ಮಾವಿನ ತೋಟದಲ್ಲಿ ಬೇಕೆಂದ ಹಣ್ಣು ಖರೀದಿಸಬೇಕಾ, ಹತ್ತಿ ಬಸ್ಸು..
ಮಾವು ಮಾರಾಟಕ್ಕೆ ಪ್ರೋತ್ಸಾಹ ನೀಡುವ, ಆ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮ್ಯಾಂಗೋ ಪಿಕಿಂಗ್ ಟೂರಿಸಂನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ಇದೀಗ ಮಾವಿನ ಹಣ್ಣಿನ ಕಾಲ. ರಸಭರಿತ ಮಾವು ಸವಿಯಲು ಇರುವ ಅವಕಾಶದ ಬಗ್ಗೆ ತಿಳಿಯಿರಿ
ಬೆಂಗಳೂರು, ಏಪ್ರಿಲ್ 22: ಕರ್ನಾಟಕ ಮಾವು ಅಭಿವೃದ್ಧಿ ನಿಗಮವು ಭಾನುವಾರ (ಏಪ್ರಿಲ್ 23) ಸೊಗಸಾದ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಅದೇನೆಂದರೆ ಎರಡು ಬಸ್ ನಲ್ಲಿ ಜನರನ್ನು ಕರೆದುಕೊಂಡು ಚಿಕ್ಕಬಳ್ಳಾಪುರದ ಮಂಡಿಕಲ್ಲಿನ ರೈತ ಶ್ರೀರಾಮಚಂದ್ರ ಶೆಟ್ಟಿ ಅವರ ಮಾವಿನ ತೋಟಕ್ಕೆ ಕರೆದೊಯ್ಯುತ್ತದೆ.
ಅಲ್ಲಿಗೆ ಹೋದ ಮೇಲೆ ತಮಗೆ ಬೇಕಾದ ಮಾವಿನಹಣ್ಣನ್ನು ಆಯ್ಕೆ ಮಾಡಿಕೊಂಡು, ಗ್ರಾಹಕರು ಖರೀದಿಸಬಹುದು. ಬೆಂಗಳೂರಿನ ಕಬ್ಬನ್ ಪಾರ್ಕ್ ನಿಂದ ಬೆಳಗ್ಗೆ 9 ಗಂಟೆಗೆ ಬಸ್ ಹೊರಟು ಬಿಡುತ್ತದೆ, ಪ್ರಯಾಣಕ್ಕೆ ಇನ್ನೂರು ರುಪಾಯಿ ಖರ್ಚಾದರೂ ಸಾರ್ವಜನಿಕರಿಂದ ಪಡೆಯುತ್ತಿರುವುದು ನೂರು ರುಪಾಯಿ ಮಾತ್ರ. [ಅಳಿವಿನಂಚಿನತ್ತ ಮಲೆನಾಡಿನ ಕಾಡುಮಾವು]

ಏಪ್ರಿಲ್ 22ರವರೆಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಬಾರಿ ನಿಗದಿಯಾದಷ್ಟು ಮಂದಿ ಅದಾಗಲೇ ನೋಂದಣಿ ಮಾಡಿಸಿಯಾಗಿದೆ. ಆದರೆ ಈ ವರ್ಷ ಇದೊಂದೇ ಸಲ ಅಂತ ಅಂದುಕೊಳ್ಳಬೇಡಿ ಜೂನ್ ವರೆಗೆ ಇಂಥ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಗ್ರಾಹಕರೇ ನೇರವಾಗಿ ಹಣ್ಣು ಖರೀದಿಸಬೇಕು.

ಜತೆಗೆ ಯಾವುದೇ ರಾಸಾಯನಿಕ ಬಳಸದೆ ಹಣ್ಣಾದ ಮಾವನ್ನು ಕಣ್ಣಾರೆ ಕಂಡು, ಖರೀದಿಸಿದ ತೃಪ್ತಿ ಸಿಗಬೇಕು, ಹಳ್ಳಿಯ ಸೊಗಡಿನ ಅನುಭವ ದೊರೆಯಬೇಕು, ರೈತರಿಗೂ ಒಮ್ಮೆ ಒಂದಷ್ಟು ಹಣ್ಣು ಮಾರಾಟವಾಗಿ ಲಾಭವಾಗಬೇಕು ಎಂಬುದು ಈ ಮ್ಯಾಂಗೋ ಪಿಕಿಂಗ್ ಪ್ರವಾಸದ ಉದ್ದೇಶ.
ಈ ಥರ ಹೋದ ಮೇಲೆ ಒಬ್ಬರು ಕನಿಷ್ಠ ಆರೆಂಟು ಕೆಜಿ ಹಣ್ಣು ಖರೀದಿಸಬೇಕು ಅಂತ ಕಡ್ಡಾಯ ಮಾಡಿದ್ದೀವಿ. ಕೆಲವು ಕಡೆ ರೈತರ ಮುಂದೆ ಬಂದು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ ಉದಾಹರಣೆ ಇದೆ. ಹೊರಡುವ ಹಿಂದಿನ ದಿನದ ಸಾಯಂಕಾಲ ಆ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ ಎಂದು ನಿಗಮದ ಮರಿಗೌಡ ಅವರು ಒನ್ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದರು. [ಕರ್ನಾಟಕದ ಮಾವು ನೇರ ರಫ್ತಿಗಾಗಿ ಕೇಂದ್ರಕ್ಕೆ ಮನವಿ]

ರೈತರಿಗೆ ತಮ್ಮ ತೋಟದಲ್ಲೂ ಇಂಥದ್ದೊಂದು ಪ್ರವಾಸ ಆಗಲಿ ಎಂಬ ಉದ್ದೇಶ ಇದ್ದರೆ ನಮ್ಮನ್ನು ಭೇಟಿಯಾಗಬಹುದು. ಆದರೆ ತೋಟದಲ್ಲಿ ನಾಲ್ಕೈದು ಬಗೆಯ ಮಾವಿನ ಹಣ್ಣುಗಳಿರಬೇಕು. ತುಂಬ ಚೆನ್ನಾಗಿ ನಿರ್ವಹಣೆ ಮಾಡಿರಬೇಕು. ಇನ್ನೂ ಕೆಲ ನಿಯಮಗಳಿವೆ. ಅವೆಲ್ಲ ಇದ್ದರೆ ಅಲ್ಲಿಗೆ ಜನರನ್ನು ಕರೆದುಕೊಂಡು ಹೋಗ್ತೀವಿ ಎಂದು ಅವರು ತಿಳಿಸಿದರು.

ಹಲವು ದೇಶಗಳಲ್ಲಿ ಈ ರೀತಿಯ ವಿಧಾನ ಅನುಸರಿಸುತ್ತಾರೆ. ಸೇಬು, ದ್ರಾಕ್ಷಿ ಮತ್ತಿತರ ಹಣ್ಣುಗಳನ್ನು ರೈತರ ತೋಟದಿಂದಲೇ ಖರೀದಿಸುವುದಕ್ಕೆ ಪ್ರವಾಸ ಏರ್ಪಡಿಸುತ್ತಾರೆ. ನಮ್ಮಲ್ಲಿಯ ಆಸಕ್ತ ರೈತರು ಮೊಬೈಲ್ ಸಂಖ್ಯೆ 9480885800 (ಮರಿಗೌಡ) ಸಂಪರ್ಕಿಸಿ, ಆಹ್ವಾನಿಸಬಹುದು ಎಂದು ಮರಿಗೌಡ ಹೇಳಿದರು.












Click it and Unblock the Notifications