'ಕೆರೆ ಹಬ್ಬ' ಆಚರಿಸುತ್ತಿದ್ದಾರೆ ಬೆಂಗಳೂರು ಶಾಲಾ ಮಕ್ಕಳು!
ಬೆಂಗಳೂರು, ಫೆಬ್ರವರಿ 14; ಕೆರೆಗಳ ಉಳಿವಿಗಾಗಿ ಶಾಲಾ ಕಾಲೇಜು ಮಕ್ಕಳನ್ನು ಕೆರೆ ಆವರಣಕ್ಕೆ ಕರೆಯಿಸಿ, ಅದರ ಇತಿಹಾಸದ ಕುರಿತು ಅರಿವು ಮೂಡಿಸುವ ಸಲುವಾಗಿ ಮಕ್ಕಳ ಕೆರೆ ಹಬ್ಬವನ್ನು ನಮ್ಮ ಬೆಂಗಳೂರು ಪ್ರತಿಷ್ಠಾನ ಹಮ್ಮಿಕೊಂಡಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರ ಶಾಲಾ ಕಾಲೇಜು ಮಕ್ಕಳನ್ನು ಹಬ್ಬಕ್ಕೆ ಆಹ್ವಾನಿಸಲಾಗುತ್ತದೆ. ಈ ವರ್ಷದ ಮೊದಲ ಮಕ್ಕಳ ಕೆರೆ ಹಬ್ಬಕ್ಕಾಗಿ ಪ್ರತಿಷ್ಠಾನ ಶಾಲೆ, ಕಾಲೇಜುಗಳು ಮತ್ತು ಸ್ಥಳೀಯ ಸರಕಾರಿ ಸಂಸ್ಥೆಯೊಂದಿಗೆ ಕೈ ಜೋಡಿಸಿವೆ.
ಕೈಕೊಂಡ್ರಹಳ್ಳಿ ಕೆರೆ: ಗೋದ್ರೇಜ್ ಕಂಪನಿಗೆ ನೀಡಿದ್ದ ಅನುಮತಿ ರದ್ದು
ತಮ್ಮ ಸುತ್ತಮುತ್ತಲಿರುವ ಕೆರೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಗೆ ಅವರೂ ಮುಂದಾಗುವಂತೆ ಪ್ರೇರೇಪಿಸುವುದು ಮಕ್ಕಳ ಕೆರೆ ಹಬ್ಬದ ಉದ್ದೇಶವಾಗಿದೆ. 2020ರ ಫೆಬ್ರುವರಿಯಿಂದ ವರ್ಷದ ಅಂತ್ಯದೊಳಗೆ ಹತ್ತು ಕೆರೆಗಳಲ್ಲಿ ಮಕ್ಕಳ ಕೆರೆ ಹಬ್ಬ ನಡೆಸಲು ನಮ್ಮ ಬೆಂಗಳೂರು ಪ್ರತಿಷ್ಠಾನ ಯೋಜಿಸಿದೆ.
ಮಕ್ಕಳ ಕೆರೆ ಹಬ್ಬ
ಇದಕ್ಕಾಗಿ ಗುರುತಿಸಲಾದ ಕೆರೆಗಳಲ್ಲಿ ಮೊದಲನೆಯದಾಗಿ ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ ನಡೆಯಲಿದೆ. ಕೆರೆಯ ಸುತ್ತ ನಡಿಗೆ, ಚಿತ್ರಕಲೆ ಸ್ಪರ್ಧೆ, ಸಸಿ ನೆಡುವುದು, ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಿ ಆ ಕೆರೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಕೆರೆಯ ಸಂರಕ್ಷಣೆ
ಈ ಚಟುವಟಿಕೆಗಳು ಸುತ್ತಮುತ್ತಲಿನ ಮಕ್ಕಳನ್ನು ಕೆರೆ ಆವರಣಕ್ಕೆ ತರುವುದಷ್ಟೇ ಅಲ್ಲದೇ ಕೆರೆಯ ಸಂರಕ್ಷಣೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನೂ ಖಚಿತಪಡಿಸುತ್ತದೆ. ಕೆರೆಯ ಪರಂಪರೆ, ಸಮುದಾಯದಲ್ಲಿ ಅವುಗಳಿಗಿರುವ ಪಾತ್ರ, ಕೆರೆ ಪುನರುಜ್ಜೀವನದಿಂದ ಆಗುವ ಪ್ರಯೋಜನಗಳು ಇತ್ಯಾದಿ ಕುರಿತು ಹಬ್ಬ ತಿಳಿವಳಿಕೆ ನೀಡುತ್ತದೆ.
ಮೈದುಂಬಿದ ಬಾಗಲೂರು ಕೆರೆ; ಕಣ್ಮನ ಸೆಳೆಯುವ ಚಿತ್ರಗಳು
ಕೆರೆಯ ಸಂರಕ್ಷಣೆಗೆ ಜನಾಂದೋಲನ
ಕೆರೆ ಸುತ್ತಮುತ್ತಲಿನ ನಿವಾಸಿಗಳು ಮತ್ತು ತಜ್ಞರೂ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದು, ಸಮುದಾಯ ಪಾಲ್ಗೊಳ್ಳುವಿಕೆಯನ್ನು ಅದರ ನಿಜಾರ್ಥದಲ್ಲಿ ಹಬ್ಬ ಸಾದರಪಡಿಸುತ್ತದೆ. ಬೆಂಗಳೂರಿನ ಜೀವನಾಡಿಗಳಾಗಿರುವ ಕೆರೆಯ ಸಂರಕ್ಷಣೆಗೆ ಜನಾಂದೋಲನವನ್ನು ಇದು ಹುಟ್ಟುಹಾಕಲಿದೆ.
ಸಂರಕ್ಷಿಸಿ ಪೋಷಿಸಬೇಕಾದ ತುರ್ತು ಅಗತ್ಯ
ಈ ವೇಳೆ ನಮ್ಮ ಬೆಂಗಳೂರು ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ಮಾತನಾಡಿ ""ಇಂದು ಬೆಂಗಳೂರಿನ ಕೆರೆಗಳು ತಾಜ್ಯ ಸುರಿಯಲು, ಕೊಳಚೆ ನೀರು ಹರಿಸಲು, ಒತ್ತುವರಿ ಮಾಡಲು, ಕಳಪೆ ನಿರ್ವಹಣೆ ಇತ್ಯಾದಿ ನಕಾರಾತ್ಮಕ ಕಾರಣಗಳಿಗೇ ಸುದ್ದಿ ಮಾಡುತ್ತಿವೆ. ಕೆರೆಗಳ ದುಸ್ಥಿತಿ ನಮ್ಮ ಆರೋಗ್ಯದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತಿದ್ದು, ಅವುಗಳನ್ನು ಸಂರಕ್ಷಿಸಿ ಪೋಷಿಸಬೇಕಾದ ತುರ್ತು ಅಗತ್ಯವಿದೆ'' ಎಂದರು.