ಸರ್ಕಾರದ ಉಡುಗೊರೆಯನ್ನೇ ನಿರಾಕರಿಸಿದ್ದ ಪ್ರಾಮಾಣಿಕ ಮಧುಕರ್ ಶೆಟ್ಟಿ
ಬೆಂಗಳೂರು, ಡಿಸೆಂಬರ್, 29: ಸರ್ಕಾರ ಉಡುಗೊರೆಯಾಗಿ ಬಿಡಿಎ ನಿವೇಶನವನ್ನು ನೀಡಲು ಮುಂದಾಗಿದ್ದನ್ನೇ ನಿರಾಕರಿಸಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ.
ಅಧಿಕಾರಿಗಳ ಪ್ರಾಮಾಣಿಕತೆ ಹಾಗೂ ಧಕ್ಷತೆ ಕುರಿತು ಸಾಕಷ್ಟು ಓದಿರುತ್ತೀರಿ, ಆದರೆ ಹಲವಾರು ಜನ ಮೇಲ್ನೋಟಕ್ಕೆ ಮಾತ್ರ ಎರಡೂ ಅಂಶಗಳನ್ನು ಹೊಂದಿರುತ್ತಾರೆ, ಮಧುಕರ್ ಶೆಟ್ಟಿ ಅವರಿಗೆ ಸಂಬಂಧಿಸಿದಂತೆ ಧಕ್ಷತೆ ಹಾಗೂ ಪ್ರಾಮಾಣೀಕತೆ ಅಕ್ಷರಶಃ ಹೊಂದುವಂತದ್ದಾಗಿತ್ತು.
ತಮ್ಮ ಸೇವಾ ಅವಧಿಯಲ್ಲಿನ ಧಕ್ಷ ಹಾಗೂ ಪ್ರಾಮಾಣಿಕ ನಿಲುವುಗಳಿಂದ ಸಾಕಷ್ಟು ಭ್ರಷ್ಟರಿಗೆ ಕಂಟಕಪ್ರಾಯರಾಗಿದ್ದರು. ಯಾವ ಸರ್ಕಾರ ಸಚಿವರು ಅಥವಾ ಯಾರ ಮುಲಾಜಿಗೂ ಸಿಲುಕದೆ ಕೆಲಸ ಮಾಡುವುದು ಅವರ ಕಾರ್ಯಪ್ರವೃತ್ತಿಯಾಗಿತ್ತು. ಇದಕ್ಕೆ ಪೂರಕವಾಗಿ ಒಂದು ಉದಾಹರಣೆಯನ್ನು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ನೀಡಿದ್ದಾರೆ.

''ಲೋಕಾಯುಕ್ತ ಎಸ್ಪಿಯಾಗಿದ್ದಾಗ ಇವರ ಧಕ್ಷ ಸೇವೆ ಹಾಗೂ ತನಿಖಾ ವೈಖರಿಗಳನ್ನು ಮೆಚ್ಚಿ ರಾಜ್ಯ ಸರ್ಕಾರವು ಬಿಡಿಎನಲ್ಲಿ ನಿವೇಶನ ನೀಡಲು ಮುಂದಾಗಿತ್ತು, ಬೆಂಗಳೂರಿನಲ್ಲಿ ನಿವೇಶನಕ್ಕೆ ಚಿನ್ನದಂತಹ ಬೆಲೆ ಇದೆ. ಆದರೆ ಸರ್ಕಾರದ ಈ ಉಡುಗೊರೆಯನ್ನು ಮಧುಕರ್ ಶೆಟ್ಟಿ ನಯವಾಗಿ ತಿರಸ್ಕರಿಸಿದ್ದರು.
ಒಬ್ಬ ಐಪಿಎಸ್ ಅಧಿಕಾರಿಯಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಇದು ಸರ್ಕಾರ ನನಗೆ ಕೊಡುವ ಸಂಬಳಕ್ಕೆ ಮಾಡುವ ಕೆಲಸ ಈ ಕೆಲಸಕ್ಕಾಗಿ ನನಗೆ ನಿವೇಶನದ ಉಡುಗೊರೆ ಅಥವಾ ಇನ್ಯಾವುದೇ ರೀತಿಯ ಉಡುಗೊರೆಯ ಅಗತ್ಯವಿಲ್ಲ ಎನ್ನುವುದನ್ನು ಸರ್ಕಾರಕ್ಕೆ ತಿಳಿಸಿದ್ದರು'' ಎಂದು ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ನಾನು ಲೋಕಾಯುಕ್ತನಾಗಿದ್ದಾಗ ಅವರನ್ನು ಹತ್ತಿರದಿಂದ ನೋಡಿದ್ದೇನೆ, ಹೆಚ್ಚು ಮೃದು ಭಾಷಿಯಾಗಿದ್ದ ಇವರು ಯಾವ ವಿಚಾರದಲ್ಲಿಯೂ ರಾಜಿಯಾದವರಲ್ಲ, ಒಬ್ಬ ಸಚಿವ ಹಾಗೂ ಅವರ ಮಗನ ವಿರುದ್ಧ ಭೂಕಬಳಿಕೆ ಆರೋಪ ಬಂದಾಗ ಅದನ್ನು ದಿಟ್ಟವಾಗಿ ತನಿಖೆ ನಡೆಸಿ ಜೈಲಿಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದರು. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿದ್ದರು. ಇಂತಹ ಐಪಿಎಸ್ ಅಧಿಕಾರಿ ಸಿಗುವುದು ವಿರಳ ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯ ಪಡುತ್ತಾರೆ.












Click it and Unblock the Notifications