Site: ನಿವೇಶನ ಹಂಚಿಕೆ ವಿವಾದ ಸೃಷ್ಟಿಸಿದ ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ: ಎಂಬಿ ಪಾಟೀಲ್
ಬೆಂಗಳೂರು, ಆಗಸ್ಟ್ 29: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಸಕ್ರಿಯವಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿ ಸಮೀಪದ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆಯಷ್ಟು ಸಿ.ಎ. ನಿವೇಶನ ನೀಡಲಾಗಿದೆ. ಇದನ್ನು ಕೆಐಎಡಿಬಿ ನಿಯಮಾವಳಿಗಳಂತೆ ಕೊಟ್ಟರೂ ವಿವಾದ ಸೃಷ್ಟಿಸಲಾಗುತ್ತಿದೆ. ಬಿಜೆಪಿಯೇ ವಿವಾದದ ಬಣ್ಣ ಹಚ್ಚುತ್ತಿದೆ ಎಂದು ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಎಂಬಿ ಪಾಟೀಲ್ ಗುಡುಗಿದರು. ನಿವೇಶನ ಹಂಚಿಕೆ ಬಗ್ಗೆ ಒಂದಷ್ಟು ಸ್ಪಷ್ಟನೆ ನೀಡಿದರು.
ಇದೇ ವಿಚಾರವಾಗಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿ ಸಚಿವ ಎಂಬಿ ಪಾಟೀಲ್ ಅವರು, ಖರ್ಗೆಯವರ ಟ್ರಸ್ಟ್ ಗೆ ನೀಡಿದ ನಿವೇಶನ ವಿಚಾರಕ್ಕೆ ವಿವಾದದ ಬಣ್ಣ ಹಚ್ಚಿದ್ದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು. ನಾನು ಅವರನ್ನು ವಿವೇಕಶಾಲಿಗಳು ಎಂದುಕೊಂಡಿದ್ದೆ. ಆದರೆ, ಅಂತಹ ಹಿರಿಯರು ಕಾನೂನುಬದ್ಧವಾಗಿ ನಡೆದಿರುವ ಒಂದು ಸಿ.ಎ. ನಿವೇಶನದ ಹಂಚಿಕೆಗೆ ರಾಜಕೀಯ ಲೇಪ ಹಚ್ಚಿದ್ದು ವಿಷಾದದ ಸಂಗತಿ ಎಂದು ಲೇವಡಿ ಮಾಡಿದರು.

ಇಬ್ಬರು ದಲಿತ ಮುಖಂಡರ ಜಗಳ, ಬಿಜೆಪಿಗೆ ಲಾಭ
ದಲಿತ ಬಿಜೆಪಿ ಮುಖಂಡ ಮಂತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಮತ್ತೊಬ್ಬ ದಲಿತನ ವಿರುದ್ಧ ಬಿಜೆಪಿ ಕಣಕ್ಕಿಳಿಸುವ ತಂತ್ರ ಅನುಸಿರಿಸಿದೆ. ಇವರಿಬ್ಬರು ಹೊಡೆದಾಡುತ್ತಿದ್ದರೆ ಆರೆಸ್ಸೆಸ್ ಮತ್ತು ಬಿಜೆಪಿಗೆ ಲಾಭ! ಈಗ ನಡೆಯುತ್ತಿರುವುದು ಇಂತಹ ಒಂದು ಪಿತೂರಿಯಾಗಿದೆ. ಛಲವಾದಿ ನಾರಾಯಣಸ್ವಾಮಿ ಆತ್ಮಾವಲೋಕನವನ್ನೂ ಮಾಡಿಕೊಳ್ಳದೇ ಪಟ್ಟಭದ್ರ ಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಪುತ್ರ ರಾಹುಲ್ ಖರ್ಗೆ ಅವರು ಎಂಜಿನಿಯರಿಂಗ್ ಪದವೀಧರರು, ಐಐಎಸ್ಸಿ ಯಲ್ಲಿ ತರಬೇತಿ ಪಡೆದಿದ್ದಾರೆ. ಅವರಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಹಲವು ವರ್ಷಗಳಿಂದಲೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ಟ್ರಸ್ಟ್ ಪರವಾಗಿ ಖರ್ಗೆಯವರು ಉತ್ಕೃಷ್ಟತಾ ಕೇಂದ್ರ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಮಾಡುವುದಾಗಿ ಹೇಳಿದ್ದರು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಈ ನಿವೇಶನಕ್ಕಾಗಿ ಒಟ್ಟು 6 ಅರ್ಜಿ ಬಂದಿದ್ದವು. ಇದರಲ್ಲಿ 3 ಅರ್ಜಿಗಳು ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುಮತಿ ಕೋರಿದ್ದವು. ಆದರೆ ಇಲ್ಲಿ ಈಗಾಗಲೇ ವಸತಿ ಯೋಜನೆಗೆ ಅನುಮತಿ ನೀಡಿದ್ದರಿಂದ ಈ ಅರ್ಜಿಗಳನ್ನು ನಾವು ಪುರಸ್ಕರಿಸಲಿಲ್ಲ. ಇನ್ನೊಂದು ಅರ್ಜಿಯಲ್ಲಿ ಆಸ್ಪತ್ರೆ ನಿರ್ಮಿಸುವ ಉದ್ದೇಶವನ್ನು ತಿಳಿಸಲಾಗಿತ್ತು. ಆದರೆ ಅಗತ್ಯ ದಾಖಲೆಗಳನ್ನು ಲಗತ್ತಿಸಿರಲಿಲ್ಲ. 5ನೆಯ ಅರ್ಜಿಯಲ್ಲಿ ಕೇವಲ 'ಸಂಶೋಧನೆ' ಅಂತ ತಮ್ಮ ಉದ್ದೇಶ ನಮೂದಿಸಲಾಗಿತ್ತು. ಹೀಗಾಗಿ ಈ ಅರ್ಜಿಗಳೂ ತಿರಸ್ಕೃತಗೊಂಡಿವೆ ಎಂದು ಅವರು ವಿವರಿಸಿದರು.

ರಾಹುಲ್ ಖರ್ಗೆ ಅವರ ಅರ್ಜಿ ಮಾತ್ರ. ಇವರು ಸಂಶೋಧನೆ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವುದಾಗಿ ಸ್ಪಷ್ಟವಾಗಿ ನಮೂದಿಸಿದ್ದರು. ವಸ್ತುಸ್ಥಿತಿ ಹೀಗಿದ್ದಾಗ ನಾವು ಮೆರಿಟ್ ಆಧರಿಸಿಯೇ ರಾಹುಲ್ ಖರ್ಗೆ ಅವರ ಟ್ರಸ್ಟಿಗೆ ಸಿ.ಎ. ನಿವೇಶನ ಕೊಟ್ಟಿದ್ದೇವೆ. ಹೀಗಿದ್ದರೂ ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಅಲ್ಲದೇ ನಿವೇಶನವನ್ನು ನಿಯಮಾನುಸಾರ ನಿಗದಿತ ಬೆಲೆಗೆ ಮಾರಾಟ ಮಾಡಿದ್ದೇವೆ. ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. ಇವೆಲ್ಲವೂ ಸಂಪೂರ್ಣ ಪಾರದರ್ಶಕವಾಗಿಯೇ ನಡೆದಿದೆ. ಇತ್ತು ನಾರಾಯಣಸ್ವಾಮಿ ಅವರು ಒಮ್ಮೆಯು ದಲಿತರಿಗೆ ಸಿಎ ನಿವೇಶನ ಕೊಡುವಾಗ ಶೇ.75ರಷ್ಟು ರಿಯಾಯಿತಿ ಏಕೆ ಕೊಡಲಿಲ್ಲ ಎನ್ನುತ್ತಾರೆ. ಮತ್ತೊಮ್ಮೆ ಖರ್ಗೆಯವರಿಗೆ ಏಕೆ ಕೊಟ್ಟಿದ್ದು ಅಂತಲೂ ಕೇಳುತ್ತಾರೆ. ಇದೆಲ್ಲ ಹಾಸ್ಯಾಸ್ಪದ ಎಂದರು.
ಬಿಜೆಪಿಗರ ಲೆಕ್ಕ ಬಿಚ್ಚಿಟ್ಟ ಸಚಿವ
ಬಿಜೆಪಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರು 2008ರಲ್ಲಿ ಬಿಜೆಪಿ ಅಧಿಕಾರದಲ್ಲಿ ಸ್ವತಃ ಕೈಗಾರಿಕಾ ಸಚಿವರಾಗಿದ್ದರು.ಬಾಗಲಕೋಟೆ ನವನಗರದ ಕೈಗಾರಿಕಾ ಪ್ರದೇಶದ, ಅದರಲ್ಲೂ ಅಗ್ರಿಟೆಕ್ ಪಾರ್ಕ್ನ 25 ಎಕರೆ ಜಮೀನನನ್ನು ತಾವೇ ಹಂಚಿಕೊಂಡು (12-3-2012), ಅಲ್ಲಿ ತೇಜಸ್ ಇಂಟರ್ ನ್ಯಾಷನಲ್ ಸ್ಕೂಲನ್ನು ಕಟ್ಟಿದ್ದಾರೆ! ಅವರು ಹೇಗೆ ಅಗ್ರಿ ಟೆಕ್ ಪಾರ್ಕ್ ನಲ್ಲಿ ಜಮೀನು ತೆಗೆದುಕೊಂಡರು? ಎಂದು ಸಚಿವರು ಪ್ರಶ್ನಿಸಿದರು
ಸಂಘ ಪರಿವಾರದ ರಾಷ್ಟ್ರೋತ್ಥಾನ ಪರಿಷತ್ತಿಗೂ ಬೆಂಗಳೂರಿನ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಲ್ಲಿ 23-1-2013ರಂದು (ನಿವೇಶನ ಸಂಖ್ಯೆ 48) 5 ಎಕರೆ ಜಮೀನನ್ನು ಕೊಡಲಾಗಿದೆ. ಆದರೆ ಪರಿಷತ್ತಿನವರು ಕೋವಿಡ್ ಕಾರಣ ಕೊಟ್ಟು ಅಲ್ಲಿ ಏನೂ ಸ್ಥಾಪಿಸಿಲ್ಲ. ಬದಲಿಗೆ ಆಗಾಗ ಕಾಲಾವಕಾಶ ವಿಸ್ತರಿಸಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.
ಇನ್ನು ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಬಿಜೆಪಿ ಸರ್ಕಾರವು ತರಾತುರಿಯಲ್ಲಿ ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಇದಕ್ಕೆಂದು 116 ಎಕರೆ ಜಮೀನನ್ನು ನೀಡಿತು. ಇದರ ಮಾರುಕಟ್ಟೆ ಬೆಲೆ 187 ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರ್ಕಾರ ಇದಕ್ಕೆ ಕೇವಲ 50 ಕೋಟಿ ರೂ. ನಿಗದಿಪಡಿಸಿತು. ಅಂದರೆ, ಸರ್ಕಾರಕ್ಕೆ ಇದರಿಂದ 137 ಕೋಟಿ ರೂಪಾಯಿ ನಷ್ಟವಾಗಿದೆ. ಈಗ ಬಿಜೆಪಿಯವರು ಇದನ್ನು ತುಂಬಿಕೊಡಬೇಕು ಎಂದು ಎಂಬಿ ಪಾಟೀಲ್ ಆಗ್ರಹಿಸಿದರು.












Click it and Unblock the Notifications