ಬೆಂಗಳೂರು : ಮೊಬೈಲ್ ಕಳ್ಳತನ ಮಾಡಲು ಒಪ್ಪದ್ದಕ್ಕೆ ಚಾಕು ಇರಿತ
ಬೆಂಗಳೂರು, ಮೇ 08 : ಮೊಬೈಲ್ ಕಳ್ಳತನ ಮಾಡಲು ಬರುವುದಿಲ್ಲ ಎಂದು ಹೇಳಿದ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಮಲ್ಲಸಂದ್ರದ ನಿವಾಸಿ ಜಿ.ಮಣಿಕುಮಾರ್ (23) ಚಾಕು ಇರಿತದಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಕುವಿನಿಂದ ಇರಿದ ಗುಂಪು, ಮಣಿಕುಮಾರ್ ಮೊಬೈಲ್, ಪರ್ಸ್ ಕದ್ದು ಪರಾರಿಯಾಗಿದೆ.
ಮಣಿಕುಮಾರ್ ಮತ್ತು ಸಂಜು 4 ವರ್ಷಗಳಿಂದ ಸ್ನೇಹಿತರು. ಮೊಬೈಲ್ ಕಳ್ಳತನವನ್ನು ಇವರು ಕಸುಬು ಮಾಡಿಕೊಂಡಿದ್ದರು. ಮಣಿಕುಮಾರ್, ಸಂಜು, ಪ್ರದೀಪ ಮತ್ತು ಇತರ ನಾಲ್ವರು ಸೇರಿ ಒಂದು ಗುಂಪು ಕಟ್ಟಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದರು.

ಆದರೆ, ಕೆಲವು ದಿನಗಳಿಂದ ಮಣಿಕುಮಾರ್ ಮೊಬೈಲ್ ಕಳ್ಳತನ ನಿಲ್ಲಿಸಿದ್ದ. ಸಂಜು ಮತ್ತು ಇತರ ಗ್ಯಾಂಗ್ ಸದಸ್ಯರನ್ನು ಭೇಟಿ ಮಾಡುತ್ತಿರಲಿಲ್ಲ. ಇದರಿಂದಾಗಿ ಕೋಪಗೊಂಡಿದ್ದ ಪ್ರದೀಪ್ ಮಣಿಕುಮಾರ್ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ.
ಸೋಮವಾರ ಟಿ.ದಾಸರಹಳ್ಳಿ ಬಳಿಯ ಬೇಕರಿಯೊಂದಕ್ಕೆ ಪ್ರದೀಪ್ ಬಂದಿದ್ದಾಗ ಮಣಿಕುಮಾರ್ ಸಿಕ್ಕಿದ್ದಾನೆ. ಆತ ಸಂಜ ಸೇರಿದಂತೆ ಗುಂಪಿನ ಇತರ ಸದಸ್ಯರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾನೆ. ಈ ವೇಳೆ ಮತ್ತೆ ನಮ್ಮ ಜೊತೆ ಸೇರು ಎಂದು ಮಣಿಕುಮಾರ್ ಜೊತೆ ಜಗಳವಾಡಿದ್ದಾರೆ.
ಜಗಳ ಜೋರಾಗಿ ಚಾಕುವಿನಿಂದ ಮಣಿಕುಮಾರ್ಗೆ ಚುಚ್ಚಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಆತ ಓದ್ದಾಡುತ್ತಿದ್ದಾಗ ಆತನ ಮೊಬೈಲ್ ಮತ್ತು ಪರ್ಸ್ ಕದ್ದು ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಮಣಿಕುಮಾರ್ನನ್ನು ಆಸ್ಪತ್ರೆಗೆ ದಾಖಲು ಮಾಡಿದರು.
ಎರಡು ದಿನಗಳ ಚಿಕಿತ್ಸೆ ಬಳಿಕ ಮಣಿಕುಮಾರ್ ಚೇತರಿಸಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications