮ ಪ್ರಯತ್ನದಿಂದ ಹಿಂದೆ ಸರಿದಿಲ್ಲ, ಈಗಾಗಲೇ ಈ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ಕೇಂದ್ರ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎಂದು ಕಾದು ನೋಡಬೇಕಿದೆ.
ಕೇಂದ್ರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿ ನಾವು ನಮ್ಮ ಪ್ರಯತ್ನವನ್ನು ಮುಂದುವರೆಸುತ್ತೇವೆ ಎಂದರು. ಅಷ್ಟೇ ಅಲ್ಲ ಪ್ರತ್ಯೇಕ ಧರ್ಮ ವಿಚಾರವಾಗಿ ಪ್ರತಿ ಮೂರ್ನಾಲ್ಕು ಗಂಟೆಗಳಿಗೊಮ್ಮೆ ಜಾಗತಿಕ ಲಿಂಗಾಯತ ವೇದಿಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಾಮದಾರ್ ಚರ್ಚೆಯಲ್ಲಿ ತೊಡಗಿದ್ದೇನೆ ಹೀಗಾಗಿ ಈ ಹೋರಾಟದಿಂದ ಹಿಂದೆ ಸರಿಯುತ್ತೇನೆ ಎಂಬ ಸಂಶಯ ಬೇಡ ನಮ್ಮ ಲಿಂಗಾಯತ ಧರ್ಮ ರಚನೆ ಅತ್ಯಂತ ನ್ಯಾಯಯುತವಾಗಿದೆ ಅದನ್ನು ಮಾಡಿಯೇ ತೀರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಕೇಂದ್ರ ಸರ್ಕಾರ ಒಪ್ಪದಿದ್ದರೆ ಸುಪ್ರೀಂಕೋರ್ಟ್ಗೆ ಹೋಗುತ್ತೇವೆ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಲಿಂಗಾಯತ ಜಾಗತಿಕ ಧರ್ಮ ಆಗಬೇಕು, ಈ ಕುರಿತು ಜಾಮದಾರ್ ಮೂರ್ನಾಲ್ಕು ಗಂಟೆ ನನ್ನ ಜೊತೆ ಚರ್ಚಿಸಿದ್ದಾರೆ, ಈ ಬಗ್ಗೆ ಕಟ್ಟಕಡೆಯ ಜನರಿಗೆ ಜಾಗೃತಿ ಮೂಡಿಸುತ್ತೇವೆ ಈ ಬಗ್ಗೆ ಶುಕ್ರವಾರ ಚರ್ಚೆ ನಡೆದಿದೆ
ಲಿಂಗಾಯತ ಸ್ವತಂತ್ರ ಧರ್ಮ ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾವನೆ ಇದೆ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮ ಮಾಡುತ್ತಾರೆ, ಇಲ್ಲ ಎಂದರೆ ಸುಪ್ರೀಂ ಕೋರ್ಟ್ ಇದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ಪ್ರತ್ಯೇಕ ಧರ್ಮದ ಅರ್ಜಿ ಬಾಕಿ ಇದೆ. ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಈ ತನಕ ಬಂದಿಲ್ಲ. ಒಂದು ವೇಳೆ ಫಲಿತಾಂಶ ಬಾರದಿದ್ದರೆ ಸುಪ್ರೀಂ ಕೋರ್ಟ್ ಎದುರು ನ್ಯಾಯ ಕೇಳಲು ಅವಕಾಶ ಇದ್ದೇ ಇದೆ ಎಂದು ಸ್ಪಷ್ಟಪಡಿಸಿದರು.

ಕ್ಷೇತ್ರ, ಜಿಲ್ಲೆಗೆ ಸೀಮಿತವಾಗಿ ಮೈತ್ರಿ
ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ವಿಚಾರ ಶಾಸಕರು, ಮಾಜಿ ಶಾಸಕರಿದ್ದಾರೆ, ಮತ ಕ್ಷೇತ್ರಕ್ಕೆ, ಜಿಲ್ಲೆಗೆ ಸೀಮಿತವಾಗಿ ಮೈತ್ರಿ ಆಗಬೇಕಾಗುತ್ತೆ ರಾಜಧರ್ಮ ಪಾಲನೆ ಮಾಡೋದಾಗಿ ಎಚ್ ಡಿ ದೇವೇಗೌಡರು ಕೂಡ ಹೇಳಿದ್ದಾರೆ, ಈ ಬಗ್ಗೆ ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಆಲಮಟ್ಟಿ ಜಲಾಶಯಕ್ಕೆ ಕುಮಾರಸ್ವಾಮಿಯಿಂದ ಬಾಗಿನ
ಉತ್ತರ ಕರ್ನಾಟಕದಲ್ಲಿ ಜಲಾಶಯಗಳು ಭರ್ತಿಯಾಗಿವೆ, ಆಲಮಟ್ಟಿ ಜಲಾಶಯಕ್ಕೆ ಆ.12ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಾಗಿನ ಅರ್ಪಿಸಲಿದ್ದಾರೆ.ಆ ನೀರನ್ನು ಕೆನಲ್ ಮೂಲಕ ನೀರಾವರಿಗೆ ಉಪಯೋಗಿಸಬಹುದು ಬಹುತೇಕ ತಾಲೂಕುಗಳಲ್ಲಿ ಮಳೆಯಾಗಿಲ್ಲ.ಕೆನಲ್ ನಿಂದ ಎಲ್ಲರಿಗೂ ಅನುಕೂಲ ಆಗಲ್ಲ ಹೀಗಾಗಿ ಬರ ಘೋಷಣೆ ಮಾಡಬೇಕಾದ ಅನಿವಾರ್ಯತೆ ಇದೆ ಉತ್ತರ ಕರ್ನಾಟಕದಲ್ಲಿ ಮೇವಿನ ಸಮಸ್ಯೆ ತೀವ್ರವಾಗಿದೆ, ಬೆಳೆ ಹಾಳಾಗಿದೆ ಗುಳೇ ಹೋಗುವ ಪರಿಸ್ಥಿತಿ ಇದೆ ಬರ ಪರಿಹಾರ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಬೇಕಿದೆ ಎಂದರು.

ಮಹಾದಾಯಿ ಕುರಿತು ತೀರ್ಪು ಶೀಘ್ರ
ಮಹದಾಯಿ ಹೋರಾಟ ಹಿನ್ನೆಲೆ ಸುಪ್ರೀಂ ಕೋರ್ಟ್ ತೀರ್ಪು ಮೂರ್ನಾಲ್ಕು ದಿನದಲ್ಲಿ ಬರುತ್ತದೆ ಏನು ನಿರ್ಣಯ ಬರುತ್ತೆ ಎಂದು ನೋಡಬೇಕು, ವಿವಾದ ಬಗೆಹರಿಸಲು ಪ್ರಧಾನಿ ಅಂತೂ ಮಧ್ಯಸ್ಥಿಕೆಯ ವಹಿಸಿಲ್ಲ ಕುಡಿಯುವ ನೀರು ಕೊಡಲ್ಲ ಅನ್ನೋ ಗೋವಾದ ವಾದ ಸರಿಯಲ್ಲ ಕೃಷ್ಣಾದಿಂದ ಕುಡಿಯುವ ನೀರು ಕೊಟ್ಟಿಲ್ವಾ ಕಾವೇರಿಯಿಂದ ಮೊನ್ನೆ 4ಟಿಎಂಸಿ ಬೆಂಗಳೂರಿಗೆ ಬಿಡುಗಡೆ ಮಾಡಿಲ್ಲವಾ ಎಂದು ಪ್ರಶ್ನಿಸಿದರು.

ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ನಿರ್ಧರಿಸುತ್ತದೆ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಇದ್ದಾರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ.












Click it and Unblock the Notifications