ಮಧ್ಯಪ್ರದೇಶದಲ್ಲಿ ಸಿಕ್ಕ ವ್ಯಕ್ತಿಯ ಶವದ ತಲೆ ಬೆಂಗಳೂರಲ್ಲಿ ಪತ್ತೆ!
ಬೆಂಗಳೂರು, ಅಕ್ಟೋಬರ್ 16 : ಮಧ್ಯಪ್ರದೇಶದ ಬೇತುಲ್ ಬಳಿ ರೈಲ್ವೆ ಹಳಿಯ ಮೇಲೆ ರುಂಡವಿಲ್ಲದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಬೆಂಗಳೂರಿನಲ್ಲಿ ರುಂಡ ಪತ್ತೆಯಾಗಿದ್ದು, ಎರಡೂ ರಾಜ್ಯಗಳ ಪೊಲೀಸರ ನಡುವೆ ಮಾಹಿತಿ ವಿನಿಯಮವಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಬೇತುಲ್ ನಿವಾಸಿ ರವಿ ಮಾರ್ಕಮ್ (28) ಎಂದು ಗುರುತಿಸಲಾಗಿದೆ. ದೇಹದ ಭಾಗಗಳನ್ನು ಸಂಗ್ರಹ ಮಾಡಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು. ಶವದ ಅಂತ್ಯ ಸಂಸ್ಕಾರವೂ ನಡೆದಿದೆ.
ನವದೆಹಲಿ-ಬೆಂಗಳೂರು ರೈಲಿಗೆ ಅಡ್ಡ ಬಂದಿದ್ದ ರವಿ ಮಾರ್ಕಮ್ ಮೃತಪಟ್ಟಿದ್ದ. ದೇಹ ಬೇತುಲ್ ಬಳಿಯೇ ಉಳಿದರೆ ತಲೆ ಮಾತ್ರ ಕತ್ತರಿಸಿದ ಬಳಿಕ ರೈಲು ಇಂಜಿನ್ನಲ್ಲಿ ಸಿಲುಕಿಕೊಂಡಿತ್ತು. ಬೆಂಗಳೂರಿನ ರೈಲು ಸಿಬ್ಬಂದಿ ಅಕ್ಟೋಬರ್ 4ರಂದು ತಲೆಯನ್ನು ಪತ್ತೆ ಹಚ್ಚಿದ್ದರು.

ಘಟನೆ ವಿವರ: ಅಕ್ಟೋಬರ್ 3ರಂದು ಬೇತುಲ್ ಬಳಿ ಶವ ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಸ್ಥಳಕ್ಕೆ ತೆರಳಿದ ಅವರು ಪರಿಶೀಲನೆ ನಡೆಸಿದಾಗ ಶವದ ತಲೆ ಮಾತ್ರ ಪತ್ತೆಯಾಗಿರಲಿಲ್ಲ.
ಬಳಿಕ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಕುರಿತು ಮಾಹಿತಿ ರವಾನೆ ಮಾಡಲಾಗಿತ್ತು. ಇತ್ತ ಬೆಂಗಳೂರು ಪೊಲೀಸರು ತಲೆ ಸಿಕ್ಕ ಬಳಿಕ ಅದರ ಫೋಟೋವನ್ನು ಎಲ್ಲಾ ಠಾಣೆಗಳಿಗೆ ಕಳುಹಿಸಿದ್ದರು. ಆಗ ಮಾರ್ಕಮ್ ಮೃತದೇಹದ ತಲೆ ಎಂಬುದು ತಿಳಿದಿದೆ.
ರವಿ ಮಾರ್ಕಲ್ ಆತ್ಮಹತ್ಯೆ ಮಾಡಿಕೊಂಡನೋ?, ರೈಲಿಗೆ ಆಕಸ್ಮಿಕವಾಗಿ ಅಡ್ಡಬಂದು ಮೃತಪಟ್ಟನೋ ಎಂದು ತನಿಖೆ ನಡೆಯುತ್ತಿದೆ. ತಲೆ ಸಿಗದ ಕಾರಣ ಕುಟುಂಬದವರು ಅಂತ್ಯ ಸಂಸ್ಕಾರ ಮಾಡಿದ್ದರು. ತಲೆಯ ಅಂತ್ಯ ಸಂಸ್ಕಾರ ಬೆಂಗಳೂರಿನಲ್ಲಿಯೇ ಪೊಲೀಸರು ಮಾಡಿದ್ದಾರೆ.
ಬೆಂಗಳೂರು ಪೊಲೀಸರು ತಂಡ ತಲೆ ಸಿಕ್ಕ ಪ್ರಕರಣದ ತನಿಖೆಗೆ ಬೇತುಲ್ಗೆ ಪ್ರಯಾಣ ಬೆಳೆಸಿದೆ. ಅಲ್ಲಿನ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ, ಪ್ರಕರಣದ ತನಿಖೆಗೆ ರಾಜ್ಯದ ಪೊಲೀಸರು ಸಹಕಾರವನ್ನು ನೀಡಲಿದ್ದಾರೆ.












Click it and Unblock the Notifications