ಬೆಂಗಳೂರಿನಲ್ಲಿ ಧಾರಾಕಾರ ಮಳೆ; ಜಲಾವೃತವಾದ ರಸ್ತೆಗಳು
ಬೆಂಗಳೂರು, ಏಪ್ರಿಲ್ 23: ಬೆಂಗಳೂರು ನಗರದ ಹಲವೆಡೆ ಸಂಜೆ ಮಳೆ ಆರಂಭವಾಗಿದ್ದು, ಸತತ ಒಂದೂವರೆ ಗಂಟೆ ಸುರಿದ ಮಳೆಗೆ ಕೆಲವೆಡೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.
ಇಂದು ರಾತ್ರಿ ಒಂಬತ್ತು ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಬೇಗ ಮನೆಗೆ ಹಿಂದಿರುಗಲು ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡುವಂತಾಯಿತು.
ನಗರದ ಪ್ರಮುಖ ಸ್ಥಳಗಳಾದ ಯಶವಂತಪುರ, ಮೆಜೆಸ್ಟಿಕ್, ಕಾರ್ಪೊರೇಷ್, ಮೇಖ್ರಿ ವೃತ್ತ, ಎಂಜಿ ರಸ್ತೆಯ ಸುತ್ತಮುತ್ತ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಕೆಲವೆಡೆ ಭಾರೀ ಮಳೆ ಸುರಿದಿದೆ. ಶಿವಾನಂದ ವೃತ್ತ, ಕುರುಬರಹಳ್ಳಿ, ಯಲಹಂಕ ಏರ್ಪೋರ್ಟ್ ರಸ್ತೆ, ಮಲ್ಲೇಶ್ವರ, ದೊಮ್ಮಲೂರು, ಸಾರಕ್ಕಿ, ಬಸವನಗುಡಿ, ಕತ್ರಿಗುಪ್ಪೆ ಸುತ್ತಮುತ್ತ ಮಳೆಯಾಗಿರುವುದಾಗಿ ತಿಳಿದುಬಂದಿದೆ. ಬಿರು ಬಿಸಿಲಿನಿಂದ ಕಾದು ಕೆಂಡವಾದಂತಿದ್ದ ಬೆಂಗಳೂರು ಕೊಂಚ ತಂಪಾಗಿದೆ.

ಮಧ್ಯಾಹ್ನದ ವೇಳೆಗೆ ಮೋಡ ಮುಸುಕಿಕೊಂಡು, ಸಂಜೆ ಜೋರಾಗಿ ಮಳೆ ಆರಂಭವಾಗಿದೆ. ರಾಜಾಜಿನಗರದ ಡಾ. ರಾಜ್ಕುಮಾರ್ ರಸ್ತೆ ಜಲಾವೃತವಾಗಿರುವುದಾಗಿ ತಿಳಿದುಬಂದಿದೆ.
ಕರ್ನಾಟಕ ಸೇರಿದಂತೆ 4 ರಾಜ್ಯಗಳಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications