Jagadish Shettar: ‘ಬಿಜೆಪಿಯಿಂದ ಲಿಂಗಾಯತರಿಗೆ ಸ್ಪಷ್ಟ ಸಂದೇಶ’
ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಲಿಂಗಾಯತ ಅಸ್ತ್ರ ಪ್ರಯೋಗಕ್ಕೆ ಮಾಜಿ ಸಚಿವ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ ಎಂ.ಬಿ. ಪಾಟೀಲ್ ಸಾಥ್ ನೀಡಿದ್ದಾರೆ. ಟ್ವೀಟ್ ಮೂಲಕ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿರುವ ಎಂ.ಬಿ. ಪಾಟೀಲ್, ಬಿಜೆಪಿಯಿಂದ ಲಿಂಗಾಯತರಿಗೆ ಸ್ಪಷ್ಟ ಸಂದೇಶ ಸಿಕ್ಕಿದೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ಹಲ್ಚಲ್ ಎಬ್ಬಿಸಿದೆ.
ಜಗದೀಶ್ ಶೆಟ್ಟರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುಕ್ಷಣದಿಂದಲೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಮುಖವಾಗಿ ಲಿಂಗಾಯತ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಈಗಾಗಲೇ ಬೆಳಗ್ಗೆಯಿಂದ ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಒಂದರ ಹಿಂದೆ ಒಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡುತ್ತಿದೆ. ಇದೀಗ ಈ ಟ್ವೀಟ್ ಫೈಟ್ಗೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

'ಲಿಂಗಾಯತರು ಗರ್ಭಗುಡಿಯ ಅರ್ಚಕರಲ್ಲ'
ಟ್ವಿಟ್ಟರ್ ಖಾತೆಯಲ್ಲಿ ಎಂ.ಬಿ. ಪಾಟೀಲ್ ಹೀಗೆ ಬರೆದುಕೊಂಡಿದ್ದಾರೆ, 'ಬಿಜೆಪಿಯಿಂದ ಲಿಂಗಾಯತರಿಗೆ ಸ್ಪಷ್ಟ ಸಂದೇಶ: ಲಿಂಗಾಯತರು ಎಂದೂ ಗರ್ಭಗುಡಿಯ ಅರ್ಚಕರಲ್ಲ, ಗರ್ಭಗುಡಿಯ ಆಚೆ ಕೂತು ಭಜನೆ ಮಾಡುವುದಕ್ಕಷ್ಟೇ ಸೀಮಿತ. ಬಿಜೆಪಿಯಲ್ಲಿ ಲಿಂಗಾಯತರು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತ, ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ. ಲಿಂಗಾಯತರು ತವರಿಗೆ ಮರಳುವ ಸ್ಪಷ್ಟ ಸನ್ನಿವೇಶ ಬಂದಿದೆ...' ಎಂದು ಬರೆದುಕೊಂಡು, ಮಾಜಿ ಸಿಎಂ ಬಿಎಸ್ವೈ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.
ಹಿಂದೂ ಲಿಂಗಾಯತ ಅಸ್ತ್ರ ಪ್ರಯೋಗ!
ಈ ಹಿಂದೆ ಕೂಡ ಕಾಂಗ್ರೆಸ್ ನಾಯಕರು ಹಲವು ಬಾರಿ ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದಾರೆ. ಈಗಲೂ ಅದೇ ಅಸ್ತ್ರದ ಮೂಲಕ ಬಿಜೆಪಿ ಹೈಕಮಾಂಡ್ ಮತ್ತು ಬಿಜೆಪಿ ರಾಜ್ಯ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಅಸ್ತ್ರ ಸಿಗುತ್ತಿದೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ವಿಚಾರ ಮುಂದಿಟ್ಟುಕೊಂಡು, ಚುನಾವಣೆ ಎದುರಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಇದನ್ನು ಟ್ವೀಟ್ ಮೂಲಕ ಸ್ಯಾಂಪಲ್ ಆಗಿ ತೋರಿಸಿದಂತಿದೆ ಕಾಂಗ್ರೆಸ್.
ಜಗದೀಶ್ ಶೆಟ್ಟರ್ ಮುಂದಿನ ನಡೆ ಏನು?
ಈವರೆಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಏನನ್ನೂ ತಿಳಿಸಿಲ್ಲ. ಆದರೆ ಕಾಂಗ್ರೆಸ್ ಸೇರುವ ಮಾತುಗಳು ಮಾತ್ರ ಕರ್ನಾಟಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನೇನು ಕೆಲ ಗಂಟೆಗಳಲ್ಲಿ ಈ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆ ಇದ್ದು, ಶೆಟ್ಟರ್ ನಿರ್ಧಾರಕ್ಕಾಗಿ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ ನಾಯಕರೂ ಕಾದು ಕುಳಿತಿದ್ದಾರೆ. ಇನ್ನೊಂದು ಕಡೆ ಶೆಟ್ಟರ್ ಸ್ಪರ್ಧಿಸುತ್ತಿರುವ ಕ್ಷೇತ್ರಕ್ಕೆ ಈವರೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನ ಘೋಷಣೆ ಮಾಡಿಲ್ಲ, ಈ ಮೂಲಕ 'ಕೈ' ಪಡೆ ರಣತಂತ್ರ ಹೂಡಿದಂತೆ ಕಾಣುತ್ತಿದೆ.

ಶಾಮನೂರು ನೇತೃತ್ವದಲ್ಲಿ ಮಾತುಕತೆ?
ಜಗದೀಶ್ ಶೆಟ್ಟರ್ ಅವರನ್ನ ಕಾಂಗ್ರೆಸ್ಗೆ ಕರೆತರಲು ಒಂದು ಕಡೆ ಕರ್ನಾಟಕದ ಕಾಂಗ್ರೆಸ್ ನಾಯಕರು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದ್ಕಡೆ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಜಗದೀಶ್ ಶೆಟ್ಟರ್ ಮತ್ತು ಶಾಮನೂರು ಶಿವಶಂಕರಪ್ಪ ಸಂಬಂಧಿಕರಾಗಿದ್ದು ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಲಾಗುತ್ತಿದೆ. ಅಕಸ್ಮಾತ್ ಎಲ್ಲಾ ಅಂದುಕೊಂಡಂತೆ ನಡೆದರೆ ನಾಳೆ ಸಂಜೆಯ ಒಳಗಾಗಿ ಅಧಿಕೃತವಾಗಿ ಮಾಹಿತಿ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಇಷ್ಟೆಲ್ಲದರ ನಡುವೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬಿಜೆಪಿ ಕೂಡ ಈವರೆಗೂ ಅಭ್ಯರ್ಥಿ ಫೈನಲ್ ಮಾಡಿಲ್ಲ. ಇದೀಗ ಜಗದೀಶ್ ಶೆಟ್ಟರ್ ಮುಂದಿನ ನಡೆಯ ಆಧಾರದಲ್ಲಿ ಕಮಲ ಪಾಳಯ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇನ್ನೊಂದು ದಿನದಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು ಕನ್ಫರ್ಮ್ ಆಗಲಿದ್ದು, ಯಾರಿಗೆ ಟಿಕೆಟ್ ನೀಡಬಹುದು ಎಂಬುದೇ ಕುತೂಹಲದ ಸಂಗತಿ.












Click it and Unblock the Notifications