ಮಹದಾಯಿ: ಮಾತು ಬದಲಿಸಿದ ಬಿಎಸ್ ವೈ, ಹೋರಾಟಗಾರರ ಮುಂದಿನ ನಡೆಗಳೇನು?
ಬೆಂಗಳೂರು, ಡಿಸೆಂಬರ್ 26: ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿ ಎದುರು ಮಹದಾಯಿ ರೈತರು ನಡೆಸುತ್ತಿರುವ ಆಹೋರಾತ್ರಿ ಧರಣಿಯ 4ನೇ ದಿನದಂದು ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೊನೆಗೂ ಭೇಟಿ ನೀಡಿ ಮಾತುಕತೆ ನಡೆಸಿದರು.
ಮಹದಾಯಿ ನೀರಿನ ಚಿಂತೆ ಬಿಟ್ಟುಬಿಡಿ ಎಂದಿದ್ದ ಬಿಎಸ್ವೈ ಈಗ ಯು ಟರ್ನ್
ಯಡಿಯೂರಪ್ಪ ಅವರು ರೈತರ ಮನವೊಲಿಕೆಗೆ ಯತ್ನಿಸಿದರು. ಆದರೆ, ಇದಕೆಲ್ಲ ಪ್ರತಿಭಟನೆಕಾರರು ಕ್ಯಾರೆ ಎನ್ನಲಿಲ್ಲ. ಇದರಿಂದ ಬಿಎಸ್ ವೈ ಹಾಗೂ ರೈತರ ನಡುವಿನ ಸಂಧಾನ ವಿಫಲವಾಗಿದ್ದು, ಅಲ್ಲಿಂದ ಯಡಿಯೂರಪ್ಪ ಕಾಲ್ಕಿತ್ತರು.
ನೀರಿನ ಚಿಂತೆ ಬಿಡಿ, ನಾನು ಜಗದೀಶ್ ಶೆಟ್ಟರ್ ಸೇರಿ ನೀರು ತಂದೆ ತರುತ್ತೇವೆ ಎಂದು ಹೇಳಿದ್ದರು. ಆದರೆ, ಇದೀಗ ನನ್ನಿಂದ ಆದ ಪ್ರಯತ್ನ ಮಾಡಿದ್ದೇನೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ಮಾಡಬೇಕು ಎಂದು ಅಸಡ್ಡೆ ಮಾತುಗಳನ್ನು ಹೇಳುವ ಮೂಲಕ ಕೊಟ್ಟ ಮಾತಿಗೆ ತಪ್ಪಿದರು. ಇದರಿಂದ ಕೆರಳಿದ ಪ್ರತಿಭಟನಕಾರರು ಬಿಎಸ್ ವೈ ಇಷ್ಟು ಹೇಳೋಕೆ ನಾಲ್ಕು ದಿನ ಬೇಕಿತ್ತಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ. 27ರ ಉತ್ತರ ಕರ್ನಾಟಕ ಬಂದ್, ಏನಿರುತ್ತೆ? ಏನಿರಲ್ಲ?
ಬಳಿಕ ಮಹದಾಯಿ ಹೋರಾಟ ಸಮಿತಿಯು ಮುಂದಿನ ಪ್ರತಿಭಟನೆ ಬಗ್ಗೆ ಸಭೆ ನಡೆಸಿ ಹಲವು ತೀರ್ಮಾನಕ್ಕೆ ಬಂದಿದ್ದು, ಆ ತೀರ್ಮಾನಗಳು ಈ ಕೆಳಗಿನಂತಿವೆ.
ಪಾದಯಾತ್ರೆ ಮೂಲಕ ರಾಜ್ಯಭವನಕ್ಕೆ
ಮಧ್ಯಾಹ್ನದ ವರೆಗೆ ಪ್ರತಿಭಟನೆ ಬಿಜೆಪಿ ಕಚೇರಿ ಮುಂದೆ ಮುಂದುವರಿಯಲಿದ್ದು, ಬಳಿಕ ಪಾದಯಾತ್ರೆ ಮೂಲಕ ರಾಜ್ಯಪಾಲರ ಬೇಟಿಗೆ ರಾಜ್ಯಭವನಕ್ಕೆ ತೆರಳಲಿದ್ದೇವೆ ಎಂದು ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವಿರೇಶ್ ಸೊಬರದಮಠ ಹೇಳಿದರು.
ರಾಜಭವನವದಿಂದ ಚುನಾವಣಾ ಕಚೇರಿಗೆ
ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಅಲ್ಲಿಂದ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮಹದಾಯಿ ಸಮಸ್ಯೆ ಬಗೆಹರಿಯುವವರೆಗೂ ಚುನಾವಣೆ ಘೋಷಣೆ ಮಾಡದಂತೆ ಮನವಿ ಮಾಡವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ
ಚುನಾವಣಾ ಕಚೇರಿ ಬಳಿಕ ಮಹದಾಯಿ ಹೋರಾಟಗಾರರು ಪಾದಯಾತ್ರೆ ಮೂಲಕವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಲಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನಿವಾಸಕ್ಕೆ
ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ ಅಲ್ಲಿಂದ ಮಹದಾಯಿ ಹೋರಾಟಗಾರರು ಪಾದಯಾತ್ರೆ ಮೂಲಕವೇ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಮನೆಗೆ ತೆರಳಿ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.
ಇವೆಲ್ಲವುಗಳ ಬಳಿಕ ಅಂತಿಮ ತೀರ್ಮಾನ
ಇವೆಲ್ಲವುಗಳ ಬಳಿಕ ಹಲವರ ಜೊತೆ ಮಾತುಕತೆ ನಡೆಸಿ ಮುಂದಿನ ಹೋರಾಟದ ನಡೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ತಿಳಿಸಿದರು.