Namma Metro: ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಯುವಕನ ಆತ್ಮಹತ್ಯೆ ಯತ್ನ
ಬೆಂಗಳೂರು, ಜನವರಿ 19: ಬೆಂಗಳೂರು ನಗರದ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹಸಿರು ನಮ್ಮ ಮೆಟ್ರೋ ಮಾರ್ಗದ ಜಾಲಹಳ್ಳಿ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮೆಟ್ರೋ ರೈಲುಗಳ ಸಂಚಾರವನ್ನು ಬಿಎಂಆರ್ಸಿಎಲ್ ಸ್ಥಗಿತಗೊಳಿಸಿದ್ದು, ಪರಿಶೀಲನೆ ನಡೆಯುತ್ತಿದೆ.
ಸೋಮವಾರ ಬೆಳಗ್ಗೆ 10.25ರ ಸುಮಾರಿಗೆ ಜಾಲಹಳ್ಳಿ ನಿಲ್ದಾಣದಲ್ಲಿ ರೈಲು ಬರುವಾಗ ಅನಿಲ್ ಕುಮಾರ್ ಪಾಂಡೆ ಎಂಬ ವ್ಯಕ್ತಿ ಎರಡು ಹಳಿಗಳ ನಡುವೆ ಹಾರಿದ್ದಾನೆ. ತಕ್ಷಣ ರೈಲು ಸಂಚಾರ ನಿಲ್ಲಿಸಲಾಗಿದೆ. ಈ ಘಟನೆಯಿಂದಾಗಿ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.

ಮೆಟ್ರೋ ರೈಲು ಬರುವುದನ್ನು ನೋಡಿದ ವ್ಯಕ್ತಿ ಹಳಿಗೆ ಹಾರಿ ಎರಡು ಹಳಿಗಳ ನಡುವೆ ಮಲಗಿದ. ತಕ್ಷಣ ನಮ್ಮ ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಸೂಚನೆಯಂತೆ ರೈಲು ನಿಲ್ಲಿಸಿ, ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ, ಸಿಬ್ಬಂದಿ ಆತನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಬಿಎಂಆರ್ಸಿಎಲ್ ಮಾಹಿತಿ: ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯ ಆತ್ಮಹತ್ಯೆ ಯತ್ನ ಪ್ರಕರಣದ ಬಗ್ಗೆ ಬಿಎಂಆರ್ಸಿಎಲ್ ವಕ್ತಾರರು ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಅನಿಲ್ ಕುಮಾರ್ ಪಾಂಡೆ (49) ಎಂದು ಗುರುತಿಸಲಾಗಿದೆ. ಈತ ಬಿಹಾರ ಮೂಲದವನಾಗಿದ್ದು, ಏರ್ಪೋರ್ಸ್ನ ನಿವೃತ್ತಿ ಉದ್ಯೋಗಿ.
ಸೋಮವಾರ ಬೆಳಗ್ಗೆ 10.25ರ ಸುಮಾರಿಗೆ ಜಾಲಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬರುವ ಹೊತ್ತಿಗೆ ಆತ ಹಳಿಗೆ ಜಿಗಿದಿದ್ದಾನೆ. ತುರ್ತಾಗಿ ಎರ್ಮಜೆನ್ಸಿ ಟ್ರಿಪ್ ಸಿಸ್ಟಮ್ ಕಾರ್ಯ ನಿರ್ವಹಣೆ ಮಾಡಿದೆ, ವ್ಯಕ್ತಿಯನ್ನು ಬಿಎಂಆರ್ಸಿಎಲ್ ಸಿಬ್ಬಂದಿ & ತಂಡ ರಕ್ಷಣೆ ಮಾಡಿದೆ. ಪ್ರಾಥಮಿಕ ಮಾಹಿತಿ ಅನ್ವಯ ಯಾವುದೇ ಗಾಯಗಳು ಆತನಿಗೆ ಆಗಿಲ್ಲ.
10.50ಕ್ಕೆ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರವನ್ನು ಯಥಾಸ್ಥಿತಿಗೆ ತರಲಾಗಿದೆ. 10.25 ರಿಂದ 10.50ರ ತನಕ 4 ರೈಲುಗಳು ಯಶವಂತಪುರ ಮತ್ತು ರೇಷ್ಮೆ ಸಂಸ್ಥೆ ತನಕ ಮಾತ್ರ ಸಂಚಾರ ನಡೆಸಿವೆ. ಮಾದಾವರ ತನಕ ಸಂಚಾರ ನಡೆಸಿಲ್ಲ ಎಂದು ಬಿಎಂಆರ್ಸಿಎಲ್ ಹೇಳಿದೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ, ಆತ್ಮಹತ್ಯೆ ಯತ್ನ ಪ್ರಕರಣ ಇದೇ ಮೊದಲಲ್ಲ. ಆದ್ದರಿಂದ ರೈಲು ನಿಲ್ದಾಣದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ರೈಲು ಬರುವಾಗ ಹಳದಿ ಪಟ್ಟಿಯನ್ನು ಪ್ರಯಾಣಿಕರ ದಾಟದಂತೆ ಸಿಬ್ಬಂದಿ ಗಮನಹರಿಸುತ್ತಾರೆ.
2024ರ ಸೆಪ್ಟೆಂಬರ್ 17ರಂದು ನೇರಳೆ ಮಾರ್ಗದ ಮೆಟ್ರೋ ಹಳಿಗೆ ಜಿಗಿದು ಬಿಹಾರ ಮೂಲದ ಸಿದ್ಧಾರ್ಥ್ ಜೈನ್ (30) ಎಂಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ರೈಲು ನಿಲ್ಲಿಸಲಾಗಿತ್ತು, ಆತ ಪ್ರಾಣಾಪಾಯದಿಂದ ಪಾರಾಗಿದ್ದ.
ಇದೇ ಮಾದರಿ ಘಟನೆಗಳು
* ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಳಿಗೆ ಇಳಿದಿದ್ದರು
* ಕುವೆಂಪು ನಗರ ಮೆಟ್ರೋ ನಿಲ್ದಾಣದಲ್ಲಿ ಇಬ್ಬರು ಯುವಕರು ಹಳಿ ದಾಟಲು ಪ್ರಯತ್ನ ನಡೆಸಿದ್ದರು
* ಕೇರಳ ಮೂಲದ ಶ್ಯಾರೋನ್ ಎಂಬಾತ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ
* ಮಹಾರಾಷ್ಟ್ರ ಮೂಲದ ಧ್ರುವ್ ಠಕ್ಕರ್ ಎಂಬ ವಿದ್ಯಾರ್ಥಿ ಅತ್ತಿಗುಪ್ಪೆ ರೈಲು ನಿಲ್ದಾಣದಲ್ಲಿ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ












Click it and Unblock the Notifications