ಬೆಂಗಳೂರು : ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು, ಸಿಐಡಿ ತನಿಖೆ
ಬೆಂಗಳೂರು, ಮಾರ್ಚ್ 21 : ಕಳವು ಆರೋಪದ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಯಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜೀವನ್ಭೀಮಾನಗರ ಪೊಲೀಸ್ ಠಾಣೆಯಲ್ಲಿ ಒರಿಸ್ಸಾ ಮೂಲದ ಮಹೇಂದ್ರ (45) ಶನಿವಾರ ಮೃತಪಟ್ಟಿದ್ದ. 'ಪೊಲೀಸ್ ವಶದಲ್ಲಿದ್ದ ಮಹೇಂದ್ರನ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ' ಎಂದು ಡಿಸಿಪಿ ಸತೀಶ್ ಕುಮಾರ್ ಹೇಳಿದ್ದಾರೆ. [ಆಟೋದಲ್ಲಿ ಪ್ರಯಾಣಿಸುವವರಿಗೆ 'ಬಿ-ಸೇಫ್' ಅಪ್ಲಿಕೇಶನ್]

ಘಟನೆ ವಿವರ : ಒರಿಸ್ಸಾ ಮೂಲಕ ಮಹೇಂದ್ರ 12 ವರ್ಷಗಳಿಂದ ಎಚ್ಎಎಲ್ ಬಳಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಮನೆಯಲ್ಲಿ ಚಿನ್ನಾಭರಣ ಕಳುವಾಗಿತ್ತು, ಮನೆಯ ಮಾಲೀಕ ಈ ಬಗ್ಗೆ ಜೀವನ್ಭೀಮಾನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. [ಲಾಟರಿ ಆಸೆಗೆ 38 ಲಕ್ಷ ರು. ಕಳಕೊಂಡ ಬೆಂಗಳೂರು ಮಹಿಳೆ]
ಶನಿವಾರ ಮಹೇಂದ್ರನನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗಿತ್ತು. ಶನಿವಾರ ರಾತ್ರಿ ಠಾಣೆಯಲ್ಲಿ ಆತ ಎದೆನೋವು ಎಂದು ಹೇಳಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗುವಾಗಲೇ ಆತ ಮೃತಪಟ್ಟಿದ್ದ. [ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಯಾಗಿದ್ದು ಮಗನಿಂದಲೇ!]
ಮರಣೋತ್ತರ ಪರೀಕ್ಷೆಗಾಗಿ ಮಹೇಂದ್ರ ಶವವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ಭೇಟಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ಡಿಸಿಪಿ ಸತೀಶ್ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
6 ಅಧಿಕಾರಿಗಳ ಅಮಾನತು : ಪೊಲೀಸ್ ಠಾಣೆಯಲ್ಲಿಯೇ ಆರೋಪಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಠಾಣೆಯ ಇನ್ಸ್ಪೆಕ್ಟರ್ ಹಿತೇಂದ್ರ, ಸಬ್ ಇನ್ಸ್ಪೆಕ್ಟರ್ ರಾಜಶೇಖರ್, ಪೇದೆಗಳಾದ ಏಜಾಜ್, ಸಿದ್ಧಪ್ಪ, ಕೇಶವರಾಜ್ ಮತ್ತು ಮೋಹನ್ ಅವರನ್ನು ಅಮಾನತು ಮಾಡಲಾಗಿದೆ.












Click it and Unblock the Notifications