ಧರ್ಮರಾಯಸ್ವಾಮಿ ದೇಗುಲದಲ್ಲಿ ಒಂದು ವಾರದಿಂದ ಕಳ್ಳತನ!
ಬೆಂಗಳೂರು, ಜ. 14: ಬೆಂಗಳೂರಿನ ಇತಿಹಾಸ ಪ್ರಸಿದ್ಧಿ ಧರ್ಮರಾಯ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಕದಿಯಲು ಹೋಗಿ ಕಳ್ಳನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಮಂಜುನಾಥ್ ಬಂಧಿತ ಆರೋಪಿಯ ಹೆಸರು. ಕಳೆದ ಒಂದು ವಾರದಿಂದ ಭಕ್ತನ ಸೋಗಿನಲ್ಲಿ ಎಸ್.ಪಿ. ರಸ್ತೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮಂಜುನಾಥ್ ಹೋಗುತ್ತಿದ್ದ. ಕಳೆದ ಒಂದು ವಾರದಿಂದ ಹುಂಡಿಯಲ್ಲಿ ಕಾಸು ಕದ್ದಿದ್ದ. ಆದರೆ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ಧರ್ಮರಾಯ ಸ್ವಾಮಿಗೆ ಪೂಜೆ ಮಾಡುವ ಅರ್ಚಕರ ಮೊಬೈಲ್ ಪರ್ಸ್ ಎಗರಿಸಿ ನಾಪತ್ತೆಯಾಗಿದ್ದ.
ಇಷ್ಟಕ್ಕೂ ಚಾಳಿ ಬಿಡದ ಮಂಜುನಾಥ್ ಪುನಃ ಧರ್ಮರಾಯಸ್ವಾಮಿ ಹುಂಡಿಯಲ್ಲಿ ಹಣ ಕದಿಯುವ ವೇಳೆ ಭಕ್ತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಮಂಜುನಾಥ್ ವಿರುದ್ಧ ಹಲಸೂರು ಗೇಟ್ ಪೊಲೀಸರು ಕೇಸು ದಾಖಲಿಸಿದ್ದಾರೆ.
ತೀವ್ರ ವಿಚಾರಣೆ: ಕಳೆದ ಒಂದು ವಾರದಿಂದ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಹಣ ಕದ್ದ ಬಗ್ಗೆ ಆರೋಪಿ ಬಾಯಿಬಿಟ್ಟಿದ್ದಾನೆ. ಈ ಕುರಿತ ವಿಚಾರಣೆ ಮುಂದುವರೆದಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪುನಃ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.
ಆಟೋ ಚಕ್ರ ಕದಿಯುವ ಗ್ಯಾಂಗ್ :
ರಾಜಧಾನಿಯಲ್ಲಿ ಆಟೋ ಚಕ್ರ ಕದಿಯುವ ಹೊಸ ದಂಧೆ ಶುರುವಾಗಿದೆ. ಈ ಹಿಂದೆ ದ್ವಿಚಕ್ರ ವಾಹನ ಮತ್ತು ಕಾರುಗಳ ಚಕ್ರ ಬಿಡಿಸಿಕೊಂಡು ಪರಾರಿಯಾಗುತ್ತಿದ್ದರು. ಇದೀಗ ಆಟೋಗಳ ಚಕ್ರಗಳ ಮೇಲೆ ಕಳ್ಳರು ಕಣ್ಣು ಹಾಕಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಆಟೋಗಳ ಚಕ್ರಗಳನ್ನು ಕದ್ದು ಪರಾರಿಯಾಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ನಗರದಲ್ಲಿ ನಡೆದಿದೆ. ಮನೆ ಮುಂದೆ ನಿಲ್ಲಿಸಿದ್ದ ಎರಡು ಅಟೋ ಟೈರ್ ಬಿಚ್ಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಅಟೋ ಚಕ್ರ ಬಿಚ್ಚಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹನುಮಂತನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.