ಮಹಾ ಬೋಧಿ ಸೊಸೈಟಿ ಸಂಸ್ಥಾಪಕ ವಿಧಿವಶ

ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸತತ 57 ವರ್ಷಗಳ ಕಾಲ ಅವಿರತವಾಗಿ ಸೇವೆ ಸಲ್ಲಿಸಿದ್ದ ಆಚಾರ್ಯ ಅವರು ಅಪಾರ ಭಕ್ತ ಸಮೂಹವನ್ನು ಅಗಲಿದ್ದಾರೆ.
1922ರಲ್ಲಿ ಮಣಿಪುರದ ರಾಜ್ಯದಲ್ಲಿ ಜನಿಸಿದ ಆಚಾರ್ಯ ಅವರು ಕೋಲ್ಕತ್ತಾದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ರಕ್ಷಣಾ ಇಲಾಖೆಯ ಆರ್ಡಿನೆನ್ಸ್ ವಿಭಾಗದಲ್ಲಿ ಕರ್ತವ್ಯ ಸಲ್ಲಿಸಿದ್ದ್ದರು. 1948ರಲ್ಲಿ ಕುಶಿನಗರದ ಪೂಜ್ಯ ಮಣಿ ತೇರ(ಡಾ. ಅಂಬೇಡ್ಕರ್ ಅವರಿಗೆ ದೀಕ್ಷೆ ನೀಡಿದ್ದವರು) ಹಾಗೂ ಬರ್ಮಾದ ಪ್ರಸಿದ್ಧ ಬೌದ್ಧ ಗುರುಗಳಿಂದ ಮಾರ್ಗದರ್ಶನ ಪಡೆದು, 1952ರಿಂದ 54ರವರೆಗೆ ರಂಗೂನ್ ನಲ್ಲಿ ನಡೆದ ಬುದ್ಧ ಶಾಸನ ಸಮ್ಮೇಳನದಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.
ನಂತರ ನಳಂದ ಪೋಸ್ಟ್ ಗ್ರಾಜುಯೇಟ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಬೆಂಗಳೂರಿಗೆ ಬಂದ ಬಂತೇಜಿ, 1956ರಲ್ಲಿ ಮಹಾಬೋಧಿ ಸಂಸ್ಥೆಯ ನೇತೃತ್ವವನ್ನು ವಹಿಸಿಕೊಂಡು, ತನ್ನ ಇಡೀ ಜೀವನವನ್ನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ಮುಡುಪಿಟ್ಟಿದ್ದರು.
ಇದರ ಜೊತೆಗೆ ಬನ್ನೇರುಘಟ್ಟದ ಬಳಿ ಹಾಗೂ ಜಯನಗರ ಸಿದ್ದಾಪುರ ಬಳಿ ಆಸ್ಪತ್ರೆ ಸ್ಥಾಪಿಸಿ ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಜೊತೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಅವರು ಮಹಾಬೋಧಿ ಸುಟ್ಟ ಗಾಯಗಳ ಕೇಂದ್ರವನ್ನು ನಿರ್ಮಿಸಿದ್ದಾರೆ.
ಸಾಮಾಜಿಕ ಸಾಂಸ್ಕೃತಿಕ ಸೇವೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದ ಇವರು, 1972ರಿಂದ ‘ಧಮ್ಮ' ಮಾಸಿಕ ಪತ್ರಿಕೆ ಪ್ರಸಾರ ಹಾಗೂ 1956ರಿಂದ ಬುದ್ಧನ ತತ್ವ ಪ್ರಸಾರದಲ್ಲಿ ತೊಡಗಿಕೊಂಡಿದ್ದರು.ಸುಮಾರು 152 ಪುಸ್ತಕಗಳನ್ನು ರಚಿಸಿ ಪ್ರಕಾಶನ ಮಾಡಿದ್ದಾರೆ.
ಮೈಸೂರಿನ ಸರಸ್ವತಿಪುರಂನಲ್ಲಿ ಮಹಾಬೋಧಿ ಮೈತ್ರಿ ಮಂಡಳಿ ಸ್ಥಾಪಿಸಿ, ಧಮ್ಮ ಪ್ರಚಾರ ಕೈಗೊಂಡಿದ್ದರು. ಇವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ತುಮಕೂರು ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.
ದಸಂಸ ಸಂಚಾಲಕ ಅಣ್ಣಯ್ಯ ಬೆನ್ನಿಗಾನಹಳ್ಳಿ ರಾಮಚಂದ್ರ , ಎ.ಮಂಜು, ಆಂಜಿ, ದಸಂಸದ ಮಾವಳ್ಳಿ ಶಂಕರ್, ಪತ್ರಕರ್ತ ಇಂದೂಧರ ಹೊನ್ನಾಪುರ, ಪ್ರೊ.ಡಿ.ಗೋಪಾಲಕೃಷ್ಣ, ಸಿಬಿಎಸ್ಎಂ, ಸೆಂಟ್ರಲ್ ಕಾಲೇಜ್ನ ಕೆ.ಕುಮಾರ್ ಮುಂತಾದ ಹಲವರು ಮೃತರ ಅಂತಿಮ ದರ್ಶನ ಪಡೆದು ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.
ಪೂಜ್ಯರ ಅಪರ ಕಾರ್ಯಗಳನ್ನು ಬೌದ್ಧ ನಿಯಮಾನು ಸಾರ ಸೆ.27ರಂದು ನೆಲಮಂಗಲದ ಬಳಿ ಇರುವ ಆಲೂರಿನ ಮಹಾಬೋಧಿ ವಿಹಾರದಲ್ಲಿ ಬೆಳಗ್ಗೆ 11ರ ನಂತರ ನೆರವೇರಲಿದೆ. ಉಪಾಸಕರು ಹಾಗೂ ಅನುಯಾಯಿಗಳು ಈ ಸಮಯದಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಬಹುದು ಎಂದು ದಸಂಸದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ತಿಳಿಸಿದ್ದಾರೆ.












Click it and Unblock the Notifications