ಬೆಂಗಳೂರು: ಮುಸ್ಲೀಮರ ಬೃಹತ್ ಸಭೆ, ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು, ಡಿಸೆಂಬರ್ 23: ನಗರದ ಮಿಲ್ಲರ್ ರಸ್ತೆ ಖುದ್ದೂಸ್ ಈದ್ಗಾ ಮೈದಾನದಲ್ಲಿ ಧಾರ್ಮಿಕ ಮುಖಂಡ ನೇತೃತ್ವದಲ್ಲಿ ಮುಸ್ಲಿಂ ಸಮುದಾಯವು ಬೃಹತ್ ಸಭೆ ನಡೆಸುತ್ತಿದೆ.
ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಸಂಬಂಧ ಚರ್ಚೆಗೆಂದು ಕರೆಯಲಾಗಿರುವ ಈ ಸಭೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಲಿರುವ ಕಾರಣ, ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ಮಾರ್ಗಗಳನ್ನು ಬದಲಾಯಿಸಿದ್ದಾರೆ.
ಸಭೆಯ ಕಾರಣದಿಂದಾಗಿ ನಂದಿದುರ್ಗ ಮತ್ತು ಜಯಮಹಲ್ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಭಂದಗೊಳಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.

ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ, ಕಂಟೋನ್ಮೆಂಟ್ ಕಡೆಗೆ ಬರುವವರು ದಿನ್ನೂರು ರಸ್ತೆ, ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್, ಆರ್.ಟಿ.ನಗರ ಮುಖ್ಯ ರಸ್ತೆ, ಗುಂಡೂರಾವ್ ಮನೆ ಜಂಕ್ಷನ್, ಬೆಂಗಳೂರು-ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಮೂಲಕ ನಗರ ಪ್ರವೇಶ ಮಾಡಬಹುದಾಗಿದೆ.
ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸುಲ್ತಾನ್ ಪಾಳ್ಯ, ಕಾವಲ್ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಹಳೆಯ ಉದಯ ಟಿವಿ ಜಂಕ್ಷನ್, ಮೌಂಟ್ ಕಾರ್ಮಲ್ ಜಂಕ್ಷನ್ ಕಡೆಯಿಂದ ಪ್ಯಾಲೆಸ್ ಗುಟ್ಟಳ್ಳಿ ಮೂಲಕ ಸಂಚರಿಸಬೇಕಾಗಿದೆ.
ಯಶವಂತಪುರ ಕಡೆಯಿಂದ ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿ ಸರ್ಕಲ್, ಬೆಂಗಳೂರು-ಬಳ್ಳಾರಿ ರಸ್ತೆ ಮೂಲಕ ಮುಂದೆ ಬಂದು ಪ್ಯಾಲೆಸ್ ಗುಟ್ಟಳ್ಳಿ ಬಳಿ ಎಡ ತಿರುವು ಪಡೆದು ಸಂಚರಿಸಬೇಕಾಗಿದೆ.
ಯಲಹಂಕ ಕಡೆಯಿಂದ ಆರ್.ಟಿ.ನಗರ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ಹೆಬ್ಬಾಳ, ಮೇಖ್ರಿ ವೃತ್ತ ನಂತರ ಪ್ಯಾಲೆಸ್ ಗುಟ್ಟಳ್ಳಿ ಬಳಿ ಎಡ ತಿರುವ ಪಡೆದು ಸಂಚರಿಸಬೇಕಿದೆ.
ಈದ್ಗಾ ಮೈದಾನದ ಸಭೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಈದ್ಗಾ ಮೈದಾನದಲ್ಲಿ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಅಳವಡಿಸಿದ್ದಾರೆ. ಭಾರಿ ಬಿಗಿ ಬಂದೋಬಸ್ತ್ ಅನ್ನು ಈದ್ಗಾ ಮೈದಾನಕ್ಕೆ ನೀಡಲಾಗಿದೆ.












Click it and Unblock the Notifications