ಹೊಸಕೋಟೆ; ಜಮೀನು ವಿಚಾರದಲ್ಲಿ ಪೊಲೀಸರಿಂದ ದೌರ್ಜನ್ಯ
ಬೆಂಗಳೂರು, ಜನವರಿ 08: ಜಮೀನು ವಿಚಾರದಲ್ಲಿ ಪೊಲೀಸರು ಮತ್ತು ಸಿಬ್ಬಂದಿಗಳ ಕಿರುಕುಳದಿಂದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಹೊಸಕೋಟೆ ಠಾಣೆಯ ಸಬ್ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳ ವಿರುದ್ಧ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಅತ್ತಿವಟ್ಟ ಗ್ರಾಮದ ಕೃಷ್ಣಪ್ಪ (80) ಅವರು ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸ್ ಆಯುಕ್ತರಿಗೆ ಪುತ್ರ ಮುನಿ ಆಂಜಿನಿ ದೂರು ನೀಡಿದ್ದಾರೆ.
ಹೊಸಕೋಟೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜು ಮತ್ತು ನಾಲ್ವರು ಸಿಬ್ಬಂದಿಗಳು ಕೃಷ್ಣಪ್ಪ ಅವರನ್ನು ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿದ್ದು, ಬೆದರಿಕೆ ಹಾಕಿದ್ದಾರೆ. ಜಮೀನನ್ನು ಗ್ರಾಮದ ನಿವಾಸಿಗಳಾದ ವೆಂಕಟರಮಣಪ್ಪ, ದೇವರಾಜು ಮುಂತಾದವರಿಗೆ ಬಿಟ್ಟುಕೊಡಬೇಕು ಎಂದು ತಾಕೀತು ಮಾಡಿದ್ದಾರೆ.

ಕೃಷ್ಣಪ್ಪ ಮತ್ತು ಅವರ ಪುತ್ರರಿಗೆ ಉರಿನ ಜನರ ಮುಂದೆಯೇ ಲಾಠಿಯಿಂದ ಹೊಡೆದು ಅವಮಾನ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೇಸು ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಕೃಷ್ಣಪ್ಪ 5/1/2021ರಂದು ಹೊಸಕೋಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಏನಿದು ಪ್ರಕರಣ; ಅತ್ತಿವಟ್ಟ ಗ್ರಾಮದ ಸರ್ವೆ ನಂಬರ್ 38ರಲ್ಲಿ 1.35 ಎಕರೆ/ ಗುಂಟೆ ಜಮೀನು ಕೃಷ್ಣಪ್ಪ ಅವರಿಗೆ ಸೇರಿದೆ. ಮುನಿಆಂಜಿನಿ ಮತ್ತು ಅವರ ತಮ್ಮ ಅದನ್ನು ವಿಭಾಗ ಮಾಡಿಕೊಂಡು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆದರೆ, ಅದೇ ಗ್ರಾಮದ ವಾಸಿಗಳಾದ ವೆಂಕಟರಮಣಪ್ಪ, ದೇವರಾಜು ಮತ್ತು ಇತರರು ಸದರಿ ಜಮೀನಿನಲ್ಲಿ ಅವರಿಗೆ ಸೇರಿದ ಸರ್ವೇ ನಂಬರ್ 37ರ ಜಮೀನು ಸೇರಿಕೊಂಡಿದೆ ಎಂದು ಹೇಳುತ್ತಿದ್ದಾರೆ.
ಈ ಕುರಿತು ಹೊಸಕೋಟೆ ಸಿವಿಲ್ ನ್ಯಾಯಾಲಯದಲ್ಲಿ ದೂರನ್ನು ದಾಖಲು ಮಾಡಲಾಗಿದೆ. ನ್ಯಾಯಾಲಯ ಪ್ರತಿಬಂಧಕಾಜ್ಞೆಯನ್ನು ನೀಡಿದೆ. ಆದರೆ, ವೆಂಕಟರಮಣಪ್ಪ, ದೇವರಾಜು ಮುಂತಾದವರು ರಾಜಕೀಯ ಬೆಂಬಲದಿಂದ ಪೊಲೀಸರಿಗೆ ಹಣ ನೀಡಿ ಕೃಷ್ಣಪ್ಪ ಅವರನ್ನು ರಾಣೆಗೆ ಕರೆಸಿಕೊಂಡು ಬೆದರಿಕೆ ಹಾಕಿದ್ದಾರೆ.
ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿಕೊಳ್ಳುತ್ತೇವೆ ಎಂದು ಕೃಷ್ಣಪ್ಪ ಕುಟುಂಬದವರು ಪೊಲೀಸರಿಗೆ ಹೇಳಿದ್ದಾರೆ. ಆದರೆ, ಪೊಲೀಸರು ತಾಲೂಕು ಕಚೇರಿಗೆ ಪತ್ರ ಬರೆದು ಜಮೀನಿನ ಸರ್ವೇ ಮಾಡಲು ಹೇಳಿರುತ್ತಾರೆ.
ನ್ಯಾಯಾಲಯದ ಆದೇಶವನ್ನೂ ಉಲ್ಲಂಘನೆ ಮಾಡಿ ವೆಂಕಟರಮಣಪ್ಪ, ದೇವರಾಜು ಮುಂತಾದವರು ಸರ್ವೇ ಮಾಡಿಸಿ ಕಲ್ಲು ಹಾಕಿಸಿದ್ದಾರೆ. ಕೃಷ್ಣಪ್ಪ ಕುಟುಂಬದವರು ಸ್ವಾಧೀನಾನುಭವಕ್ಕೆ ತೊಂದರೆ ಮಾಡಿದರೆ ಕೇಸು ಹಾಕಿ ಜೈಲಿಗೆ ಕಳಿಸುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ.
ಕೃಷ್ಣಪ್ಪ ಅವರನ್ನು ಹುಡುಕಿಕೊಡುವಂತೆ ಮತ್ತು ಪೊಲೀಸರಿಂದ ಆದ ದೌರ್ಜನ್ಯದ ಬಗ್ಗೆ ಮುನಿ ಆಂಜಿನಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ.












Click it and Unblock the Notifications