ವಿಧಾನ ಸೌಧ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ವಿಗ್ರಹ ಸ್ಥಾಪನೆ
ಬೆಂಗಳೂರು, ಜುಲೈ 27: ವಿಧಾನ ಸೌಧದ ಪಶ್ಚಿಮ ದ್ವಾರದ ಬಲಭಾಗದಲ್ಲಿರುವ ರಾಕ್ ಗಾರ್ಡನ್ ನಲ್ಲಿ ಆದಿ ಮಹರ್ಷಿ ವಾಲ್ಮೀಕಿ ತಪೋವನ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.
"ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ತಪೋವನ ಮತ್ತು ಪುಥ್ಥಳಿ ನಿರ್ಮಾಣವಾಗಲಿದೆ. ಇನ್ನು ಒಂದುವರೆ ತಿಂಗಳಲ್ಲಿ ವಿಗ್ರಹ ಅನಾವರಣ ಮಾಡಲಾಗುವುದು," ಎಂದು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಸಮಿತಿ ಅಧ್ಯಕ್ಷ ವಿ.ಎಸ್ ಉಗ್ರಪ್ಪ ತಿಳಿಸಿದ್ದಾರೆ.

"ಪುಥ್ಥಳಿ ಸುತ್ತಲೂ ಉದ್ಯಾನ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆಯಿಂದ 30 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಸೀತೆ, ಲವ-ಕುಶ ಹಾಗೂ ಕೆಲವು ಪ್ರಾಣಿ-ಪಕ್ಷಿಗಳ ಪ್ರತಿಕೃತಿಯನ್ನು ಇಲ್ಲಿ ಅಳವಡಿಸುವಂತೆ ತೋಟಗಾರಿಕೆ ಇಲಾಖೆಗೆ ಸೂಚಿಸಲಾಗಿದೆ. ವಾಲ್ಮೀಕಿ ಜನಾಂಗದವರು 50 ಲಕ್ಷ ರೂ. ವೆಚ್ಚದಲ್ಲಿ 25 ಟನ್ ತೂಕದ 12 ಅಡಿ ಎತ್ತರದ ಕಪ್ಪು ಶಿಲೆ ವಿಗ್ರಹವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೆತ್ತಿಸಿದ್ದಾರೆ," ಎಂದು ಅವರು ಮಾಹಿತಿ ನೀಡಿದ್ದಾರೆ.
ಈಗಾಗಲೇ ವಾಲ್ಮೀಕಿ ಪುತ್ಥಳಿ ಬೆಂಗಳೂರಿಗೆ ಆಗಮಿಸಿದ್ದು, ಇನ್ನೇನು ಪೀಠದ ಮೇಲೆ ವಿಗ್ರಹ ಸ್ಥಾಪನೆ ಕೆಲಸ ಆರಂಭವಾಗಲಿದೆ. ಒಂದುವರೆ ತಿಂಗಳಲ್ಲಿ ವಿಗ್ರಹ ಅನಾವರಣ ಮಾಡುವ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ.
ಮುಖ್ಯಮಂತ್ರಿಗಳೇ ಮಹರ್ಷಿ ವಾಲ್ಮೀಕಿ ಪುಥ್ಥಳಿಯನ್ನು ಅನಾವರಣ ಮಾಡಲಿದ್ದಾರೆ ಎಂದು ಉಗ್ರಪ್ಪ ಮಾಹಿತಿ ನೀಡಿದ್ದಾರೆ.












Click it and Unblock the Notifications