ಮಂಡೂರು: ಪ್ರಾಣ ಕೊಟ್ಟೇವು, ಕಸ ಹಾಕಲು ಬಿಡೆವು
ಬೆಂಗಳೂರು, ಜೂನ್.4: ಬೆಂಗಳೂರು ನಗರದ ಕಸವನ್ನು ತಮ್ಮ ಗ್ರಾಮದಲ್ಲಿ ವಿಲೇವಾರಿ ಮಾಡಿರುವುದನ್ನು ವಿರೋಧಿಸಿ ಮಂಡೂರು ಗ್ರಾಮಸ್ಥರು ಕೈಗೊಂಡಿರುವ ಪ್ರತಿಭಟನೆ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ.
ಮಂಡೂರಿನಲ್ಲಿ ಸೋಮವಾರ ರಾತ್ರಿ 23 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಆಕ್ರೋಶಗೊಂಡು ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರಗೊಳಿಸಿದ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಆರು ಗಂಟೆಯಿಂದ ಸಿಆರ್ಪಿಸಿ(ಕ್ರಿಮಿನಲ್ ಪ್ರೊಸೀಜರ್ ಕೋಡ್)144 ಸೆಕ್ಷನ್ ನಿಷೇಧಾಜ್ಞೆ ಜಾರಿಯಾಗಿದ್ದರೂ ಗ್ರಾಮಸ್ಥರು ಪ್ರತಿಭಟನೆ ಮುಂದುವರೆಸಿದ್ದು, ಐವತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಂಡೂರಿನಲ್ಲಿ ಸೋಮವಾರ ರಾತ್ರಿ ವಶಕ್ಕೆ ಪಡೆದ 21 ಮಂದಿಯನ್ನು ತಹಾಶೀಲ್ದಾರ್ ಮುಂದೆ ಹಾಜರುಪಡಿಸಿ ಬಿಡುಗಡೆಗೊಳಿಸಲಾಗಿದೆ. ಮಂಡೂರು ಘಟಕದ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ 6 ಗಂಟೆಯಿಂದ ಜೂನ್ 6 ಮಧ್ಯರಾತ್ರಿಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಹೆಚ್ಚವರಿ ಎಸ್ಪಿ ಅಬ್ದುಲ್ ಅಹದ್ ಹೇಳಿದ್ದಾರೆ.
ಬೆಂಗಳೂರು ನಗರದ ಕಸವನ್ನು ತಮ್ಮ ಗ್ರಾಮದಲ್ಲಿ ವಿಲೇವಾರಿ ಮಾಡಿರುವುದನ್ನು ವಿರೋಧಿಸಿ ಮಂಡೂರು ಗ್ರಾಮಸ್ಥರ ಪ್ರತಿಭಟನೆಗೆ ಮಂಗಳವಾರ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪಾಲ್ಗೊಂಡು ಬೆಂಬಲ ನೀಡಿದ್ದು ವಿಶೇಷವಾಗಿತ್ತು. ಪ್ರಾಣ ಹೋದರೂ ಸರಿ ಯಾವುದೇ ಕಾರಣಕ್ಕೂ ಬೆಂಗಳೂರಿನ ಕಸವನ್ನು ಇಲ್ಲಿ ಹಾಕಲು ಬಿಡುವುದಿಲ್ಲ ಎಂದು ಮಂಡೂರು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.[ಮಂಡೂರು ಕ್ಷೇತ್ರದ ಡಂಪಿಂಗ್ ಸ್ವಾಮಿ ಮಹಾತ್ಮೆ]
ಬಿಬಿಎಂಪಿ,ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವಪ್ರತಿಭಟನಾಕಾರರು ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿ ಕೈಕೊಟ್ಟ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಭದ್ರತೆಗಾಗಿ 200 ಕ್ಕೂಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮುಂದಿನ ಪುಟದಲ್ಲಿ ಮಂಡೂರು ಘಟಕ ಇರುವುದು ಎಲ್ಲಿ? ಗ್ರಾಮಸ್ಥರು ಅನುಭವಿಸುವ ಸಮಸ್ಯೆಗಳೇನು? ಬೆಂಗಳೂರಿನ ಕಸದ ಸಮಸ್ಯೆ ಕುರಿತ ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.

ಘಟಕ ಇರುವುದು ಎಲ್ಲಿ:
ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲೂಕಿನಲ್ಲಿ ಮಂಡೂರು ಗ್ರಾಮವಿದ್ದು ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಬೆಂಗಳೂರು ತಿರುಪತಿ ರಸ್ತೆಯ ಬೂದಿಗೆರೆ ಕ್ರಾಸ್ನಲ್ಲಿ ಎಡಕ್ಕೆ ತಿರುಗಿ ಮೂರು ಕಿ.ಮೀ ಸಾಗಿದರೆ ಮಂಡೂರು ತ್ಯಾಜ್ಯ ವಿಲೇವಾರಿ ಘಟಕ ಕಾಣ ಸಿಗುತ್ತದೆ.

ಪಕ್ಷಬೇಧವಿಲ್ಲದೇ ಬೆಂಬಲ ನೀಡಿ
ಬಿಬಿಎಂಪಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಮಂಡೂರು ಗ್ರಾಮಸ್ಥರ ಹೋರಾಟಕ್ಕೆ ಪಕ್ಷಬೇಧವಿಲ್ಲದೆ ಜನ ಬೆಂಬಲ ನೀಡಬೇಕಿದೆ. ಸರ್ಕಾರ ಇನ್ನಾದರೂ ವೈಜ್ಞಾನಿಕವಾಗಿ ತಾಜ್ಯ ವಿಲೇವಾರಿ ಮಾಡಿ ಬೆಂಗಳೂರು ಮಾನ ಕಾಪಾಡಬೇಕಿದೆ.
ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ

150 ಎಕರೆ ಜಾಗದಲ್ಲಿ ಘಟಕ
ಕರ್ಪೂರದ ಮರ, ಬೆಟ್ಟದ ನೆಲ್ಲಿಕಾಯಿ ಮರಗಳಿದ್ದ 150 ಎಕರೆ ಅರಣ್ಯ ಪ್ರದೇಶದಲ್ಲಿ ಮಂಡೂರು ಘಟಕ ಸ್ಥಾಪನೆಯಾಗಿದೆ. ಸ್ಥಾಪನೆಯಾಗುವ ವೇಳೆ ಜನರ ಮನೆಗಳಿಗೆವಿದ್ಯುತ್ ಸಂಪರ್ಕ, ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಬಿಬಿಎಂಪಿ ಆಗುವುದರ ಮೊದಲು ಕೆಆರ್ಪುರಂನಿಂದ ಮೂವತ್ತು ಟನ್ ತ್ಯಾಜ್ಯ ಮಾತ್ರ ಸುರಿಯಲಾಗುತಿತ್ತು. ಬಿಬಿಎಂಪಿಯಾಗಿ ಪರಿವರ್ತನೆಯಾದ ಮೇಲೆ ಇಲ್ಲಿ ಪ್ರತಿದಿನ ಎರಡು ಸಾವಿರ ಟನ್ ತ್ಯಾಜ್ಯ ರವಾನೆಯಾಗುತ್ತಿದೆ.

ಬೇರೆ ಕಡೆ ಡೆಲಿವರಿ:
ಗರ್ಭಿಣಿಯರು ಮಂಡೂರಿನಲ್ಲಿ ಇರಲು ಇಷ್ಟಪಡುವುದಿಲ್ಲ. ಬೇರೆ ಕಡೆ ಹೆತ್ತು ಅಲ್ಲಿ ಕೆಲ ತಿಂಗಳು ಕಳೆದು ನಂತರ ಇಲ್ಲಿಗೆ ಬರುತ್ತಾರೆ.ಒಂದು ವೇಳೆ ಮಗುವನ್ನು ಇಲ್ಲೇ ಹೆತ್ತರೆ ಆ ಮಗುವಿಗೆ ತುರಿಕೆಯಾಗುವುದರ ಜೊತೆಗೆ ಬಾಣಂತಿಯ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತಿದೆ.

ಶನಿವಾರ ರಸ್ತೆ ನಿರ್ಮಾಣ:
ಜನರು ಜೂನ್ ತಿಂಗಳಿನಲ್ಲಿ ಪ್ರತಿಭಟನೆ ಮಾಡುತ್ತಾರೆ ಎಂದು ತಿಳಿಯುತ್ತಿದ್ದಂತೆ ಬಿಬಿಎಂಪಿ ಶನಿವಾರ ಮೇ.31 ರಸ್ತೆಗೆ ಡಾಂಬರು ಹಾಕಿದೆ. ಯಾವಗಲೋ ನೀಡಿದ್ದ ಭರವಸೆಯನ್ನು ಈಗ ಪೂರ್ಣಗೊಳಿಸಿ ನಮ್ಮನ್ನು ಮೆಚ್ಚುಗೆಗಳಿಸಬಹುದು ಎಂದು ಸರ್ಕಾರ ಅಂದುಕೊಂಡಿದೆ. ಸರ್ಕಾರದ ಈ ಕೆಲಸಕ್ಕೆ ನಾವು ಮನಸೋತು ಪ್ರತಿಭಟನೆ ಕೈ ಬಿಡುವುದಿಲ್ಲ ಅಂತಾರೆ ಗ್ರಾಮಸ್ಥರು.

ನಾಯಿಗಳ ಕಾಟ:
ತ್ಯಾಜ್ಯ ಹೆಚ್ಚಾಗುತ್ತಿದ್ದಂತೆ ನಾಯಿಗಳ ಸಂಖ್ಯೆಯೂ ಹೆಚ್ಚಾಗಿದ್ದು ಸುಮಾರು ಎರಡು ಸಾವಿರ ನಾಯಿಗಳು ಈ ಗ್ರಾಮದಲ್ಲಿ ಇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಹಲವರು ಮಂದಿಗೆ ಈ ನಾಯಿ ಕಚ್ಚಿದ್ದು ಬೈಕಿನಲ್ಲಿ ಹೋಗುವಾಗಲೂ ಹಲವು ಮಂದಿಗೆ ನಾಯಿ ಕಚ್ಚಿದೆ.

ವೈದ್ಯರಿಗೂ ಕಷ್ಟ, ಗ್ರಾಮಸ್ಥರಿಗೂ ಕಷ್ಟ:
ಹತ್ತಿರದ ಆಸ್ಪತ್ರೆಗೆ ಮಂಡೂರಿನ ಗ್ರಾಮಸ್ಥರು ದಾಖಲಾದರೆ ನಿಮ್ಮ ಗೋಳು ಯಾವಾಗ ಮುಗಿಯುತ್ತೆ ಅಂತಾ ಕೇಳುತ್ತಾರಂತೆ ವೈದ್ಯರು. ಈ ಊರಿನ ಜನತೆಗೆ ಪ್ರತಿದಿನ ಔಷಧಿ ನೀಡುವುದೇ ವೈದ್ಯರ ಕೆಲಸವಾಗಿದೆ.

ಚರ್ಮದಲ್ಲಿ ತುರಿಕೆ:
ಬಿಬಿಎಂಪಿ ಸೊಳ್ಳೆ ಬಾರದಂತೆ ತಡೆಯಲು ಘಟಕದಲ್ಲಿ ಮತ್ತು ಗ್ರಾಮಸ್ಥರ ಮನೆಯ ಸುತ್ತಮುತ್ತಾ ರಾಸಾಯನಿಕವನ್ನು ಸಿಂಪಡನೆ ಮಾಡುತ್ತಿದೆ. ಆದರೂ ಸೊಳ್ಳೆ ಹಾವಳಿ ಕಡಿಮೆಯಾಗಿಲ್ಲ. ಸೊಳ್ಳೆ ಕಚ್ಚಿ ಚರ್ಮದಲ್ಲಿ ತುರಿಕೆ ಹೆಚ್ಚಾಗುತ್ತಿದೆ. ರಾಸಾಯನಿಕಕ್ಕೆ ನೀಲಿ ಬಣ್ಣ ಮಿಶ್ರಣೆ ಮಾಡಿ ಸಿಂಪಡನೆ ಮಾಡುತ್ತಿದ್ದಾರೆ ಅಂತಾರೆ ಗ್ರಾಮಸ್ಥರು.

ಮದ್ಯದ ದಾಸರಾಗುತ್ತಿದ್ದಾರೆ ಮಕ್ಕಳು:
ಮದ್ಯಪಾನ ಮಾಡಿದರೆ ತ್ಯಾಜ್ಯದ ವಾಸನೆ ಸಹಿಸಬಹುದು ಮತ್ತು ದೇಹದ ಆರೋಗ್ಯ ಕಾಪಾಡಬಹುದು ಎಂದು ಯಾರೋ ಕಿಡಿಗೇಡಿಗಳು ಹೇಳಿದ ಉಪದೇಶಕ್ಕೆ ಪ್ರೈಮರಿ ಮತ್ತು ಹೈಸ್ಕೂಲ್ಗೆ ಹೋಗುತ್ತಿರುವ ಮಕ್ಕಳು ಸಹ ಕುಡಿಯಲು ಆರಂಭಿಸಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಯಂತ್ರಗಳನ್ನು ಗುಜರಿಗೆ ಕೊಡಿ:
ಇಲ್ಲಿ ತ್ಯಾಜ್ಯ ವಿಂಗಡನೆ ಮಾಡಲು ದೊಡ್ಡ ದೊಡ್ಡ ಯಂತ್ರಗಳಿವೆ. ಆದರೆ ಕಾರ್ಯನಿರ್ವಹಿಸುವುದಿಲ್ಲ. ಲಾರಿಗಳು ಬಂದು ತ್ಯಾಜ್ಯವನ್ನು ಇಳಿಸಿ ಹೋಗುತ್ತವೆ. ಈ ಯಂತ್ರಗಳು ಪ್ರದರ್ಶನಕ್ಕೆ ಮಾತ್ರ. ಕೆಲಸ ಏನು ಆಗುತ್ತಿಲ್ಲ ಇನ್ನು ಗುಜರಿಗೆ ಹಾಕಬೇಕು ಅಂತಾರೆ ಗ್ರಾಮಸ್ಥರು.

ಬೇರೆ ದೇಶಗಳಲ್ಲಿ ಸಮಸ್ಯೆಯಿಲ್ಲ. ನಮ್ಮಲ್ಲಿ ಸಮಸ್ಯೆ:
"ಬೇರೆ ದೇಶಗಳು ಅಚ್ಚುಕಟ್ಟಾಗಿ ಕಸದಿಂದ ಗ್ಯಾಸ್ನ್ನು ತಯಾರಿಸುತ್ತಿವೆ. ನಮ್ಮ ಸರ್ಕಾರಗಳು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಲು ಇಷ್ಟವಿಲ್ಲ. ಹಣ ಕಬಳಿಸುವ ಯೋಜನೆಗಳಿಗೆ ಬೇಗನೆ ಅನುಮೋದನೆ ನೀಡುತ್ತಿದ್ದಾರೆ. ಸರ್ಕಾರಕ್ಕೆ ಮೂರು ಬಾರಿ ಡೆಡ್ಲೈನ್ ನೀಡಿದರೂ ಇನ್ನು ಎಚ್ಚೆತ್ತುಕೊಂಡಿಲ್ಲ"
ಅನಂದ್ ಕುಮಾರ್,ಪ್ರತಿಭಟನಾ ನಿರತ ಸ್ಥಳೀಯರು

ಎಸಿ ಅಡಿಯಲ್ಲಿ ಕೆಲಸ ಮಾಡಿದವರಿಗೆ ನಮ್ಮ ಗೋಳು ಹೇಗೆ ತಿಳಿಯಬೇಕು
"ಮಂತ್ರಿಗಳು ಮತ್ತು ಬಿಬಿಎಂಪಿಯವರಿಗೆ ಎಸಿಯಲ್ಲಿ ಪ್ರತಿದಿನ ಕೆಲಸ ಮಾಡಿ ನಮ್ಮ ಕಷ್ಟ ಏನು ಅಂತ ಗೊತ್ತಿಲ್ಲ. ಒಂದು ದಿನ ನಮ್ಮ ಗ್ರಾಮದಲ್ಲಿ ವಾಸ್ತವ್ಯ ಹೂಡಲಿ"
ಇಂದಿರಾ ಶ್ರೀನಿವಾಸ್,ಸ್ಥಳೀಯ ಗ್ರಾಮಸ್ಥರು

ಎರಡು ಘಟಕ ಬಂದ್:
ಈಗಾಗಲೇ ಸ್ಥಳೀಯರ ವಿರೋಧದಿಂದಾಗಿ ಮಾವಳ್ಳಿಪುರ ಹಾಗೂ ಚೀಮಸಂದ್ರದ ಘಟಕಗಳನ್ನು ಮುಚ್ಚಲಾಗಿದ್ದು. ಈ ಘಟಕಗಳನ್ನು ಮುಚ್ಚಿದ್ದರಿಂದ ಹೆಚ್ಚುವರಿ ಕಸಗಳನ್ನು ಮಂಡೂರಿಗೆ ರವಾನೆ ಯಾಗುತ್ತಿತ್ತು. ಈಗ ಮಂಡೂರು ಘಟಕ ಮುಚ್ಚಿದ್ದರಿಂದ ಈ ಕಸಗಳನ್ನು ವಿಲೇವಾರು ಮಾಡುವುದು ಬಿಬಿಎಂಪಿಗೆ ತಲೆನೋವಾಗಿದೆ.

ಯಾವ ಘಟಕದಲ್ಲಿ ಎಷ್ಟು ತ್ಯಾಜ್ಯ:
ಬಿಬಿಎಂಪಿ ವೈಜ್ಞಾನಿಕವಾಗಿ ಕಸವನ್ನು ವಿಲೇವಾರಿ ಮಾಡದ ಕಾರಣ ಒಟ್ಟು 23 ಲಕ್ಷ ಟನ್ ಕಸ ಆರು ಘಟಕದಲ್ಲಿ ಕೊಳೆಯುತ್ತಿದೆ. ಮಂಡೂರು ಉತ್ತರ 6ಲಕ್ಷ ಟನ್, ಮಂಡೂರು ದಕ್ಷಿಣ 4ಲಕ್ಷ ಟನ್, ಚೀಮಸಂದ್ರ 3 ಲಕ್ಷ ಟನ್, ಮಾವಳ್ಳಿಪುರ 7 ಲಕ್ಷ ಟನ್, ಅಂಜನಾಪುರ 1 ಲಕ್ಷ ಟನ್, ಬಿಂಗಿಪುರ 1.45 ಲಕ್ಷ ಟನ್ ಕಸ ಸಂಸ್ಕರಣೆಯಾಗದೇ ಹಾಗೇ ಉಳಿದಿದೆ.

ಸಮಸ್ಯೆಗೆ ಯಾರು ಕಾರಣ:
ಮನೆಯಲ್ಲಿ ಸರಿಯಾಗಿ ಕಸ ವಿಂಗಡಿಸದ ಜನ
ಭರವಸೆ ನೀಡಿ ದಿನ ದೂಡುತ್ತಿರುವ ಬಿಬಿಎಂಪಿ ಅಧಿಕಾರಿಗಳು
ಕಾರ್ಪೋರೇಟರ್ಗಳು, ಶಾಸಕರು, ಸರ್ಕಾರ












Click it and Unblock the Notifications