Mahakumbh Mela 2025: ಬೆಂಗಳೂರು-ಪ್ರಯಾಗ್ರಾಜ್ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಜನವರಿ 07: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ-2025ರ ತಯಾರಿ ನಡೆಯುತ್ತಿದೆ. ಸುಮಾರು 40 ಲಕ್ಷ ಜನರು ಜನವರಿ 13 ರಿಂದ ಫೆಬ್ರುವರಿ 26ರ ತನಕ ನಡೆಯಲಿರುವ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಾರತೀಯ ರೈಲ್ವೆ ಮಹಾ ಕುಂಭಮೇಳಕ್ಕೆ ಆಗಮಿಸುವ ಭಕ್ತರಿಗಾಗಿಯೇ ಹಲವು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಬೆಂಗಳೂರು ನಗರದಿಂದ ಸಹ ವಿಶೇಷ ರೈಲು ಘೋಷಣೆ ಮಾಡಲಾಗಿದೆ.
ನೈಋತ್ಯ ರೈಲ್ವೆ ಬೆಂಗಳೂರು-ಪ್ರಯಾಗ್ರಾಜ್ ಏಕಮುಖ ಕುಂಭಮೇಳ ಎಕ್ಸ್ಪ್ರೆಸ್ ವಿಶೇಷ ರೈಲು ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ನಿಲ್ದಾಣಗಳ ಮಾಹಿತಿಯನ್ನು ನೀಡಿದೆ. ಉದ್ಯಾನ ನಗರಿ ಬೆಂಗಳೂರಿನಿಂದ ಮಹಾ ಕುಂಭಮೇಳ-2025ಕ್ಕೆ ತೆರಳುವ ಭಕ್ತರು ರೈಲು ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ಕುಂಭಮೇಳ 2025ರ ಸಂದರ್ಭದಲ್ಲಿ ಹೆಚ್ಚಿದ ಪ್ರಯಾಣಿಕರ ಬೇಡಿಕೆರ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ನೈಋತ್ತ ರೈಲ್ವೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ಮತ್ತು ಪ್ರಯಾಗ್ರಾಜ್ ನಿಲ್ದಾಣಗಳ ನಡುವೆ ಏಕಮಾರ್ಗದ ಕುಂಭ ಮೇಳ ವಿಶೇಷ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06577) ಓಡಿಸಲಿದೆ.
ರೈಲು ವೇಳಾಪಟ್ಟಿ, ನಿಲ್ದಾಣಗಳು: ರೈಲು ಸಂಖ್ಯೆ 06577 ಎಸ್ಎಂವಿಟಿ ಬೆಂಗಳೂರು-ಪ್ರಯಾಗ್ ರಾಜ್ ಏಕಮಾರ್ಗ ಕುಂಭಮೇಳ ವಿಶೇಷ ಎಕ್ಸ್ಪ್ರೆಸ್ ರೈಲು ಬುಧವಾರ 23:50 ಗಂಟೆಗೆ (ಜನವರಿ 8) ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಶುಕ್ರವಾರ 17:15 ಗಂಟೆಗೆ (ಜನವರಿ 10) ಪ್ರಯಾಗ್ ರಾಜ್ ತಲುಪಲಿದೆ.
ಈ ರೈಲು ವೈಟ್ಫೀಲ್ಡ್, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ, ಪೆರಂಬೂರು, ಗುಡೂರು, ವಿಜಯವಾಡ, ವಾರಂಗಲ್, ಬಲ್ಲರ್ಷಾ, ಚಂದ್ರಾಪುರ, ಸೇವಾಗ್ರಾಮ್, ನಾಗ್ಪುರ, ಇಟಾರ್ಸಿ, ಜಬಲ್ಪುರ್, ಸಾತ್ನಾ ಮತ್ತು ಮಾಣಕ್ಪುರ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ರೈಲು 14 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 4 ಸ್ಲಿಪರ್ ಬೋಗಿಗಳು ಮತ್ತು 2 ಲಗೇಜ್ ಕಂ ಬ್ರೇಕ್ ವ್ಯಾನ್ಗಳು ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ವೆಬ್ಸೈಟ್ www.enquiry.indianrail.gov.inಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡಿ.
ಬೆಂಗಳೂರು ಮಾತ್ರವಲ್ಲ ಕರ್ನಾಟಕದಲ್ಲಿ ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿಯಿಂದ ಪ್ರಯಾಗ್ರಾಜ್ಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಮಾನ್ಯ ರೈಲುಗಳು, ಭಾರತ್ ಗೌರವ್ ರೈಲುಗಳ ವ್ಯವಸ್ಥೆಯನ್ನು ಸಹ ದೇಶದ ವಿವಿಧ ನಗರಗಳಿಂದ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಾ ಕುಂಭಮೇಳಕ್ಕೆ ಸಾವಿರಾರು ಭಕ್ತರು ಸಂಚಾರ ನಡೆಸುವ ನಿರೀಕ್ಷೆ ಇದ್ದು, ಅವರಿಗೆ ಈ ರೈಲುಗಳ ವ್ಯವಸ್ಥೆ ಸಹಾಯಕವಾಗಿದೆ.
ಕೆಲವು ದಿನಗಳ ಹಿಂದೆ ಮಹಾ ಕುಂಭಮೇಳ-2025ಕ್ಕೆ ರೈಲಿನಲ್ಲಿ ಸಾಗುವವರಿಗೆ ಉಚಿತ ಪ್ರಯಾಣ ಸೌಲಭ್ಯವಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಯಾವುದೇ ರೀತಿಯ ಉಚಿತ ಪ್ರಯಾಣ ಸೌಲಭ್ಯಗಳು ಇರುವುದಿಲ್ಲ. ಟಿಕೆಟ್ ಪಡೆದು ಪ್ರಯಾಣಿಸಬೇಕು, ಟಿಕೆಟ್ ಇಲ್ಲದ ಪ್ರಯಾಣ ಅಪರಾಧ ಎಂದು ಅಧಿಕಾರಿಗಳು ಹೇಳಿದ್ದರು.












Click it and Unblock the Notifications