ನಾಡಹಬ್ಬ ವಿಜಯದಶಮಿಗೆ ಶುಭ ಕೋರಿದ ಗಣ್ಯರು
ಬೆಂಗಳೂರು, ಅಕ್ಟೋಬರ್ 15: ನಾಡಹಬ್ಬ ವಿಜಯದಶಮಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಹಬ್ಬದ ಶುಭಾಶಯ ಕೋರಿದ್ದಾರೆ.
ಯಡಿಯೂರಪ್ಪರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ
ವಿಜಯದಶಮಿ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ಯಡಿಯೂರಪ್ಪ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣ ಕೂನಲ್ಲಿ ಹಂಚಿಕೊಂಡಿದ್ದಾರೆ.

ಯಡಿಯೂರಪ್ಪನವರ ಮನೆಯಲ್ಲಿ ದೇವರ ಆಶೀರ್ವಾದ ಪಡೆಯುತ್ತಿರುವ, ಅವರಿಗೆ ಶಾಲು- ಹಾರ ಹೊದಿಸಿ ಗೌರವಿಸುತ್ತಿರುವ ಹಾಗೂ ಹಬ್ಬದ ಶುಭಾಶಯ ಕೋರುತ್ತಿರುವ ಫೋಟೋಗಳನ್ನು ಸಿಎಂ ಬೊಮ್ಮಾಯಿ ಹಂಚಿಕೊಂಡಿದ್ದಾರೆ.
"ಹಿರಿಯ ಮುಖಂಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ದಸರಾ ಮತ್ತು ವಿಜಯದಶಮಿಯ ಶುಭಾಶಯಗಳನ್ನು ಕೋರಲಾಯಿತು,'' ಎಂದು ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿ, "ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ತಾಯಿ ಶ್ರೀಚಾಮುಂಡೇಶ್ವರಿಯು ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ," ಎಂದಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಕೂ ಮಾಡಿದ್ದು, "ಎಲ್ಲರಿಗೂ ವಿಜಯದಶಮಿ ಹಬ್ಬದ ಹೃದಯಪೂರ್ವಕ ಶುಭಕಾಮನೆಗಳು. ಒಳ್ಳೆಯತನಕ್ಕೆ ಸದಾ ಗೆಲುವು ಎನ್ನುವುದನ್ನು ಸಂಕೇತಿಸುವ ವಿಜಯದಶಮಿ, ನಾಡಿನಲ್ಲಿ ಸದಾ ಒಳಿತಾಗುವಂತೆ ಹರಸಲಿ. ಎಲ್ಲರ ನೋವು, ದುಃಖ, ಸಂಕಷ್ಟಗಳನ್ನು ಪರಿಹರಿಸಿ ಜಗನ್ಮಾತೆ ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಲಿ. ಕೊರೊನಾ ಸೋಂಕು ವಿರುದ್ಧದ ನಮ್ಮ ಹೋರಾಟದಲ್ಲಿ ವಿಜಯವನ್ನು ಅನುಗ್ರಹಿಸಲಿ," ಎಂದು ಕೂ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಡಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. "ರಾಜ್ಯದ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು. ಕಳೆದ 2 ವರ್ಷಗಳಿಂದ ಕರ್ನಾಟಕ ಸೇರಿ ವಿಶ್ವವೇ ಕೋವಿಡ್ ಮಹಾಮಾರಿಯಿಂದ ನರಳಿದೆ. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೇವೆ. ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಈ ಎಲ್ಲಾ ಕಷ್ಟಗಳು ಪರಿಹಾರವಾಗಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ," ಎಂದಿದ್ದಾರೆ.

"ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಶಕ್ತಿ ದೇವತೆ ಶ್ರೀಚಾಮುಂಡೇಶ್ವರಿಯ ಕೃಪೆಯಿಂದ ಎಲ್ಲರಿಗೂ ಆರೋಗ್ಯ, ಐಶ್ವರ್ಯ, ನೆಮ್ಮದಿ, ಸುಖ, ಶಾಂತಿ ದೊರೆಯಲಿ," ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂ ಮಾಡಿದ್ದಾರೆ.
ಕನ್ನಡ ಚಲನಚಿತ್ರ ನಟ, ಕ್ರೇಜಿಸ್ಟಾರ್ ರವಿಚಂದ್ರನ್ ಕೂ ಮಾಡಿ, "ಆಯುಧಪೂಜೆ ಮತ್ತು ವಿಜಯದಶಮಿಯ ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ನಾಡಿನ ಮತ್ತು ದೇಶದ ಎಲ್ಲರಿಗೂ ಸಕಲ ಸನ್ಮಂಗಳವನ್ನುಂಟು ಮಾಡಲಿ. ಮಹಿಷಾಸುರ ಮರ್ದಿನಿ ಎಲ್ಲ ದುಷ್ಟ ಶಕ್ತಿಗಳ ಮರ್ದನ ಮಾಡಿ ನೆಮ್ಮದಿ ನೀಡಲಿ,'' ಎಂದಿದ್ದಾರೆ.












Click it and Unblock the Notifications