ತಟಸ್ಥವಾಗಿರು ಎಂದು ಮಾಯಾವತಿ ಹೇಳಿದ್ದರು, ನಾನು ಅದನ್ನೇ ಮಾಡಿದೆ: ಎನ್. ಮಹೇಶ್
ಬೆಂಗಳೂರು, ಜುಲೈ 24: ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗಿಯಾಗದ ಕಾರಣಕ್ಕೆ ಪಕ್ಷಾಧ್ಯಕ್ಷೆ ಮಾಯಾವತಿಯವರಿಂದ ಉಚ್ಛಾಟಿಸಲ್ಪಟ್ಟ ಕೊಳ್ಳೆಗಾಲ ಶಾಸಕ ಎನ್. ಮಹೇಶ್ ತಾವು ವಿಶ್ವಾಸ ಮತಕ್ಕೆ ಹಾಜರಾಗದಿದ್ದುದು ಏಕೆ ಎಂಬ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ನನಗೆ ತಟಸ್ಥವಾಗಿರುವಂತೆ ಬೆಹನ್ ಜೀ(ಮಾಯಾವತಿ) ಹೇಳಿದ್ದರು. ಅದಕ್ಕೆಂದೇ ನಾನು ವಿಶ್ವಾಸಮತಕ್ಕೂ ಹಾಜರಾಗಲಿಲ್ಲ. ನಾನು ಪಕ್ಷದ ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ, ಪಕ್ಷ ವಿರೋಧಿ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ' ಎಂದು ಎನ್. ಮಹೇಶ್ ಹೇಳಿದರು.
"ನಾನು ಹೈಕಮಾಂಡ್ ಆದೇಶದಂತೆಯೇ ನಡೆದುಕೊಂಡಿದ್ದೇನೆ. ಬಹುಶಃ ಎಲ್ಲೋ ಸಂವಹನ ಲೋಪ ಉಂಟಾಗಿದೆ. ಎಲ್ಲವೂ ಸರಿಹೋಗಲಿದೆ. ನಾನು ಬಿಎಸ್ಪಿ ಬಿಡುವುದಿಲ್ಲ. ಇಲ್ಲಿಯೇ ಇರುತ್ತೇನೆ" ಎಂದು ಅವರು ಸ್ಪಷ್ಟಪಡಿಸಿದರು.

"ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಆ ಹೊಂದಾಣಿಕೆಯ ಮೇಲೆ ನಾವು ಒಟ್ತು 224 ಕ್ಷೇತ್ರಗಳಲ್ಲಿ 204 ರಲ್ಲಿ ಜೆಡಿಎಸ್, 20ರಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆವು. ಕೊಳ್ಳೆಗಾಲದಲ್ಲಿ ನಾನು ಗೆದ್ದೆ. ನನಗೆ ಮಂತ್ರಿ ಸ್ಥಾನವೂ ಸಿಕ್ಕಿತು. ನಾಲ್ಕು ತಿಂಗಳು ಕೆಲಸ ಮಾಡಿದೆ. ಆದರೆ ಒಂದು ದಿನ ಬೆಹನ್ ಜೀ ನನ್ನನ್ನು ದೆಹಲಿಗೆ ಕರೆಸಿ ರಾಜೀನಾಮೆ ನೀಡು ಅಂದರು. ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಜೊತೆ ನಾವು ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಜೊತೆ ಕೈಜೋಡಿಸಿ ಸರ್ಕಾರ ರಚಿಸುತ್ತಿರುವ ಕಡೆ ನೀವು ಮಂತ್ರಿಯಾಗಿರುವುದು ಬೇಡ ಎಂದರು. ನಾನು ದುಸ್ರಾ ಮಾತನಾಡದೆ ವೊಸ್ ಬಂದು ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಸಲ್ಲಿಸಿದೆ. ಅವರು ಮೊದಲು ಒಪ್ಪಲಿಲ್ಲ. ನಾಲ್ಕು ದಿನದ ನಂತರ ಒಪ್ಪಿದರು" ಎಮದು ಹಳೆ ಘಟನೆಗಳನ್ನು ಎನ್. ಮಹೇಶ್ ಮೆಲುಕು ಹಾಕಿದರು.
"ಅದಾದ ಮೇಲೆ ನಾನು ನನ್ನ ಕ್ಷೇತ್ರದಲ್ಲಿ ಜನರೊಂದಿಗೆ ಕೆಲಸ ಮಾಡುತ್ತಿದ್ದೆ. ನಂತರ 2019 ರ ಲೋಕಸಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲದೆ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕುವುದಕ್ಕೆ ಹೇಳಿದರು. ಹಾಗೇ ಮಾಡಿದೆವು. 20 ಕ್ಷೇತ್ರಗಳಿಂದ ಸುಮಾರು 4.5 ಲಕ್ಷ ಮತಗಳು ಬಂದವು, ಅಂದರೆ ಸುಮಾರು 1.5% ಮತ ಹಂಚಿಕೆ. ಇದಾಗಿ ಜೂನ್ 23 ರಂದು ದೆಹಲಿಯಲ್ಲಿ ನಡೆದ ಬಿಎಸ್ಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಲೋಕಸಭೆ ಚುನಾವಣೆಯ ಅವಲೋಕನ ನಡೆಯಿತು. ಆಗ ನಾನು, 'ಇಷ್ಟು ದಿನ ಜೆಡಿಸ್ -ಕಾಂಗ್ರೆಸ್ ಬೆಂಬಲಿಗನಾಗಿದ್ದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಅವರ ವಿರುದ್ಧವೇ ಸ್ಪರ್ಧಿಸಿದೆವು. ಈಗ ಏನು ಮಾಡಲಿ' ಎಂದು ಕೇಳಿದೆ. ಆಡಳಿತ ಪಕ್ಷ, ವಿಪಕ್ಷ ಯಾವುದರೊಂದಿಗೂ ಗುರುತಿಸಿಕೊಳ್ಳುವುದು ಬೇಡ, ತಟಸ್ಥವಾಗಿದ್ದು ಬಿಡು, ಕೀಪ್ ನ್ಯೂಟ್ರಲ್ ಎಂದರು. ನಾನು ಅಂದಿನಿಂದ ತಟಸ್ಥವಾಗಿದ್ದೇನೆ" ಎಂದರು ಮಹೇಶ್.
ಜುಲೈ 16 ತಾರಿಖಿನಿಂದ ವಿಧಾನಸಭೆಗೆ ಹೋಗಿಯೇ ಇಲ್ಲ. ಆದರೆ ಜು.24 ರಂದು ಬೆಳಿಗ್ಗೆ ಬಂದು ನೋಡಿದಾಗ ಗೊತ್ತಾಯ್ತು ನನ್ನ ಉಚ್ಛಾಟನೆ ಮಾಡಿದ್ದಾರೆ ಅಂತ. ನಾನು ಯಾವ ಆದೇಶವನ್ನೂ ಉಲ್ಲಂಘನೆ ಮಾಡಿಲ್ಲ
ಹೈಕಮಾಂಡಿಗೆ ಬದ್ಧವಾಗಿದ್ದೆ. ಎಲ್ಲೋ ಸಂವಹನ ಲೋಪವಾಗಿದೆ, ಸರಿಪಡಿಸಿಕೊಳ್ಳುತ್ತೇವೆ" ಎಂದು ಮಹೇಶ್ ಹೇಳಿದರು.
ಆದರೆ ವಿಶ್ವಾಸಮತಕ್ಕೂ ಮುನ್ನ ಟ್ವೀಟ್ ಮಾಡಿದ್ದ ಮಾಯಾವತಿ, ಮೈತ್ರಿ ಸರ್ಕಾರದ ಪರ ಮತ ಚಲಾಯಿಸುವಂತೆ ಎನ್. ಮಹೇಶ್ ಅವರಿಗೆ ಸೂಚನೆ ನೀಡಿದ್ದರು. ಅದು ಎನ್.ಮಹೇಶ್ ಅವರ ಗಮನಕ್ಕೆ ಬಂದಿರಲಿಲ್ಲವೇ ಎಂಬುದು ಈಗಿರುವ ಪ್ರಶ್ನೆ.












Click it and Unblock the Notifications